Monday, 9 December 2013

ಅವಸರವೇಕೆ.... 

ನೀನೆ ಬರೆದ ಚಿತ್ರಗಳಲ್ಲವೇನೋ ಗೆಳೆಯಾ 
ಈಗೇಕೆ ಮಾಡುತಿಹೆ ಅಳಿಸುವ ವ್ಯರ್ಥ ಪ್ರಯತ್ರ್ನವಾ 
ಬಣ್ಣ ತುಂಬುವಲ್ಲಿ ನೀನು ಸೋತರೆನಂತೆ ಉಳಿಯಲು ಬಿಡೋ 
ಕಪ್ಪು ಬಿಳುಪಿನ ಚಿತ್ರವಾಗಿ ಮನಸಿನಾ ಪಟದಲಿ

ಕನಸಿನಾ ಚಿತ್ರಗಳಿವು ಓರೆ ಕೋರೆ ಸಹಜ ಕಣೋ
ತಪ್ಪನೆತ್ತಿ ತೋರಿಸಲು ನಾನೇನು ಪ್ರವೀಣ ಚಿತ್ರ ಕಾರಳಲ್ಲ
ಅಸ್ವಾಧಿಸಲು ಬಿಡೊ ನನಗೆ
ಬರೆದ ಆ ಕೈಗಳ ಹಿಂದಿನಾ ಪ್ರೀತಿಯಾ

ಬಿಡಿಸಿಯಾದ ಚಿತ್ರಗಳ ನೆನೆದು ಕೊರಗಲೇ ಬೇಡ
ನಡೆಯುವಾಗ ಎಡವುದು ಸಹಜ ತಾನೆ
ತಪ್ಪು ಅರಿವಾದಲ್ಲಿ ಸಹನೆಯಲಿ ಕಾಯೊ
ತಿದ್ದುಪಡಿ ಸಾಧ್ಯ ಮುಂದೆ ನೀ ಬರೆವ ಚಿತ್ರದಲಿ

ಸಾಧ್ಯವಾದರೆ ಮುಂದೊಂದುದಿನ ಬಣ್ಣಗಳ ಬಳಿದು ಬಿಡು
ಓರೆಕೋರೆಗಳೆಲ್ಲಾ ಮುಚ್ಚಿ ಮೆರೆವುದಾಗ ನೋಡು
ಇಲ್ಲಿ ಬೆಲೆ ಬರೆ ಆಢ೦ಬರಕೆ ಇರುವಾಗ
ವ್ಯವಧಾನವಿಲ್ಲ ಆಲಿಸಲು ಬಣ್ಣದ ಹಿಂದಿನ ನಿನ್ನ ಮೂಕ ರೋದನವ

Saturday, 9 November 2013

ನೆನಪು 
ನಿನ್ನ ನೆನಪು ಕೈಬೀಸಿ ಕರೆವುದು 
ಏಕಾಂತದಲಿ ನಾ ಕುಳಿತಿರಲು 
ಹರುಷದೊನಲು ಉಕ್ಕಿಉಕ್ಕಿ 
ಧಮನಿಗಳಲಿ ಹರಿವುದು.

ನಿನ್ನ ಮುಖವು ತೇಲಿಬಂದು 
ಮಧುರನಗುವಲಿ ಸೆಳೆವುದು 
ಕಣ್ಗಳೆರಡು ತುಂಟತನದಿ 
ಏನೋ ಕೇಳುತಿರುವದು 

ನಿನ್ನ ಪಿಸು ಮಾತಿನಲೆಯ
ಗಾಳಿ ತಂದು ಉಲಿವುದು
ಮೂಡಿ ಮನದಿ ಮಧುರ ಕಂಪನ
ನಾಚಿಕೆ ಪೊರೆ ಹೊದೆವುದು.

Tuesday, 5 November 2013

ಮುಂಜಾವು..

ರವಿಯು ರಥದಿ ಏರಿ ಬರಲು 
ತೋಟದಲ್ಲ್ಲಿ ಹೂವು ನಗಲು 
ಬೃಂಗ ಗಾನ ಹಾಡುತಿರಲು 
ಕರ್ಣ ಪಾವನ 

ಮಂದ ಪವನ ಬೀಸುತಿರಲು 
ತರು ಲತೆಗಳು ನರ್ತಿಸಿರಲು 
ಸುಗಂಧವದು ಪಸರಿಸಿರಲು 
ಸ್ವರ್ಗ ಸಮಾನ

ರವಿಯ ಸ್ಪರ್ಶಕೆ ಇಳೆಯು ನಗಲು
ನಾಚಿದ ಕಪೋಲದಿ ರಂಗು ಏರಲು
ಭೂ ರಮೆಯು ನವ ವಧುವೇ ಆಗಲು
ಶೃಂಗಾರ ಮನ

Tuesday, 22 October 2013

ನಾ ನಿನ್ನ ಮರೆಯುವದಾದರೂ ಹೇಗೆ....

ಭಾನುವಾರ, ಅಂದೂ ಹೀಗೆ ಧಾರಾಕಾರ ಮಳೆ ಸುರಿಯುತ್ತಿತ್ತು. ನಾನಾಗ ಕಾಲೇಜ್ ಓದುತ್ತಿದ್ದೆ. ನಾನು ಆಡಿ ಓದಿ ಬೆಳೆದಿದ್ದು ಒಂದು ಪುಟ್ಟ ಹಳ್ಳಿಯಲ್ಲಿ. ಆಗ ನಮ್ಮೂರಿಗೆ ಬಸ್ಸಿನ ಸೌಕರ್ಯವಿರಲಿಲ್ಲ.ಕಾಲೇಜಿಗೆ  ಹೋಗಬೇಕೆಂದರೆ ಸುಮಾರು ೨ ಮೈಲಿ ನಡೆದುಹೋಗಿ ಬಸ್ಸು ಹಿಡಿದು ಹೋಗಬೇಕಿತ್ತು. ನಡೆದು ಹೋಗಲು ಕೂಡ ಸರಿಯಾದ ರಸ್ತೆ ಇರಲಿಲ್ಲ  ಬದಲಾಗಿ ಹಲವಾರು ಮನೆಯ ಅಂಗಳ,ತೋಟಗಳ ನಡುವೆ ನಡೆದು ಮುಂದೆ ಹೋದಾಗ ರಸ್ತೆ ಸಿಗುತ್ತಿತ್ತು. ಆ ರಸ್ತೆಯ ತುದಿಯಲ್ಲಿ ಒಂದು ಬಸ್ ನಿಲ್ದಾಣ. ಎಸ್ಟೋ ಸಲ ರಸ್ತೆ ಬುಡದಲ್ಲಿ ಇರುವಾಗಲೇ ಬಸ್ ಗಳು ದೂಳೆಬ್ಬಿಸಿ ಹೋಗುವದನ್ನು ಅಸಹಾಯಕತೆಯಿಂದ ನೋಡಬೇಕಿತ್ತು. ನಾವು ನಿಲ್ದಾಣದ ವರೆಗೆ ಓಡಿದರು ತಲುಪೋ ವೇಳೆಗೆ ಬಸ್ಸು ಹೊರಟು ಹೋಗಿರುತ್ತಿತ್ತು. ಕೆಲವು ಡ್ರೈವರ್ ಗಳು ಹುಡುಗಿಯರ ಕಿರುನಗುವಿಗೆ ಶರಣಾಗಿ ಬಸ್ಸನ್ನು ಎಲ್ಲಿ ಬೇಕಾದರೂ ನಿಲ್ಲಿಸುತ್ತಿದ್ದರು. ಇದು ಹುಡುಗಿಯರಿಗೆ ದೇವರು ಕೊಟ್ಟ ಒಂದು ವರ ಅನ್ನಬಹುದೇನೊ. ಬಸ್ಸು ತಪ್ಪಿದ ದಿನ  ನಿಲ್ದಾಣದಲ್ಲಿ ಕಾಯುವಾಗ ನಮ್ಮೆಲ್ಲರ (ಒಂದೇ ಕಡೆಯಿಂದ ಬರುವಹುಡುಗಿಯರು) ಸುದ್ದಿಗಳಲ್ಲಿ ಬಂದು ಹೋಗೋ ಹಿರೋ ಅಂದರೆ ಗಜಾನನ.

 ಗಜಾನನ... ನಾ ನಿನ್ನ ಮರೆಯುವದಾದರೂ ಹೇಗೆ. ಕಾಲೇಜ್ ಗೆ ಹೋಗುವ ದಾರಿಯಲ್ಲಿ ಸಿಗುವ ಅನೇಕ ಮನೆಗಳಲ್ಲಿ ಈ ಗಜಾನನ ನ ಮನೆಯೂ ಒಂದು.ಗಜಾನನ  ಹಾಲು ಬಿಳುಪಿನ ಗುಂಗುರು ಕೂದಲಿನ ಹುಣ್ಣಿಮೆ ಚಂದಿರನ ಮುಖದ,ಅರಳು ಹುರಿದಂತೆ ಮಾತನಾಡುವ ಉತ್ಸಾಹದ ಚಿಲುಮೆಯಂತಿರುವ ಮುದ್ದು ಹುಡುಗ. ಆಗ ಅವನಿಗೆ ೩-೪ ವರುಷವಾಗಿತ್ತು. ದಿನಾಲೂ ಕಾಲೇಜ್ ಗೆ ಹೋಗುವಾಗ ಅಕ್ಕ ಅಂತ ಕರೆಯುತ್ತ  ಓಡೋಡಿ ಹೊರ ಚಾವಡಿಗೆ ಬರುತ್ತಿದ್ದ.ನಾನಂತೂ ೫ ನಿಮಿಷ ನಿಂತು ಅವನನ್ನು ಮುದ್ದು ಮಾಡದೇ ಹೋಗುತ್ತಲೇ ಇರಲಿಲ್ಲ. ಎಲ್ಲ ಹುಡುಗಿಯರ ಕಥೆಯು ಇದೇ ಆಗಿತ್ತು. ಅಂತಃ ಒಂದು ಆಕರ್ಷಣೆ ಗಜಾನನನಲ್ಲಿತ್ತು . ಒಮ್ಮೊಮ್ಮೆ ಕಾಲೇಜ್ ಗೆ ಹೊರಡುವಾಗ ತಡವಾಗಿ ಮಾತನಾಡದೆ ಹೋದರೆ ಆ ದಿನವೆಲ್ಲ ಅದೇನೋ ಮಂಕು ಕವಿದಂತೆ ಅನಿಸುತ್ತಿತ್ತು. ಅವನೂ ಕೂಡ ತಿಂಡಿ ತಿನ್ನುತ್ತಿದ್ದರೂ ಬಿಟ್ಟು ಓಡಿ ಬರುತ್ತಿದ್ದ. ಮನೆಗೆ ತಿರುಗಿ ಬರುವಾಗಲೂ ಅದೇ ದಾರಿ ಬಸ್ಸು ತಡವಾಗಿ ಬಂದದಿನ ಪಾಪ ಕಾದು ಕಾದು ಚಾವಡಿಯಲ್ಲೇ ಮಲಗಿಬಿಡುತ್ತಿದ್ದ. ಒಂದು ದಿನ ಕಾಲೇಜ್ ಗೆ ಹೋಗದಿದ್ದರೆ ಮಾರನೇ ದಿನ ನಿನ್ನೆ ಯಾಕೆ ಕಾಲೇಜ್ ಗೆ ಹೋಗಿಲ್ಲ ಅಕ್ಕಾ ನಿನಗೆ ಟೀಚರ್ ಕೋಲಲ್ಲಿ ಹೊಡೆಯೋಲ್ಲವ ಅಂತ ತನ್ನ ಮುದ್ದು ಮಾತಿನಿಂದ ವಿಚಾರಿಸುತ್ತಿದ್ದ.ಹೀಗೆ ಸಾಗುತ್ತಿದ್ದವು ದಿನಗಳು.

ಇವನ ಚುರುಕುತನ, ಆಟ  ಆ ದೇವರಲ್ಲೂ  ಹೊಟ್ಟೆಕಿಚ್ಚು ಹುಟ್ಟಿಸಿತೋ ಏನೋ  ಅಬ್ಬಾ ಅಂದು ಅದೆಂತಹ ಭೀಕರ ಮಳೆ.ಹೊಳೆ ಹಳ್ಳಗಳೆಲ್ಲಾ ತುಂಬಿ ಹರಿಯುತ್ತಿದ್ದವು.ನೀರಿನಲ್ಲಿ ಆಟವಾಡುವದೆಂದರೆ ಗಜಾನನನಿಗೆ ಪಂಚ ಪ್ರಾಣ.ಮನೆಯವರ ಕಣ್ಣು ತಪ್ಪಿಸಿ ಮನೆಯ ಮುಂದಿನ ತೋಟದ ತುದಿಯಲ್ಲಿ ಹರಿಯುತ್ತಿದ್ದ ಹೊಳೆಯ ಬಳಿ ಆಟ ಆಡಲು ಹೋಗಿದ್ದ.ವರುಣನ ಆರ್ಭಟಕ್ಕೆ ತುಂಬಿಹರಿದ ಗಂಗೆ ಉತ್ಸಾಹದ ಚಿಲುಮೆಯಾಗಿದ್ದ ಗಜಾನನ ನನ್ನು ತನ್ನ ಮಡಿಲಿಗೆ ಸೆಳೆದುಕೊಂಡುಬಿಟ್ಟಳು. ಉರಿದು ಬೆಳಗಬೇಕಿದ್ದ ದೀಪ ಕುಡಿಯಲ್ಲೆ ಕಮರಿತ್ತು.ಅಪ್ಪ ಅಮ್ಮನ ಮುದ್ದಿನ ಒಬ್ಬನೇ ಮಗನಾಗಿದ್ದ ಗಜಾನನ ನ ಪಾಲಿಗೆ ಆ ವಿಧಿ ಕ್ರೌರ್ಯ ಮೆರೆದಿತ್ತು. ಮಗನಿಂದ ಬೆಳಕಾಗಬೇಕಿದ್ದ ತಾಯಿ ತಂದೆಯರ ಬಾಳು ಕತ್ತಲಲ್ಲಿ ಬಿಕ್ಕಳಿಸಿತ್ತು. ಎಲ್ಲರ ಮನದಲ್ಲಿ ನೋವಿನ ಮೌನವನ್ನು ಹೆಪ್ಪುಗಟ್ಟಿಸಿ ತಾನು ಮಾತ್ರ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದ ಗಜಾನನ.
ಅಂದಿನಿಂದ ಅದೇನೋ ಈ ಭೀಕರ ಮಳೆ ನನ್ನ ಹೃದಯದಲ್ಲಿ ನೋವಿನ ಸಿಂಚನ ಗೈಯ್ಯುತ್ತಿದೆ . ಮನದಲ್ಲಿ  ಹೆಪ್ಪುಗಟ್ಟಿದ ನೋವು ಮೋಡದಂತೆ ಕರಗಿ ಗಂಗೆಯಾಗಿ ಕಣ್ಣಲ್ಲಿ ಪ್ರವಹಿಸಿದರೂ ಆ ನಿನ್ನ ನೆನಪು ಮತ್ತೆ ಮತ್ತೆ ಮೊಳಕೆಯೊಡೆವ ಹುಲ್ಲಿನಂತೆ ಮನದಲ್ಲಿ ಚಿಗುರಿ ನಿಲ್ಲುತ್ತವೆಯಲ್ಲೋ ಓ ಮುದ್ದು  
 ಗಜಾನನ... ನಾ ನಿನ್ನ ಮರೆಯುವದಾದರೂ ಹೇಗೆ.

Wednesday, 28 August 2013

ಹೀಗೇಕೆ ...

ನೇರ ಸರಳತೆಯಲಿ ಬದುಕಬೇಕೆನ್ನುವ ಮನಕೆ
ಬಲವಂತದಾ ಮುಖವಾಡ
ತರುವದದೆಷ್ಟು ಕಷ್ಟ..

ಕಿತ್ತೊಗೆಯ ಬೇಕೆನ್ನುವ ಹಠ ಒಂದೆಡೆ
ತೆಗೆದರಾಗುವ ಅನಾಹುತಕೆ
ಭಯದ  ಹುತ್ತ ಮತ್ತೊಂದೆಡೆ

ರೋಷದ ತುಡಿತದಲಿ ಕೈ ಮುಂದೆ ನುಗ್ಗುತಿರೆ
ವಿವೆಕತೆಯ ಪಾಠ ನಡುಗಿಸಿ ತಳ್ಳುತಿದೆ ಹಿಂದೆ
ಗಹಗಹಿಸಿದೆ ಅಸಹಾಯಕ ಅಂತರಾತ್ಮ

ಈ ನ್ಯಾಯ ಹೆಣ್ಣಿಗೊಂದೇ ಏಕೆ, ಆಧುನಿಕ ಯೋಚನಾಲಹರಿ
ಹೆಣ್ಣು ಎಷ್ಟೇ ಮೆರೆದರೂ ಅವಳಬಲೆ ಅನ್ನೋ ಪುರಾತನ ತತ್ವ
ದ್ವಂದ್ವದಾ ಮನಸಿನಲಿ ಸರಿತಪ್ಪುಗಳ ತರ್ಕ

ಹೆಜ್ಜೆ ಮುಂದಿಟ್ಟರೆ ಹೆಮ್ಮಾರಿಪಟ್ಟ ಹಿಂದಿಡಲು ತಡೆವಾ  ಸ್ವಾಭಿಮಾನದ ಕಟ್ಟ
ಮುಂದೆಸಾಗದ,ಹಿಂತಿರುಗದ ಒಂಟಿಕಾಲಿನ ಪಯಣ
ಸೆಳೆದೊಯ್ಯಬಹುದೇ ಆಧ್ಯಾತ್ಮದ ಕಡೆಗೆ..

Tuesday, 13 August 2013

ಹೀಗೊಂದು ಮನವಿ (ನಲ್ಲನಿಗೆ)
ಈ ಲೋಕದಲಿ ಎಲ್ಲದಕೂ
ಅಡೆತಡೆಯಾದರೇನಂತೆ ನಲ್ಲ
ಕನಸಿನ ರಾಜ್ಯದಲಿ
ಇದಾವುದೂ ಇರುವದೇ ಇಲ್ಲ
ನೀ ಬಯಸಿದರೆ ಹೋಗಬಹುದು ಯೌವನಕೆ
ನಾನೂ ಬರಬಹುದು ನಾಚುತ್ತ ನಿನ ಸನಿಹಕೆ
ಇಲ್ಲಾದರುಂಟು ಬದುಕಿನ ಹಲವುಹತ್ತು ಅನಿವಾರ್ಯತೆಯ ನಂಟು
ಅಲ್ಲಾದರೆ ಕರೆದರಷ್ಟೇ ಬಂದುಹೋಗುವವರುಂಟು
ಮತ್ತೇಕೆ ತಡ ಬದುಕೋಣ ಕನಸಲ್ಲಿ ಸ್ವಲ್ಪವಾದರೂ ಸಮಯ
ಸವಿದುಬಿಡೋಣ ಅಲ್ಲಲ್ಲಿ ತಪ್ಪಿ ಕಾಡುವ ರಸಘಳಿಗೆಯ ಕ್ಷಣ 

Friday, 26 July 2013

ನೀನಿಲ್ಲದ ಆ.... ದಿನ ...

ರವಿಯು ಬಾನಲಿ ಜಾರುತಿರಲು 
ನಿಶೆಯು ತಾನು ತೆವಳುತಿರಲು 
ಬಾಡಿ ಮುದುಡಿದ ನೊಂದ ಮನಕೆ 
ನಿನ್ನ ಕರೆಯೇ ಮನದಿ ಬೆಳಗೊ ನಂದಾದೀಪವು

ಶಶಿಯು ನಭದಿ ನಗುತಲಿರಲು 
ಇರುಳಲಿ ಚಲ್ಲೆ ಬೆಳದಿಂಗಳ ಹಾಲು
ಏಕಾಂತದಿ ನಿಂತು ಮೊರೆವ ಹೃದಯಕೆ 
ನಿನ್ನ ಸಂದೇಶ ತಂತು ಪ್ರೇಮದಾ ಹೊನಲು

ಇಳೆಯ ಮಳೆಯ ಸರಸದಲ್ಲಿ
ಜಗವೆ ನಡುಗಿರೆ ಕೊರೆವ ಚಳಿಗೆ
ಹೆದರಿ ನಡುಗಿ ಬಡಿವ ಹೃದಯಕೆ
ನಿನ್ನ ನೆನಪೆ ಕಂಬಳಿಯಾಯ್ತು ಬೆಚ್ಚಗಿರಿಸಲು ಲಾಲಿ ಹಾಡಲು.

Sunday, 14 July 2013

ಮೇಲು ಕೀಳು

ಮೇಲು ಕೀಳೆಂಬ ಜಾತಿ ನೀತಿ
ಹಣಕ್ಯಾಕಿಲ್ಲ ಜಗದಲ್ಲಿ
ಕೀಳ್ಜಾತಿಯವ ಅಸ್ಪ್ರಶ್ಯನಾದರೆ
ಅವ ಮುಟ್ಟಿದ ಹಣಕ್ಕಿಲ್ಲವೇ ಈ ನೀತಿ

ಕೆಳವರ್ಗದವ ನಿಲ್ಲಬೇಕು
ಹೊಸ್ತಿಲಿಂದ ಹೊರಗೆ
ಅದೇ ಅವ ಕೊಟ್ಟ ಹಣ ಮಾತ್ರ
ಬರಬಹುದೇ ಒಳಗೆ

ಕಿಳ್ಜಾತಿಯ ಒಳ ಬಂದರೆ
ಆಗುವದವಗೆ  ಕಪಾಳ ಮೋಕ್ಷ
ಅವ ತಂದ ಹಣವಾದರೆ
ಅದುವೇ ಲಕ್ಷ್ಮೀ ಕಟಾಕ್ಷ

ಮೇಲ್ಜಾತಿ ಕೀಳ್ಜಾತಿ ಎನ್ನುವಾ
ಬೇದವೇಕೆ ಹುಟ್ಟಿನಲ್ಲಿ 
ಬುದ್ಧಿ
ನಡತೆಯಲಿ ಉತ್ತಮನೆ
ಮೇಲ್ಜಾತಿ ಯಲ್ಲವೇ

ಎಲ್ಲರ ಮೈಯಲ್ಲೂ ಹರಿವುದೊಂದೇ
ಕೆಂಪುರಕ್ತ
ಇದನರಿತ ಒಗ್ಗಟ್ಟಿನ ಬಾಳ್ವೆಯೇ
ಜಗದಲ್ಲಿ ಸೂಕ್ತ.

Friday, 12 July 2013


ನಿವೇದನೆ

ನಿನ್ನ ಕಾಣುವ ತವಕಕೆ
ನನ್ನ ಮನ ಮೇಳೈಸಿರಲು
ಕಂಡರೆಲ್ಲಿ ಸೋಲುವೆನೆಂಬ ಭಯ
ನನ್ನ ಹೃದಯವ ಕಾಡಿಹುದು

ಬಿಟ್ಟೋಡಲು ನಾ ದೂರ ದೂರ
ತಿರುಗಿ ನೋಡುವದದು
ಆಸೆಯಲಿ ಹುಚ್ಚು ಮನ
ಆಲಿಸಲು ನಿನ್ನ ಕರೆಯ ಮೊರೆಯ

ಮರೆಯ ಬೇಕೆನ್ನುವದುನಿರ್ಧಾರ
ಆದರಲ್ಲಿಯೂ ನಿನ್ನದೇ ಕಾರುಭಾರ
ಅಂತೂ ಗೆದ್ದೆನೆಂಬ ಸಮಯದಲಿ
ನಗುವದದು ನಿನ್ನ ಮುಖ ನೇತ್ರದಾಳದಲಿ

ಸೋಲೊಪ್ಪದಾ ಮನಕೆ ಗೆಲುವು ಮರಿಚಿಕೆಯಾಗೆ
ಹೊಂದಾಣಿಕೆಯೊಂದೇ ಉಳಿವ ದಾರಿ
ನೀನಲ್ಲೇ ಇರು ನಾನಿಲ್ಲೇ ಇರುವೆ
ಅರಳಿ ನಗುತಿರಲೆಂದು ಶುಭ್ರತೆಯ ಸ್ನೇಹದಾ ಹೂವು

Wednesday, 3 July 2013

ಬದುಕು..

ಬದುಕು..
ಹಾಯಿ ದೋಣಿಲಿ ಕುಳಿತ 
ನಿನದೆತ್ತಣಾ ಪಯಣ 
ಗಾಳಿ ಬಂದಕಡೆ ಸಾಗು 
ವ್ಯರ್ಥವದು ವಿಲೋಮ ಯತ್ನ

ಜೀವ(ನ)ದ ಗೆಳೆಯನಿಗೆ...

ಜೀವ(ನ)ದ ಗೆಳೆಯನಿಗೆ...

ಇಲ್ಲಿ ನನದೇನಿಲ್ಲ ಗೆಳೆಯಾ 
ಎಲ್ಲವೂ ನಿನ್ನದೆ
ನೀ ಕಲಿಸಿದ್ದೆ ..

ನಿನ್ನದು ಆಮೆಯಾ ವೇಗ 
ನಾನಾದರೋ ಸುನಾಮಿ
ವ್ಯತ್ಯಾಸವಿಷ್ಟೇ
ನೀ...ತಡೆಯಬೇಕಷ್ಟೆ 

ನಿನ್ನಿತು ಕೋಪ, ನನ್ನಲ್ಲಿ ಜ್ವಾಲಾಮುಖಿ
ನಿನ್ನ ಹನಿ ಕಾಳಜಿ ,ನನ್ನಲ್ಲಿ ಸಾಗರ
ನಿನ್ನ ಚೂರು ಕರುಣೆ, ನಾನು ಮಮತಾಮಯಿ
ನಿನ್ನ ಹಿಡಿ ಪ್ರೀತಿಗೆ , ನನ್ನದೆಲ್ಲವೂ ಸಮರ್ಪಣೆ

ಚಿಂತಿಸದಿರು ಗೆಳೆಯಾ ಬದಲಾವಣೆ ಹಾದಿಯಾ
ನಿನ್ನೊಲವಿಗುಂಟು ಆ ಶಕ್ತಿ ಎಂಬುದನ ಮರೆತೆಯಾ
ಬೆಳದಿಂಗಳನೇ ಸುರಿದು ತೋರೆಯಾಗಿ ಹರಿಯುವೆ
ನಿನ್ನ ಜೋತೆಜೋತೆಯಲೆ,ನನ್ನುಸಿರಿರುವ ವರೆಗೆ

ಜೀವನ

ಜೀವನ....
ಇದ್ದು ಗೆದ್ದವರಿಲ್ಲ 
ಎದ್ದು ಹೋದವರೇ ಎಲ್ಲ 
ಅಳಿವು ಉಳಿವು ನಮದಲ್ಲ 
ಹುಟ್ಟಿದಾಗಲೇ ಸಾವಿನ ಗುಲಾಮರೆಲ್ಲ
..

Friday, 21 June 2013

ಒಂಟಿ ನಕ್ಷತ್ರ

ಮೋಡದ ಮರೆಯಲ್ಲಿ ಇಣುಕುತಿದೆ
ಒಂಟಿ ನಕ್ಷತ್ರವೊಂದು 
ತೋರುತಿದೆ ಬಾಗಿಲ ಸೆರೆಯಲಿ
ನಾಚಿನಿಂತ ಹೆಣ್ಣಿನಂತೆ
ಕಾಯುತಿರುವಂತಿದೆ ಇನ್ನೂ ಬಾರದ ಗೆಳೆಯನಿಗೆ
ಹುಸಿಮುನಿಸ ತೋರಿದಂತಿದೆ
ನಗು ಚಲ್ಲುವಾ ಚಂದ್ರಮನಿಗೆ
ಮರೆಯಾಗಿ ಹೋಗಿಹಳು
ಮತ್ತೆ ತಲೆಯೆತ್ತ್ತಿನೋಡೋ ಹೊತ್ತಿಗೆ
ಕಾದು ಬೇಸರವಾಯ್ತೇನೋ ಪ್ರಿಯತಮನಿಗೆ
ಸುತ್ತಲೂ ಆವರಿಸುತಿದೆ 
ಕಾರ್ಮೋಡ ಕಗ್ಗತ್ತಲಿನಂತೆ
ಒಂದೊಂದೇ ಹನಿ ಇಳಿಯತೊಡಗಿತು
ಇವಳ ಕಣ್ಣೀರಿನಂತೆ.

Wednesday, 19 June 2013

ವಿದಾಯ 
ಮರಳಿ ಬಾರದಿರಿ ತಿರುಗಿ ಕಾಡದಿರಿ 
ಹೊರಟುಬಿಡಿ ಮುಖ ತಿರುವಿ 
ಓ ನನಸಾಗದ ಕನಸುಗಳೆ 
ಸ್ಮಶಾನದೆಡೆಗೆ 

ನೀವೆಲ್ಲ ಬಂಧನ ಮುಕ್ತರಿಂದು 
ಕಡಿದಿದೆ ಸಂಕೋಲೆಯಿಂದು 
ಹಾರಿಬಿಡಿ ಸರತಿಯಲಿ 
ಉರಿವ ಚಿತೆಗೆ 

ತಪ್ಪಿಯೂ ಕೂಗದಿರಿ
ರಕ್ಷಿಸಲಾರೆ ನಾ ನಿಮ್ಮ
ನಾನಿಲ್ಲಿ ನಿಶ್ಯಕ್ತ ಹೊರದಾರಿ ಕಾಣದಿಹ
ಚಕ್ರವ್ಯೂಹದ ಬಂಧಿ

ಚಿಗುರಲಾರಿರಿ ನೀವಿಲ್ಲಿ
ಇದು ನೀರೇ ಕಾಣದ ಮರಳುಗಾಡು
ಬದುಕಿಸಲಾರೆ ನಾ ನಿಮ್ಮ
ಹಾಳೂರ ಒಡತಿ ನಾನು

ಇನ್ನೊಂದು ಜನ್ಮವಿದ್ದರೆ ಕರೆವೆ
ಬಂದು ಹೂವಾಗಿ ಅರಳುವಿರಂತೆ
ಕ್ಷಮಿಸಿ ಕೊಂಡೊಯ್ದುಬಿಡಿ ಜೊತೆಯಲ್ಲಿ
ಈ ಕಣ್ಣೀರ ಕಾಣಿಕೆ

Thursday, 30 May 2013

ಹೃದಯ ರಾಗ

ಎಸೆದು ಹೊರಟ ಕೊಳಲನೆತ್ತಿ
ಮತ್ತೆ ನುಡಿಸಿದೆ
ಶೃತಿಯು ಯಾಕೋ ಸೇರಲಿಲ್ಲ
ಭಾವ ಸೆಲೆಯಲಿ

ಕೊರಳು ಉಬ್ಬಿ ಮನವ ತಬ್ಬಿ
ಉಸಿರಿಗೂ ಕಷ್ಟ
ಸಾಧನೆಯೇನೊ ಸಡೆಸುತ್ತಿತ್ತು
ದುಃಖ ತಪ್ತ ಚಿತ್ತ

ಹಾಡುಯೇನೊ ರಾಗವೇನೊ
ಲಯವ ತಪ್ಪಿದೆ
ಮನವು  ಎಲ್ಲೋ ಕಳೆದು ಹೋಗಿ
ಹೃದಯ ದ್ರವಿಸಿದೆ


ಖುಷಿಯ ರಾಗ ಹೇಗೆ ಸಾದ್ಯ
ಮುರಿದ ಹೃದಯದಿ
ಶೋಕ ರಸವೇ ಹೊಮ್ಮುತಿತ್ತು
ಬೆಂದ ಮನದಲಿ,ಈ ಎಸೆದ ಕೊಳಲಲಿ

Saturday, 25 May 2013

ನಾನು ಮತ್ತು ಪಾರಿಜಾತ
ಇರುಳಲಿ ಅರಳಿ 
ಹಗಲಲಿ ಮುದುಡಿ 
ತೊರೆಯುವೆಯೇಕೆ ಅಮ್ಮನ ಮಡಿಲ 
ಒಂದು ರಾತ್ರಿಯೇ ನಿನಗೆ ಆಯಸ್ಸು 

ಇದ್ದರೇನಂತೆ ದೀರ್ಘಾಯಸ್ಸು 
ನನಸಾಗದೆ, ಉಳಿದರೆ ಕನಸು 
ನನ್ನಿಯನ ಜೊತೆ ರಾತ್ರಿಯ ಕಳೆವೆ 
ಅರಳಿ ಸುಖದಲಿ ನಾ ಸಾರ್ಥಕತೆ ಪಡೆವೆ 

ಚಂದ್ರನ ಕಂಡು ನಗುತೊರುವೆ ನೀ
ಎಲ್ಲೆಲ್ಲಿಯೂ ಹರಡುವೆ ಮರಿಮಳವ
ರವಿಯನು ಕಂಡರೆ ಮುಖ ಬಾಡಿಸುವೆ
ನಿನಗೇತಕೆ ಅವನಲಿ ಮುನಿಸು

ಚಂದ್ರನ ಅಂದ ರವಿಯಲಿ ಇಲ್ಲ
ತಂಪನು ಸುರಿದು ಅವ ರಮಿಸೊಲ್ಲ
ಶಾಖದ ಝಳಕ ನನಗಾಗಲ್ಲ
ಸೋಕ್ಷ್ಮವೇ ತಿಳಿಯದ ಅವನಲಿ ಮನಸಿಲ್ಲ

Sunday, 12 May 2013

ಬದುಕು 
ನಿನ್ನ ನಡತೆ ಮಾಡುವುದೊಮ್ಮೊಮ್ಮೆ 
ಧರಿಸುವಂತೆ ಕೋಪವೆಂಬಾಭರಣ
ಮನದಲುದ್ಭವಿಸಿ ಹರಿಯುವದು ತೊರೆಯಂತೆ 
ಮೂಕರೋಧನ ದಾಟಿ ಕಣ್ಣಿನಾವರಣ 
ಏನು ಮಾಡಲಿ ಹೇಳು ನಿನಗೇ ಗೊತ್ತು
ಧರಿಸಿರಲಾರೆ ನಾ ಅದನು ತುಂಬಾ ಹೊತ್ತು

ಹೃದಯ ಚುಚ್ಚುವದು ಕ್ಷಮಿಸಿ ಬಿಡು ಅವನನ್ನು
ಬಾಳಲ್ಲಿ ಜೊತೆಜೊತೆಗೆ ಹೆಜ್ಜೆ ಇರಿಸಿದವನು
ಪ್ರೀತಿಯಾ ಹೊಳೆ ಹರಿಸಿ ನಿನ್ನದೇ ಆದ ಜೀವ
ಬದಲಿಸಿಕೊ ಕೋಪವನು ಬೆರೆಸಿ ಕುಷಿಯ ಭಾವ
ಧರಿಸಿಬಿಡು ತನುಮನದಿ ನಗುವಿನಾಭರಣ
ಹೊಂದಾಣಿಕೆಯ ಮಂತ್ರವೇ ಬದುಕಿಗೆ ಹೂರಣ

Sunday, 5 May 2013

ಅಂಬರ 
ಕಡು ನೀಲಿ ಸೀರೆಗೆ 
ಚಿನ್ನದ ಚುಕ್ಕಿ ಇಟ್ಟಂತೆ 
ಕಂಗೊಳಿಸುತಿದೆ ಅಂಬರ 
ಕಣ್ಣರಳಿಸಿ ನೋಡಲು 
ಅದರ ನಯ ನಾಜೂಕು 
ಆಹಾ ಎಂತ ಸುಂದರ 
ಯಾರು ಹಚ್ಚಿದರೋ ಆ ಚುಕ್ಕಿ 
ಮೈಎಲ್ಲಾ ನಿನಗೆ 
ಎಷ್ಟೇ ಹುಡುಕಿದರೂ ಸಿಗಲಿಲ್ಲ 
ಅಂತಹ ಸೀರೆ ನನಗೆ

Wednesday, 10 April 2013


ಆಸೆ
ಬರಬೇಕೆಂದಿರುವೆ ನಿನ್ನ ಕನಸಲಿ ಒಮ್ಮೆ
ಯಾವ ರೂಪದಿ ಬರಲಿ
ತಿಳಿಸುವೆಯಾ ಗೆಳೆಯಾ

ಕೋಗಿಲೆಯಾಗಿ ಬಂದು ಇಂಪಾಗಿ
ನಿನ್ನಿದಿರು ಹಾಡೊಂದು ಹಾಡಲೇ
ನವಿಲಾಗಿ ಬಂದು ನರ್ತಿಸಿ
ನಿನ್ನ ಕನಸುಗಳಿಗೆ ಬಣ್ಣ ತುಂಬಲೇ
ಗಿಳಿಯಾಗಿ ಬಂದು ಮುದ್ದು ಮಾತುಗಳಿಂದ
ನಿನಗೆ ಮುದ ನೀಡಲೇ
ಹಂಸವಾಗಿ ಬಂದು ನಿನ್ನ
ಕನಸಿನ ಸಾಗರದಲಿ ನಾ ಈಜಲೇ

ಯಾವ ರೂಪದಿ ಬರಲಿ
ತಿಳಿಸುವೆಯಾ ಗೆಳೆಯಾ

ಚಂದ್ರನಾಗಿ ಬಂದು ಬೆಳದಿಂಗಳ
ನಿನ್ನ ಮೇಲೆ ಸುರಿಯಲೇ
ಕವಿಯಾಗಿ ಬಂದು ನಿನ್ನ ಮೇಲೆ
ಕವಿತೆಯನು ಬರೆಯಲೇ
ತಂಗಾಳಿಯಾಗಿ ಬಂದು ಮೈಸೋಕಿ
ತಣ್ಣನೆಯ ಸ್ಪರ್ಶದಲಿ ನಡುಗಿಸಲೇ
ಸೂರ್ಯ ರಶ್ಮಿಯಾಗಿ ಬಂದು ನಾ
ನಿನ್ನ ಕೆನ್ನೆ ಚುಂಬಿಸಿ ಎಬ್ಬಿಸಲೇ

ಯಾವರೂಪದಿ ಬರಲಿ ನಾ
ನಿನ್ನ ಕನಸಲಿ ಗೆಳೆಯಾ
ಕಾತರದಿ ಕಾಯುತಿಹೆ
ಬೇಗ ನೀ ತಿಳಿಸುವೆಯಾ

Friday, 8 February 2013


ಗೈರು
ಇಂದೇಕೋ ಅನಿಸುತಿದೆ ಗೆಳೆಯಾ
ಹೇಳಬೇಕೆಂದು ನಿನಗೆ ವಿದಾಯ
ಬರಡಾಗಿ ನಿಂತಿವೆ ಕನಸು ಫಲಿಸದೆ ನೀ ಕೊಟ್ಟ ಅಭಯ
ಬದುಕ ಬೇಕೆನಿಸಿದೆ ಬೇಡದೆ ಯಾರ ಹಂಗಿನ ಸಹಾಯ

ನನ್ನ ಜಾಗದಲಿ ಕಾಣುತಿದೆ ಬೇರೆಯದೇ ನೆರಳು
ಕಾಣದಾಗಿದೆ ನಿನಗೆ ವೇದನೆಯಲಿ ಹೊಯ್ದಾಡೋ ನನ್ನ ಕರುಳು
ನಾ ತಿಳಿದಿದ್ದೆ ನೀ ನನಗೆ ಆ ದೇವರು ಕೊಟ್ಟ ಹರಳು
ನನ್ನ ಮನಸೇ ಗಹಗಹಿಸಿದೆ ಪೆದ್ದಿ ನಿನಗೆಲ್ಲೋ ಮರುಳು

ಸ್ವಾಭಿಮಾನವ ತುಂಬುವಲ್ಲಿ ದಾರಾಳಿಯಾದ ಆ ದೇವರು
ಬದುಕೋ ಛಲ ಮೂಡಿಸಿದ ಇದ್ದರೂ ನಿನ್ನ ಗೈರು
ನಿನಗಾಗಿ ಪರಿತಪಿಸಿ ಸುರಿಸಲು ಬತ್ತಿದೆ ಕಣ್ಣೀರು
ಆಧ್ಯಾತ್ಮ ಸತ್ಯ ಬದುಕಲ್ಲಿ ಯಾರಿಗುಂಟು ಯಾರು