Monday 16 April 2012


ಜೀವನ ಪಯಣ

ಬಾಲ್ಯದಲಿ ಹೇಳಿದರು ಇವಳು ನಿನ್ನವಳು 
ನಿನ್ನವಳಾಗುವ ಆ ಕಾಲ ಬಂದಾಗ
ಎದ್ದಿತೊಂದು ತುಫಾನು ಬದುಕಲ್ಲಿ
ಅದರ ಹೊಡೆತಕೆ ಸಿಲುಕಿ ನಾನೆಲ್ಲೋ ನೀನೆಲ್ಲೋ

ಎದುರಿಸಲು ಧೈರ್ಯ ವಿಲ್ಲವಾಯ್ತು
ಮನದ ಮಾತು ಮೌನಕ್ಕೆ ಶರಣಾಯ್ತು
ದಾರಿಕಾಣದೆ ಹತ್ತಿದೆ ಹಿರಿಯರು ತೋರಿದ ನೌಕೆಯನು
ಹೊತ್ತು ಮನದತುಂಬ ನಿನ್ನ ನೆನಪನ್ನು

ನಿನ್ನ ನೆನಪುಗಳ ಮೂಟೆಗೆ ಬೀಗ ಜಡಿದೆ
ಹೊಸಬದುಕಿಗೆ ನಾ ನಾಂದಿ ಹಾಡಿದೆ
ದಿನಗಳುರುಳುತಿವೆ ಸಂತಸದಲಿ
ಒಮ್ಮೊಮ್ಮೆ ನಿಲ್ಲುವದು ಮನ ಬೀಗಜಡಿದ ಮೂಟೆಯಲಿ

ನನಗಾಗಿ ಕಾದು ಕಾದು ನಿನಗಾಯ್ತು ಬೇಸರ
ನೀರಾಸೆ ವೈರಾಗ್ಯ ತುಂಬಿಕೊಳ್ಳುವಲ್ಲಿ ನೀ ಮಾಡಿದೆ ಅವಸರ
ಅಂತೂ ನಿನ್ನ ಬದುಕಲ್ಲೂ ಬಂತೊಂದು ದಿನ ಶ್ರಾವಣ
ಅರಿವಾಗಿರಬೇಕು ಬದುಕು ಸುಖದುಃಖದ ಹೂರಣ  

ಬದುಕಬೇಕೆಂದುಕೊಂಡೆ ಎಲೆಮೇಲೆ ನೀರು ಜಾರುವಂತೆ
ಅಂಟಿಸಿಕೊಳ್ಳದೆ ನೆನಪುಗಳ  ಈ ಮನಕೆ
ಆದರೂ  ಒಮ್ಮೊಮ್ಮೆ ಆಗುವದು ಮನ ಹತ್ತಿಯಂತೆ
ನೀರನ್ನ ಹೀರಿ ಮುದ್ದೆ ಆಗುವಂತೆ

ಬದುಕೆಂಬುದು ವಿಧಿಸಾಹೇಬನ ಜಟಕಾಬಂಡಿ
ಅದು ಹೋಗದೆಂದು ನಾವು ತೋರಿದ ದಾರಿಯಲಿ
ನಾವೇ ತೂರಿಕೊಳಬೇಕು ಅದು ಕೊಂಡೊಯ್ದ ದಿಕ್ಕಿನಲ್ಲಿ
ನೆಮ್ಮದಿಯ ಬದುಕು ನಮದಾಗುವದು ಬಾಳೆಂಬ ಆಟದಲಿ

Saturday 14 April 2012


ಜೀವನ ತತ್ವ

ಇದ್ದಾಗ ಕಚ್ಚಾಡುವರು ಮೂಜಗ ಒಂದಾಗುವಂತೆ
ಸತ್ತಮೆಲಾರಿಲ್ಲ ಹಾಕುವವರು ಒಂದು ಹಿಡಿ ಮಣ್ಣು
ಹೊತ್ತಯ್ಯಲಾರೆ ನಿನ್ನಜೊತೆ ಸಿರಿಸಂಪತ್ತನ್ನು
ಕ್ಷಣಿಕ ಜೀವನವೆಂದು ಅರಿತೂ ಹಂಚಿ ತಿನ್ನಲಾರೆ
ಇದ್ದಾಗ ಹಂಚಿತಿಂದರೆ ಸತ್ತಾಗ ಬರುವುದು
ನಿನಜೊತೆಗೊಂದು ಒಳ್ಳೆಹೆಸರು
ಏನಿದ್ದರೇನು ಯಾರಿದ್ದರೇನು
ಎಲ್ಲವನು ತೊರೆದು ಎಲ್ಲರೂ ಲೀನವಾಗಲೆ ಬೇಕು  
ಈ ಪಂಚ ಬೂಥದಲೊಂದು ದಿನ 

Sunday 8 April 2012


ಕಳ್ಳ ಬೆಕ್ಕು
ಮನೆಯಲಾರು ಇಲ್ಲದಾಗ
ಹಿತ್ತಲ ಬಾಗಿಲ ಸಂದಿಯಿಂದ
ಕಳ್ಳಬೆಕ್ಕು ಒಳಗೆ ನುಗ್ಗೀ..ತು
ಬಾಗಿಲುಗಳು ಭದ್ರ ಹುಷಾರು

ಜಗಕೆ ಕತ್ತಲು ಕವಿದಾಗ
ಇಲಿಹುಡುಕೋ ನೆಪದಲ್ಲಿ
ಕತ್ತಲಸೀಳಿ ಕಳ್ಳಬೆಕ್ಕು ಬಂದೀ..ತು
ಬಾಗಿಲುಗಳು ಭದ್ರ ಹುಷಾರು

ಹಾಲ ಮೊಸರ ನೆನಪಾಗಿ
ಹೊಂಚು ಹಾಕಿ ಕುಳಿತ್ಕೊಂಡು
ಒಬ್ಬಂಟಿಯಾಗಿರುವಾಗ ಕಳ್ಳಬೆಕ್ಕು ಬಂದೀ..ತು
ಬಾಗಿಲು ಭದ್ರ ಹುಷಾರು

ಕಾಲುಗಳ ಸುತ್ತುತ್ತ ಮೊಗವನ್ನ ಉಜ್ಜುತ್ತ
ನಯ ವಿನಯ ತೋರುತ್ತ
ಕಾರ್ಯಸಾಧನೆಗಾಗಿ ಕಳ್ಳಬೆಕ್ಕು ಬಂದೀ..ತು
ಬಾಗಿಲು ಭದ್ರ ಹುಷಾರು 

Saturday 7 April 2012


ಮಂದಿ
ನಂಬಿ ಕೆಡಬ್ಯಾಡ ಈ ಮಂದೀಯನ್ನ 
ನಂಬೀ ಹೋದರೆ ನಿನ್ನ
ಕೈಬಿಟ್ಟು ಹೋದಾರ ನಡುನೀರಿನ್ಯಾಗ
ನಂಬಿಕೆಯಿದ್ದರ ನಂಬು ಆ ದ್ಯಾವರನ್ನ
ಬಿಡಂಗಿಲ್ಲ ನಿನ್ನ ಕೈಯನ್ನ
ಕರುಣೆ ಬಂದರೆ ಕಾಯ್ದು
ಮರಣ ಬಂದರೆ ಒಯ್ದು
ಕಡೆತನಕ ನೆರಳಂತೆ ಬಂದಾನ
ಆ ಶಿವಗ ಎರಡು ಕೈಯೆತ್ತಿ ನಮಿಸೋಣ   

Wednesday 4 April 2012


ಪ್ರಕೃತಿ

ಹುಣ್ಣಿಮೆ ಇರುಳ್ನಾಗ
ಬಾನ್ಕಡಲಲ್ ಈಜ್ಕೊಂಡು
ಬೆಳದಿಂಗಳನ್ನಾ ಚಲ್ಯಾನ  ಚಂದ್ರಮ
ಜಗವನ್ನೇ ಹಾಲಲ್ಲಿ ತೊಯ್ಸ್ಯಾನ

ಸುಂಯ್ ಸುಂಯ್  ಅನ್ನುತ್ತ
ಪರಪಂಚ ಸುತ್ತುತ್ತ
ಹಿಮದಂತ ತಂಪಾ ಸುರಿಸ್ಯಾನ  ಮಾರುತ
ಗಿಡಮರ್ಗಳಿಗೆ ನೃತ್ಯ ಮಾಡ್ಸ್ಯಾನ

ಇದಕಂಡ ಭೂತಾಯಿ ನಾಚುತ್ತ  
 ಮುಸಿಮುಸಿ ನಕ್ಕೊಂಡು
 ಮಳೆರಾಯ ಎಲ್ಲೆಂದು ಕೇಳ್ಯಾಳ ಆ ತಾಯಿ
ಹುಸಿಕೋಪವನ್ನಾ ತೋರ್ಯಾಳ 

ನೀರೀಕ್ಷೆ
ನೀ ಬರುವಿಯೆಂದು ಕಾಯುತಿಹೆ ಗೆಳೆಯ
ಆದರೆ ನೀನ್ಯಾಕೆ ತಿರುಗಿ ಬರಲಿಲ್ಲ
ಕೇಳದೆ ಇನ್ನೂ ನಿನಗೆ ನನ್ನೆದೆಯ
ಮೌನ ರಾಗ

ಕ್ಷಣ ಕ್ಷಣವೂ ಕುಗ್ಗುತಿದೆ ನಂಬಿಕೆ
ಹತಾಶೆ ಮೂಡುತಿದೆ ನನ್ನ ಮನದಲ್ಲಿ
ಆದರೂ ಬರುವೆಯೆಂಬ ಆಸೆಯಾಬಲೆ
ಹೃದಯದಾ ಮೂಲೆಯಲ್ಲಿ

ಬಂದು ನೀ ಸಂತೈಸುವೆ ನುಡಿದು
ಬಿಡು ನೀ ಹಿಂದಿನಾ  ಚಿಂತೆ
ಸಾಗೋಣ ಧೈರ್ಯದಲಿ ಬಾಳ ನೌಕೆಯಲಿ
ಮುಂದಿಹುದು ನಮಗೆ ಸಂತೋಷದ ಕಂತೆ  




ಕನಸು
ಮಧ್ಯರಾತ್ರಿಯಲಿ ಮನಸಿನ ಕದ ಒಡೆದು
ನೀ ಏಕೆ ಬಂದೆ ನನ್ನೊಳಗೆ
ನೆನಪಿನ ಅಂಗಳದಲಿ ತರಂಗಗಳೆಬ್ಬಿಸಿದೆ
ಮನಸೆಂಬ ಸರೋವರಕೆ ಕಲ್ಲಹೊಡೆದಂತೆ
ಕರುಣೆ ಬಾರದೇ ನನ್ನೀ ತೊಳಲಾಟಕಂಡು

ಮೋಡಿ ಮಾಡುವ ನಿನ್ನ ಈ ನಗುವು 
ನನಗೆ ಪರಿಹಾಸ್ಯ ಮಾಡುವಂತಿದೆ
ದೂಡಿದರೂ ಬಾಗಿಲಲೇ ನಿಂತಿರುವೆ
ಕೈ ಬೀಸಿ ನನ್ನನ್ನೇ  ಬಳಿ ಕರೆಯುತಿಹೆ
ಮನಸ್ಸೆಲ್ಲ ನೀನೆ ಆವರಿಸಿದಂತಿದೆ

ನನಗಿದು ತಿಳಿದಿದೆ ನಿಜವಲ್ಲ ಕನಸೆಂದು
ಎಚ್ಚರ ಗೊಂಡಾಗ ನೀ ಬಳಿ ಇರಲಾರೆ ಎಂದು  
ಆದರೂ ನಾ ನಿನ್ನ ದಾರಿಯನೇ ಕಾಯುತಿಹೆ
ಪ್ರತಿ ಇರುಳು ಚಾತಕದ ಪಕ್ಷಿಯಂತೆ  
ನಿನ್ನ ಮೋಡಿಗೆ ನಾ ಶರಣಾದಂತಿದೆ 

ವಸಂತ
ನೇಸರ ಬರಲು ಬಾನದು ನಾಚಲು
ಕೆಂಪೇರಿದ ಕೆನ್ನೆ
ಜಗ ತೇಲುವದು ರಂಗಿನಲಿ

ಋತುಗಳ ರಾಜ ವಸಂತ ಬರಲು
ತರುವನು ತಾಯಿಗೆ ಹಸಿರುಡಿಗೆ
ಜಗ ತಾ ನಗುವದು ಸಂಬ್ರಮಕೆ

ದುಂಬಿಯ ಗಾನ ಮಂಗಳವಾದ್ಯ
ಹೂವಿನ ಕಂಪೆ ಸುಗಂದ ದ್ರವ್ಯ
ಜಗವೇ ಒಂದು ಮಂಟಪವು

ಕೋಗಿಲೆ ಗಾನಕೆ ನವಿಲಿನ ನೃತ್ಯ
ಋತುರಾಜನ ಸ್ವಾಗತಕೆ
ಜಗವೇ ರಂಗ ಮಂದಿರವು

ಅರಳಿದ ಹೂಗಳು ನಗುತಲಿ ತೂಗಿ
ದುಂಬಿಗಳ ತಾ ಸನಿಹಕೆ ಸೆಳೆಯಲು
ಜಗದಲಿ ಹೊಸಮುನ್ನುಡಿಗೆ ನಾಂದಿಯದು.


ನದಿ
ಓಡುತಿದೆ ನದಿ ಓಡುತಿದೆ
ಗುಡ್ಡ ಬೆಟ್ಟ ಕಣಿವೆಗಳಲಿ ತಾ
ಜಿಗಿಯುತಿದೆ ತಾ ಜಾರುತಿದೆ
ಕಲ್ಲು ಮಣ್ಣು ಕಸ ಕಡ್ಡಿಗಳ
ಪಾಪ ಪುಣ್ಯದ ಮೂಟೆಗಳ 
ಜೊತೆಗೇ ತಾ ಒಯ್ಯುತಿದೆ
ಜಗದ ಕೊಳೆ ತಾ ತೊಳೆಯುತಿದೆ
ಮಂದಗತಿಯಲಿ ಸಾಗುತಿದೆ
ಸಮತಲವಾದ ಮೈದಾನದಲಿ
ದಣಿವನು ಆರಿಸಿ ಮುಗುಳುನಗೆ ಬೀರಿ
ಚಂಗನೆ ಜಿಗಿದು ಜಲಪಾತವನು
ಸೃಷ್ಟಿಸಿದೆ ತಾ ಮೂಕವಿಸ್ಮಿತನಾಗಿಸಿದೆ
ಮೇಲು ಕೀಳಿನ ಬೇದವೆ ಇಲ್ಲದೆ
ಜಾತಿ ಧರ್ಮದ ಗೊಡವೆಗೆ ಹೋಗದೆ
ಎಲ್ಲರಿಗೂ ತಾ ನೀರನು ಹನಿಸಿ
ಸಾಗರ ಸೇರುವ ಗುರಿಯ ಕಡೆ ತಾ
ಧಾವಿಸಿದೆ ಮನದಲಿ ಧನ್ಯತಾ ಭಾವನೆ ಮೂಡಿಸಿದೆ


ಬೇಸಿಗೆ .....
ಜಲಲ ಜಲಲ ಜಲ ಧಾರೆ
ಇಳಿದು ಬಾ ನೀ ಮತ್ತೊಮ್ಮೆ ಧರೆಗೆ
ಇಳೆಯೊಡೆದು ಬೇಡಿಹಳು
ತಣಿಸು ದಾಹವ ದಗೆಯಲಿ
 ದಹಿಸಿ ಹೋಗುವ ಮುನ್ನ

ಬಿರು ಬೇಸಿಗೆ ಹೊಡೆತಕ್ಕೆ
ಮಾಸುತಿದೆ ಹಸಿರುಡುಗೆ
ಉಸಿರಾಗಿ ನೀ ಬಂದು ತೊಡಿಸು
ಹೊಸ ಉಡುಗೆ ಶೃಂಗಾರಕೆ

ಎಲ್ಲೆಲ್ಲೂ ಬಣ ಬಣ ನೀರವತೆ ಬೇಸರ
ಮರೆತಿವೆ ಮ್ರಗಪಕ್ಷಿಗಳು ಲವಲವಿಕೆ ಕಲರವ
ಹೂಗಳೆಲ್ಲಿ ಗಂಧವೆಲ್ಲಿ ಎಲ್ಲವೂ ಮಾಯಾ
ಹೊಸತನದ ನಾಂದಿಗೆ ಬೇಡಿಹೆ ನಿನ್ನ ಸಹಾಯ



ಹುಚ್ಚು
ಆ ಅನಾಥ ಹುಡುಗ ಓಡುತಿದ್ದ ಮನೋವಿಕಲತೆಯಿಂದ ರಸ್ತೆಯಲ್ಲಿ
ನೋಡಿ ಜನ ನಗುತಿದ್ದರು ಕಲ್ಲ ಹಿಡಿದು ಕೈಯಲ್ಲಿ
ಪಾಪ ಅವನಿಗರಿವಿಲ್ಲ ಈ ಜನರ ದುಷ್ಟತನದ ಕಡೆ
ಅವನ ತಪ್ಪೆನುಂಟು ಪರಿವೆಯೇ ಇಲ್ಲ ಅವನಿಗೀ ಜಗದೆಡೆ

ಹುಚ್ಹ ಹುಚ್ಚ ಎಂದು ಜನ ಕೂಗಿದರಲ್ಲಿ
ಯಾರಿಗಿಲ್ಲ ಹೇಳಿ ಹುಚ್ಚು ಈ ಜಗದಲಿ
ಒಬ್ಬನಿಗೆ ಹಣದಹುಚ್ಚು ಇನ್ನೊಬ್ಬನಿಗೆ ಹೆಣ್ಣಿನ ಹುಚ್ಚು
ಮತ್ತಾರಿಗೋ ಮಣ್ಣಿನ ಹುಚ್ಚು ಬಿಟ್ಟಿಲ್ಲ ಯಾರನ್ನು ತರತರದ ಹುಚ್ಚು

ಒಬ್ಬ ಬೀಸಿದ ಕಲ್ಲ ತಾಗಿತು ಅವನ ಹಣೆಗೆ
ರಕ್ತ ತೊಟ್ಟಿಕ್ಕಿತು ಕುಸಿದ ಅವನಲ್ಲಿಗೇ
ಕೇಳುವವರಾರಿಲ್ಲ ಅವನ ಕಣ್ಣೀರ ಗೋಳು
ಎಂತಹ ಕರುಣಾಜನಕ ಅವ ಪಡೆದ ಬಾಳು   
 


ಹುಣ್ಣಿಮೆ ಚಂದಿರ
ಎಂತಹ ಸುಂದರ ಈ ಹುಣ್ಣಿಮೆ ಚಂದಿರ
ಬೆಳ್ಳಿಯ ಬಟ್ಟಲಂತೆತೇಲುತಿಹನು ಆಗಸದಲ್ಲಿ
ಬಿಸಿ ಕೊಡುವ ಬೆಳಕನ್ನೂ ತಂಪಾಗಿಸಿ ಸುರಿಯುತಿಹನು ಹಾಲಿನಂತೆ
ಪ್ರೇಮಿಗಳ ಹೃದಯ ಸಾಮ್ರಾಜ್ಯದಲಿಮೆರೆಯುತಿಹನು ಅಧಿಪತಿಯಂತೆ

ಆ ತಾರೆಗಳೋ ಪಯ್ಪೋಟಿಯಲಿ ನಿಂತಿವೆ ನಿನ್ನ ಸುತ್ತ
ಭೂರಮೆಯು ಮೆರೆಯುವಳು ಸೆಳೆಯಲು ನಿನ್ನ ಚಿತ್ತ
ಆ ಮೋಡಗಳು ನಿನ್ನ  ಜೊತೆ ಹೊರಟಿವೆ ಮೆರವಣಿಗೆಯಂತೆ
ನೀ ಸಾಗುತಿಹೆ ತುಂಬಿಕೊಂಡು ಮೊಗದಲ್ಲಿ ಮಂದಸ್ಮಿತ

ಆ ಸಮುದ್ರವೂ ಕೂಡ ನಿನ ನೋಡಿ ಭೋರ್ಗರೆವುದು
ಆ ನೈದಿಲೆಗಳೋ ನಿನ ನೋಡಿ ಅರಳುವವು
ತಂಗಾಳಿಯೂ ನಿನ ನೋಡಿಯೇ ಬೀಸುವುದು
ಆದರೆ ಅಮಾವಾಸ್ಯೆಗೇಕೆ ನಿನ ಕಂಡರೆ ಕೋಪವು



ಅನುಭವ
ಅರ್ಥವಾಗದ  ಮಂತ್ರಗಳನು ಪಟಿಸುತಲಿ
ಮೆಚ್ಚಲೆತ್ನಿಸಿದೆ  ಆ ಮಾಯಾ ದ್ದಾಡಿ ಮರುರೂಪವ
ಬಿಟ್ಟೆ ನಾ  ನಿತ್ಯ ಕೆಲಸವ
ಮನೆ ಮಕ್ಕಳನು ಶಪಿಸುತಲಿ

ಬಯಸಿದೆ ನಾ ಲೋಕ ಕಲ್ಯಾಣವನು
ಒಬ್ಬನೇ ಜಯಿಸಲೆತ್ನಿಸಿದೆ ಲೋಕವನು
ಗಾಳಿಯೊಡನೆ ಗುದ್ದಾಡಿ ಮರುಗುವ 
ವ್ಯರ್ಥಮಾಡಿದೆ ನಾ ಸಂತಸದ  ಸಮಯವ

ಗೀಚಿದೆ ಆಶು ಕಾವ್ಯಗಳ ಸುರಿಮಳೆ
ಓದದವರ, ಮೂರ್ಖರ  ಮಡಿಲಿಗೆ
ಬೋಳ್ಗಲ್ಲಿಗೆ ಮಳೆಯೆರಚಿದ ಹಾಗೆ
ಚಿಗುರಿತು ಕಾವ್ಯ ರಚಿಸುವ ಕಡೆ ಒಲವು   

ಬರೆದ ಕಾವ್ಯಗಳ ಸಾರಿದೆ ಅಂತರ್ಜಾಲದಲಿ
ಹೆಬ್ಬೆಟ್ಟು ಚಿನ್ನೆ ಬಂತು ಮುಖಪುಸ್ಥಕದಲಿ
ವಿಮರ್ಶೆಗಳ ನೋಡಿದಾಗ ಮೂಡಿತು ಗೆಲುವು
ಯಾರೊಬ್ಬರು ತೊಡಿಸಲಿಲ್ಲ ಉಡುಗೊರೆಯ ಕೈಬಳೆ


ತೊಳಲಾಟ

ನನ್ನೆದೆಯ ಗೂಡಲ್ಲಿ ಬೆಚ್ಚಗೆ ಕುಳಿತಿರುವೆ ನೀನು
ಎಸ್ಟೆ ಪ್ರಯತ್ನಿಸಿದರು ಹೊರಗಟ್ಟುವಲ್ಲಿ ಸೋಲುತಿಹೆ ನಾನು
ಉಳಿಸಿಕೊಳಲೋ,ಕಳುಹಿಸಿಬಿಡಲೋ ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ ............ಇದು  ಏನು

ಮರೆತುಬಿಡು ಎಲ್ಲವನು ಎನ್ನುತಿದೆ ಮನವು
ಮರೆಯಲಾರೆನು ಎಂದು ಕೂಗುತಿದೆ ಹೃದಯವು
ಕೇಳಲಾರಮಾತನ್ನು ನಾನು ,ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ ..............ಇದು ಏನು 

ನೆನಪುಗಳು ಚುಚ್ಚಿ ಚುಚ್ಚಿ ಕಾಡುತಿದೆ
ವಿವೇಕ ವಾಸ್ತವತೆಯ ಎತ್ತಿತೋರುತಿದೆ
ನಾನಾವುದನಾರಿಸಲಿ ,ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ .............ಇದು ಏನು

ಇದು ಪ್ರೀತಿಯೋ ಇಲ್ಲಾ ಹುಚ್ಚು ಬ್ರಮೆಯೋ
ಇದು ಕನಸೋ ಇಲ್ಲಾ ನನಸೋ
ಹುಡುಕುತಿಹೆ ಉತ್ತರವ ,ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ............ಇದು ಏನು





ಅಜ್ಜನ ಸಂಚಿ

ನನ್ನನ್ನು ಕರೆಯುವರು ಅಜ್ಜನ ಸಂಚಿ
ಬದುಕು ಸಾಗಿಸುತ್ತಿದ್ದೆ  ತಾಂಬೂಲ ಹಂಚಿ
ತುಂಬುತ್ತಿದ್ದರು ನನ್ನ ಒಡಲಲ್ಲಿ ಎಲೆ ಅಡಿಕೆ ಸುಣ್ಣ
ತಾಂಬೂಲ ಪ್ರಿಯರು ಹಾಕುತಿದ್ದರು ನನ್ನ ಮೇಲೆ ಕಣ್ಣ

ಹೇಳಿಕೊಳ್ಳುವಂತ ಸೌಂದರ್ಯ ನನ್ನದಲ್ಲ
ಹಾಗಂತ ಕುರೂಪಿಗಳ ಸಾಲಲ್ಲಿ ನಾ ನಿಂತಿಲ್ಲ
ನನ್ನ ಬಣ್ಣ ಕಾಕಿ ಆದರೇನಂತೆ
ಅದು ದೇಶ ಕಾಯೊ ರಕ್ಷಕರ ಉಡುಪಿನ ಬಣ್ಣ ವಂತೆ

ಎಲ್ಲೇ ಹೋದರು ನಾ ಇರುತ್ತಿದ್ದೆ  ಅವರ ಜೊತೆಯಲ್ಲಿ
ಯಾವಾಗಲು ಇರುತಿತ್ತು ನಾ ಕೊಟ್ಟ ಎಲೆ ಅಡಿಕೆ ಅವರ ಬಾಯಲ್ಲಿ
ಆಗಾಗ ಸವರುತ್ತಿದ್ದರು ನನ್ನನ್ನು ಪ್ರೀತಿಯಿಂದ
ಕಾಪಾಡುತ್ತಿದ್ದರು ನನ್ನ ಅಷ್ಟೇ  ಜತನದಿಂದ

ಊಟ ತಿಂಡಿಯಾದರು ಬಿಡಬಹುದು ನಮ್ಮಜ್ಜ
ನನ್ನ ಬಿಟ್ಟು ಬದುಕಲಾರರು ಅನ್ನೋದು ಅಷ್ಟೇ ನಿಜ
ಯಾರಿಗುಂಟು ಯಾರಿಗಿಲ್ಲ ಇಂತಹ ಬಾಗ್ಯ
ಅಜ್ಜನ ಸೇವೆಯೇ ನನ್ನ ಜೀವನದ ಸೌಭಾಗ್ಯ

ಅಜ್ಜ ಮಲಗಿದರು ಒಂದು ದಿನ ಹಿಡಿದು ರೋಗ
ನಿಂತೆ ಹೋಯಿತು ಪಾಪ ಅವರ ತಾಂಬೂಲದ  ವೈಭೋಗ
ತಿನ್ನದಿದ್ದರೆ ಅವರು ಅನುದಿನ ತಾಂಬುಲ
ಇರುತಿದ್ದರೇನೊ ಇನ್ನು ಸ್ವಲ್ಪ ದಿನ ಎನ್ನೋ ಹಂಬಲ

ನನಗೂ ಅಜ್ಜನಿಗೂ ಅವಿನಾಭಾವ ಸಂಬಂಧ
ಆ ದೇವರಿಗೇ ಗೊತ್ತು ಇದು ಯಾವ ಜನ್ಮದ ಅನುಭಂದ
ಅಜ್ಜನಿಲ್ಲದ ನಾನು ದಿಕ್ಕಿಲ್ಲದ ಅನಾಥ
ನೇಲುತಿಹೆ ಗೂಟದಲಿ ಅಜ್ಜನ ನೆನಪಲ್ಲಿ ಅಳುತ



ನನ್ನ ಮುದ್ದಿನ  ನಾಯಿಗಳು

ಕುಬ್ಜ ದೇಹದ, ಸೊಟ್ಟ ಬಾಲದ, ಕಪ್ಪು ಬಣ್ಣದ ನಾಯಿ
ಇದರ ಹೆಸರು ರೂಬಿ
ಪಕ್ಕದಲ್ಲಿ ನಿಂತಿರುವಳು ಸಕಿ  ಕೆಂಪು ಬಣ್ಣದಲಿ
ಇದರ ಹೆಸರು  ಪಿಲ್ಲಿ

ಜಯ ವಿಜಯಯರಂತೆ  ನಿಲ್ಲುವರು ಬಾಗಿಲಲ್ಲಿ
ಬಂದವರು ಮುಂದಡಿಯಿಡಲಾರದೆ ನಿಲ್ಲಲೇ ಬೇಕು ಅಲ್ಲಿ
ಒಳ ಬರಬೇಕೆಂದರೆ ಬೇಕು ಇವರ ಅಪ್ಪಣೆ
ಒಡೆಯನ ಸೇವೆಯಲಿ ಮರೆಯುವದು ಕಷ್ಟಕಾರ್ಪಣೆ

ಮಾಡುವುದು ಒಮ್ಮೊಮ್ಮೆ ತುಂತಾಟದ ಅತಿರೇಕ
ನೋಡಿದವರಿಗನಿಸುವುದು ಇವು  ಅಮಾಯಕ
ಇವಕೆ ಬಯ್ದರೆ ಸಾಕು ಮಾದುವವು ಉಪವಾಸ
ತಿಂಡಿ ತಿನಿಸಲು ಮಾಡ ಬೇಕು ನಾವು ಹರ ಸಾಹಸ

ಇವಕೂ ಅಂಟಿದೆ ಕಾರಲ್ಲಿ ತಿರುಗುವ ಗೀಳು
ಬಿಟ್ಟು ಹೋದರೆ ಸಾಕು ದಿನವೆಲ್ಲ ಅಳುವಿನ ಗೋಳು
ಮುದ್ದು ಮಾಡಿದರೆ ಸಾಕು ಮೈಯನ್ನು ತಿಕ್ಕಿ
ಬಾಲ ಆಡಿಸಿ ತೋರಿಸಿರುವವು ಪ್ರೀತಿಯನು ಕಾಲು ನೆಕ್ಕಿ

ಜಂಪ್ ಅಂದರೆ  ಹಾರುವವು,
ಔಟ್ ಅಂದರೆ ಹೊರಗೆ ಓಡುವವು
ಎಟಾಕ್ ಅಂದರೆ ಮುನ್ನುಗ್ಗುವವು
ಇವಕೂ  ಆಂಗ್ಲ ಭಾಷೆಯ ಮೋಹವು

ದಿನ ಕಳೆಯುವವು ಮನೆ ಕಾಯುವ ಕೆಲಸದಲಿ 
ಸಹಾಯಕ್ಕೆ ಬರುವವು  ಇವೇ ಅಪಾಯದಲಿ
ನಿಸಂಶಯದಿ ನಂಬುವವು ಒಡೆಯನೇ ಸರ್ವಸ್ವೆಂದು
ಅದಕ್ಕೆಂದೇ ಹೇಳುವರು ನಂಬಿಕೆಗೆ ಪರ್ಯಾಯ ನಾಯಿಯೆಂದು  


ಓ ಮನಸೇ

ಓಡಬೇಡ ಓ ಮನಸೇ ಹಗಲುಗನಸುಗಳ ಹಿಂದೆ
ಮುನ್ನುಗ್ಗು ದೈರ್ಯದಿ ಬದುಕಿನ ಹಾದಿಯಲಿ ಮುಂದೆ
ಹಾಕಿಕೊ ನಿನಗೆ ನೀ ಕುದುರೆ ಲಗಾಮು
ಹಚ್ಚಿಕೊ ಜೊತೆಗೆ ವಾಸ್ತವತೆಯ ಮುಲಾಮು

ಬಣ್ಣದಲಿ ಮೂಡುವ ಕನಸೆಲ್ಲ ನಿಜವಲ್ಲ
ಬಯಸಿದಂತೆ ಜಗ ನಡೆಯಲೆಂಬುದು ತರವಲ್ಲ
ಅವಸರಿಸಿದರೆ ಬದುಕೊಂದು ಕಗ್ಗಂಟಿನ ಮಜಲು
ತಾಳ್ಮೆಯಲಿ ಬಿಡಿಸು ನೀ ಒಂದೊಂದು ಗೋಜಲು

ಪರರ ಮಾತಿಗೆ ನೀ ದ್ರುಥಿಗೆಡಬೇಡ
ಗೆಲುವು ಬೇಕೆಂದರೆ ಸಾಧನೆಯ ಬಿಡಬೇಡ
ಗುರಿಯ ಕಡೆಗೇ ಇರಲಿ ನಿನಗೆಂದು ಛಲ
ಯಾವದೇ ಸ್ಥಿತಿಯಲು ಆಗಬೇಡ ವಿಚಲ

ಬಲಿಯಾಗದಿರು ಎಂದೂ ಅವಸರದ ನಿರ್ಣಯಕೆ
ಅದರಿಂದ ಕುಸಿಯಬೇಡ ನೀ ಪಾಥಾಳಕೆ
ಕಾಯ್ದುಕೊಳಲೇ ಬೇಕು ಎಂದಿಗೂ ಸ್ಥಿರತೆ
ಇದು ಸುಳ್ಳಲ್ಲ ಎಂದಿಗೂ ಸತ್ಯಮೇವ ಜಯತೆ .  

Sunday 1 April 2012

ಹಕ್ಕಿಮರಿ

ಬರುವಾಗ ದಾರಿಯಲಿ ಬಿದ್ದಿತ್ತೊಂದು ಹಕ್ಕಿಮರಿ
ಒದ್ದಾಡುತ್ತಿತ್ತು ತನ್ನ ರಕ್ಷಣೆಗಾಗಿ ಪರಿಪರಿ
ಅಚಾನಕ್ಕಾಗಿ ಕಂಡಿತದು ನನ್ನ ಕಣ್ಣಿಗೆ
ಎತ್ತಿ ತಂದೆನು ಮೆಲ್ಲಗೆ ನಮ್ಮಮನೆಗೆ
ನೋಡಿದರೆ ಕಾಲು ಮುರಿದಿತ್ತು
ಕೆಂಪಿರುವೆ ಕಡಿದಿತ್ತು
ಕೂಗುತಿತ್ತು ಆಗಾಗ ಅದರ ವೇದನೆಗಾಗಿ
ಕಾಲಮೇಲೆ ಕುಳಿಸಿಕೊಂಡರೆ ಇರುತ್ತಿತ್ತು ಸುಮ್ಮನಾಗಿ
ನನಗೆ ತಿಳಿದಿಲ್ಲ ಕೊಡುವದಹಾರ ಹೇಗದಕೆ
ಅದು ಚಿಕ್ಕದು ಬರುತ್ತಿರಲಿಲ್ಲ ಆಹಾರ ಹೆಕ್ಕಿ ತಿನ್ನುವದಕೆ
ಅಂತು ಇಂತೂ ಕಷ್ಟದಲಿ ಕಳೆಯಿತೆರಡು ದಿನ
ತಿಂದು ಬದುಕಿತು ಪಾಪ ಅನ್ನದಗಳನ್ನ
ಮೂರನೇ ದಿನ ಏನಾಯಿತೋ ಗೊತ್ತಿಲ್ಲ
ಕರೆದರೆ ಅದರ ಕೂಗಿನ ಸದ್ದೇ ಇರಲಿಲ್ಲ
ಹತ್ತಿರ ಹೋಗಿ ನೋಡಿದರೆ ಸುಮ್ಮನೆ ಕುಳಿತಿತ್ತು
ಊಟ ಕೊಟ್ಟರೆ ತಿನ್ನದೇ ಮುಷ್ಕರ ಮಾಡಿತ್ತು
ಎಂದಿನಂತೆ ತೆವಳಿಕೊಂಡು ಕಾಲಹತ್ತಿ ಕುಳಿತ್ತಿತ್ತು
ನೋಡನೋಡುತ್ತಲೇ ಅದರ ಪ್ರಾಣಪಕ್ಷಿ ಹಾರಿತ್ತು
ಅಯ್ಯೋ ಇದಾವ ಜನ್ಮದ ಋಣವೋ
ನಮ್ಮ ಮನೆಗೆ ಬರಲದಾವ ಕಾರಣವೋ
ಉಳಿದಿತ್ತದಾವ ತೀರದ ಬಾಕಿ
ದೇವರ ಮುಂದೆ ಕುಳಿತೆ ಕಣ್ಣೀರ ಹಾಕಿ