Wednesday 26 November 2014

ಇಲ್ಲೊಂದು ಪ್ರಣತಿ ಉರಿಯುತಿದೆ 
ತನ್ನ ಮೇರೆಯ ಮೀರಿ 
ದಗಿಸಿ ಪ್ರಜ್ವಲಿಸಿ ಶಾಖವನು ಎರಚಿ 
ತೈಲವೆರೆದರೆ ಕತ್ತಲೂ ಮಾಯಾ 
ಇದು ನಗುವ ನಂದಾದೀಪ ...
ಗಾಳಿಗೊಡ್ಡಿದರೆ ಗಾಡಂದಕಾರ
ನಿರ್ಲಿಪ್ತ ಶವದ ಸ್ಮಶಾನ ಮೌನ.........ಕೀಮ
ಅವನೊಬ್ಬ ಸನ್ಯಾಸಿ
ಮಾಡಿದ ಘನಘೋರ ಉಪದೇಶ
ಬ್ರಹ್ಮಚರ್ಯದ ಬಗ್ಗೆ
ರಾತ್ರಿ ಅವನಕೋಣೆಯಲಿ
ಊರ್ವಶಿಯರದ್ದೆ ಕಾರುಬಾರು ....
ಅವನೊಬ್ಬ ವಿಜ್ಞಾನಿ
ಹೇಳಿದ್ದೆಲ್ಲವೂ ವಾಸ್ತವ ಕಲ್ಪನೆಗಳ
ಜಗ ನಿಬ್ಬೆರಗಾಗೋ ಅಣಿಮುತ್ತುಗಳು
ಆದರವನ ಜೀವನದಲ್ಲಿ ಹೆಂಗಳೆಯರದೆ ಹಬ್ಬ...
ಉಪದೇಶವೆಂಬುದು ಆಚರಣೆಗಿಲ್ಲದ್ದು
ಜನರೆದಿರು ಪಾಂಡಿತ್ಯ ಪ್ರದರ್ಶನವಷ್ಟೆ
ಅವನುಪದೇಶವ ಅವನೇ ರೂಢಿಸಲಶಕ್ತ ನಾದರೆ
ಅವನೆಂತಹ ಸನ್ಯಾಸಿ...ಅವನೆಂತಹ ವಿಜ್ಞಾನಿ........ಕೀಮ
ನನ್ನಿಂದ ಆದ ತಪ್ಪಾದರೂ ಯಾವುದು ಅರಿಯೆ 
ನಿನ್ನೀ ಮೌನಕೆ ಅರ್ಥವನೂ ತಿಳಿಯೆ 
ಹೇಳಿಬಿಡು ಒಮ್ಮೆ ನನಗೆ ತಿಳಿವಂತೆ
ನಾ  ನಡೆವೆ  ಅದರಂತೆ...........................ಕೀಮ 

Thursday 20 November 2014

ಇವತ್ತು ಬೆಳಿಗ್ಗೆ ಉಪ್ಪಿಟ್ಟಿಗೆ ರವೆ ಹುರಿತಾ ಇರುವಾಗ ಇದ್ದಕ್ಕಿದ್ದಲ್ಲೇ ಅಳು ತಡೆಯದೆ ಒಂದೈದು ನಿಮಿಷ ಬಿಕ್ಕಿದೆ...ನನಗೆ ಆಶ್ಚರ್ಯ ನನಗೇನಾಯ್ತು ಅಂತ ಏನೋ ತೀವ್ರವಾದ ನೋವು ಮನಸ್ಸಿಗೆ ..ತುಂಬಾ ಯೋಚಿಸಿದಾಗ ನನ್ನೆದಿರು ಬಂತು ನಿಂತಿದ್ದು ಅದೇ ಮಂಜುಳ ಅಲ್ಲಲ್ಲ ಸರ್ಕಲ್ ಮಂಜುಳನ ಪ್ರತಿಬಿಂಬ....ದಿನಾಲೂ ಟಿವಿ ,ಪೇಪರ್ ,ಮುಖಪುಸ್ತಕ ಹೀಗೆ ಎಲ್ಲೆಂದರಲ್ಲಿ ಬರೇ ಮುಗ್ದ ಮಕ್ಕಳು ಲೈಂಗಿಕತೆಗೆ ಬಲಿಯಾಗುತ್ತಿದ್ದ ಸುದ್ದಿ ನನಗರಿವಿಲ್ಲದೇ ನನ್ನ ಮನಸ್ಸಿನ ಆಳದಲ್ಲಿ ಕೂತು ಚಡಪಡಿಕೆ ತಂದಿದೆ....ನಾನೂ ಹೆಣ್ಣಾಗಿರುವದಕ್ಕೋ ಏನೋ ನನ್ನ ಒಡಲೂ ಮೂಖವಾಗಿ ರೋಧಿಸುತ್ತಿದೆ....ಲೈಂಗಿಕತೆ ಇಬ್ಬರ ಒಪ್ಪಿಗೆ ಯಿಂದ ನಡೆದರೆ ..ಅದು ಮಿಲನ ಮಹೋತ್ಸವ,ವೈಭವ...ಅದೇ ಬಲವಂತದಿಂದ ನಡೆದರೆ ಧಾರುಣ..ಯಾರಿಗೂ ಮುದ ನೀಡದ ರಾಕ್ಷಸೀಯ ಕ್ರಿಯೆ ..ಇದು ಯಾಕೆ ಜನರಲ್ಲಿ ಅರಿವಾಗುತ್ತಿಲ್ಲ....ಪಾಪ ಈ ಮಂಜುಳನಂತವರ ಗತಿ ಊಹಿಸಿದರೆ ಹೆಣ್ಣು ಜನ್ಮ ಒಂದು ಶಾಪವೆನಿಸುತ್ತಿದೆ...ಹೌದು ಮಂಜುಳ ಯಾರು ಹೇಳ್ತೀನಿ......ಆಗಿನ್ನು ನಾನೂ ಹೈಸ್ಚೂಲ್ ಓದ್ತಾ ಇದ್ದೆ..ಮನೆಯಲ್ಲಿ ಅಮ್ಮ ತುಂಬಾ ಸ್ಟ್ರಿಕ್ಟ್ ಆಗಿ ,ಸಂಪ್ರದಾಯಿಕವಾಗಿ ಬೆಳೆಸಿದ್ದ ಕಾರಣ ಅಕ್ಕ ಪಕ್ಕದ ಮನೆಗೆಲ್ಲ ಹೋಗಿ ಮಾತಾಡ್ತಾ ಕೂರೋ ಅಭ್ಯಾಸ ಇರಲಿಲ್ಲ....ಅದಕ್ಕಾಗಿ ಪ್ರತಿವರ್ಷ ಸ್ಕೂಲ್ ರಜೆ ಬಂದಾಗ ನಾನು ಬೆಂಗಳೂರಿಗೆ ಅಣ್ಣನ ಮನೆಗೆ ಹೋಗ್ತಿದ್ದೆ...ಆ ಹಳ್ಳಿಯಲ್ಲಿ ಸರಿಯಾದ ಬಸ್ ವ್ಯವಸ್ಥೆ ಇರದ ಕಾರಣ ನಾಲ್ಕು ಘಂಟೆಗೆ ಬರೋ ಬಸ್ಸಗೇ ಹೊನ್ನಾವರಕ್ಕೆ ಹೋಗಿ ರಾತ್ರಿ ಎಂಟೋ ಒಂಬತ್ತೋ ಘಂಟೆಗೆ ಹೋಗೋ ಬೆಂಗಳೂರು ಬಸ್ ಹಿಡಿಬೇಕಾಗಿತ್ತು...ಹಾಗಾಗಿ ಬಸ್ ಸ್ಟ್ಯಾಂಡ್ ಅಲ್ಲಿ ತುಂಬಾ ಹೊತ್ತು ಕಳೆಯೋ ಪ್ರಸಂಗ......ಅಂತ ಒಂದು ಟೈಮ್ ಅಲ್ಲಿ ಕಣ್ಣಿಗೆ ಬಿದ್ದವಳು ಈ ಮಂಜುಳ...ಸರ್ಕಲ್ ಮಂಜುಳಾ ಎಂದೇ ಎಲ್ಲರ ಬಾಯಲ್ಲಿ ಪ್ರಸಿದ್ಧವಾದವಳು...ಯಾಕೆಂದರೆ ಹಗಲಿಡಿ ಅವಳು ಹೈವೇ ಬಸ್ ಸ್ಟಾಪ್ ಅಲ್ಲೇ ಕಳೆಯುತ್ತಿದ್ದಳು...ಸಾಯಂಕಾಲ ಆದ ತಕ್ಷಣ ಹೊನ್ನಾವರದ ಮೇನ್ ಬಸ್ ಸ್ಟ್ಯಾಂಡ್ ಗೆ ಬರುತ್ತಿದ್ದಳು....ನಾ ನೋಡಿದಾಗ ಮಂಜುಳ ಪ್ರಾಯದ ಹುಡುಗಿ...ಸುಮಾರು ಇಪ್ಪತ್ತೈದು ವರ್ಷ ಇರಬಹುದು.. ಇವಳು ಮಾನಸಿಕ ಅಸ್ವಸ್ಥೆಯಾಗಿದ್ದಳು...ಕೆದರಿದ ಕೂದಲು,ಹರಕಲು ಮೈ ಕಾಣುವಂತ ಬಟ್ಟೆ...ಬೆಳೆದ ಉಗುರುಗಳು ..ಕಾರಣವಿಲ್ಲದ ನಗು, ಏನೇನೋ ಅರ್ಥವಿಲ್ಲದ ಬಡಬಡಿಕೆ ...ಯಾರಾದರು ಕೊಟ್ಟ ತಿಂಡಿ ತಿನ್ನುತ್ತ ಅವಳದೇ ಲೋಕದಲ್ಲಿ ವಿಹರಿಸುತ್ತಿದ್ದವಳು....ವಯಸ್ಸಲ್ಲಿ ಅಷ್ಟು ದೊಡ್ದವಳಾದರೂ ಮುಖದಲ್ಲಿ ಅದೇನೋ ಮುಗ್ಧತೆ....ನಗುವ ಆ ಕಣ್ಣುಗಳಲ್ಲಿ ಅದೇನೋ ಹೊಳಪು.....ನಾನು ಎಷ್ಟೋ ಹೊತ್ತು ಅವಳನ್ನೇ ನೋಡುತ್ತಾ ಕುಳಿತಿದ್ದೆ....ಇದು ಪ್ರತಿ ವರ್ಷ ..ಸುಮಾರು ಮೂರು ನಾಲ್ಕು ವರ್ಷ ಸತತ ಸ್ಕೂಲ್ ರಜೆಯಲ್ಲಿ ನಾನು ಕಂಡ ದೃಶ್ಯ......ಆಮೇಲೆ ನಾನು ಕಾಲೇಜ್ ಗೆ ಹೊನ್ನಾವರಕ್ಕೆ ಹೋಗಲು ಶುರು ಮಾಡಿದಾಗ ಅವಳನ್ನ ದಿನಾಲೂ ಹೈವೇ ಸರ್ಕಲ್ ಅಲ್ಲಿ ನೋಡುತ್ತಿದ್ದೆ..ಅಷ್ಟು ವರ್ಷದಿಂದ ನಾನು ಯಾವ ಬದಲಾವಣೆಯನ್ನೂ ಅವಳಲ್ಲಿ ಕಾಣಲಿಲ್ಲ......ಹೀಗೆ ದಿನಗಳು ಉರುಳುತ್ತಿರಲು ಇದ್ದಕ್ಕಿದ್ದಂತೆ ಮಂಜುಳಾ ಸರ್ಕಲ್ಲಿಂದ ಕಾಣೆ ಆಗಿದ್ದಳು.....ಒಮ್ಮೆ ಕುತೂಹಲ ತಡೆಯದೆ ಸರ್ಕಲ್ ಅಲ್ಲಿ ಇರೋ ಒಂದು ಹಣ್ಣಿನ ಅಂಗಡಿಯವನ ಬಳಿ ಅವಳ ಬಗ್ಗೆ ವಿಚಾರಿಸಿದಾಗ ತಿಳಿಯಿತು ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಅವಳು ಗರ್ಭಿಣಿ ಎಂದು..ಕೇಳಿ ಅಲ್ಲೇ ಬಿಕ್ಕಳಿಸಿದ್ದೆ ಅವಳ ಅಸಹಾಯಕತೆ ಕಣ್ಣಮುಂದೆ ಕಟ್ಟಿದಂತಾಗಿ ...ಹಗಲೆಲ್ಲ ಹುಚ್ಚಿ ಥೂ ಅಂತೆಲ್ಲ ಉಗಿಯೋ ಜನರು ರಾತ್ರಿ ಆದಾಗ ಅದೇ ಹುಚ್ಚಿಯ ದೇಹವನ್ನೇ ರಣಹದ್ದುಗಳಂತೆ ಕುಕ್ಕುವದ ನೆನೆದು ... ಕೊನೆಗೊಂದು ದಿನ ತಿಳಿಯಿತು ಅವಳು ಮಗುವಿಗೆ ಜನ್ಮ ಕೊಡುವಾಗ ಸತ್ತಳು ಅನ್ನೋ ಸುದ್ಧಿ...ಹೀಗೆ ಮಂಜುಳನಂತವರು,ಅಸಹಾಯಕ ಮುಗ್ಧ ಮಕ್ಕಳು,ಹೀಗೆ ಅದೆಷ್ಟು ಹೆಣ್ಣು ಜೀವಗಳು ಇಂತ ಮೃಗೀಯ ವರ್ತನೆಗೆ ಬಲಿಯಾಗುತ್ತಿದ್ದಾರೋ ..ಇದಕ್ಕೆ ಉತ್ತರ ನೀಡುವವರಾರು ,ಇವರಿಗೆಲ್ಲ ಎಲ್ಲಿಯ ರಕ್ಷಣೆ...ತಮ್ಮಮೇಲೆ ಏನು ನಡೆಯುತ್ತಿದೆ ಎನ್ನೊ ಕನಿಷ್ಠ ಜ್ಞಾನವೂ ಇಲ್ಲದ ಇವರ ಪರಿಸ್ಥಿತಿ ಸುಧಾರಿಸುವದಾದರೂ ಎಂತು.......ಮನಸಾರೆ ಒಪ್ಪಿ ಸೇರಿ ಹೆಣ್ಣಿನ ಜನ್ಮಕ್ಕೆ ಸಾರ್ಥಕ್ಯ ಕೊಡುವ ಕ್ರಿಯೆ ಇಂದು ಬಲವಂತ ದೌರ್ಜನ್ಯದಿಂದ ಹೆಣ್ಣಿನ ಜನ್ಮವೇ ಶಾಪ ಅನ್ನೋ ಪರಿಸ್ಥಿತಿ ಬಂದಿರುವುದು ಶೋಚನೀಯ....ಇಂತವರಿಗೆಲ್ಲ ಧಿಕ್ಕಾರ ವಿರಲಿ....
ಸರಳ ಹಿಂದಿನ ಬದುಕಿದು
ನಿಂತ ನೀರಿನಂತೆ
ಕಾಣದೆಂದಿಗೂ ಹೊಸತು
ನವಿನತೆಗೆ ಹರಿಯಬೇಕಿದೆ
ಸುತ್ತುತ್ತ ನದಿಯಂತೆ
ಆದರದು ನಿನಗೆ ಕನಸು
ಬದುಕು ಸುಂದರ ಹೊರಗೆ ನಿಂತವರಿಗೆ
ಕನಸು ಕಾಣದಿರು ಮನವೇ
ಬಣ್ಣ ತುಂಬುವವರಿಲ್ಲದೆ
ಸೇರಿಬಿಡು ನಿನ್ನಾವರಣಕೆ
ಎಳೆದು ಕವಚವ ಸುತ್ತ
ಮರುಳೇ ಇಣುಕದಿರು ಇನ್ನೆಂದು
ಭ್ರಮೆಯ ಬದುಕಿನತ್ತ ....
ಎಂದು ಬರುವನೆ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ವಿರಹದಲಿ ಬೇಯುತಿಹೆ ಅವನಿಗಾಗಿ
ಹಸಿವು ನಿದ್ದೆಯರಿವಿಲ್ಲ ಅವನಿಂದಾಗಿ 
ಎಂದು ಅರಿವನೇ ಸಖಿ ನನ್ನ ಮನದೊಲವು
ಅವನ ನೆನಪೇ ಮೈ ಪುಳಕವೆಬ್ಬಿಸಿದೆ
ಕೆನ್ನೆ ಕೆಂಪೇರಿ ಕಂಗಳಲಿ ಮಿಂಚು
ತನುವೆಕೋ ಕಂಪಿಸಿದೆ ಹೊಸ ಭಾವದಲಿ ಮಿಂದು
ಎಂದು ಬರುವನೇ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ತಿಳಿಸದಲೇ ಆಲಿಸಬಲ್ಲನೇ ಅವ
ನನ್ನ ಹೃದಯದ ಕೂಗು
ಜಾಣನವ..ಶೂರನವ ಯಾರಿಗೂ ಹೆದರದ ಧೀರನು
ಎಂದು ಬರುವನೇ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ಅವ ಬಂದ ಆ ದಿನವೇ ನನ್ನ ಪಾಲಿಗೆ ಸ್ವರ್ಗ
ಪ್ರೇಮ ಜಾತ್ರೆಯಲಿ ಮೆರವಣಿಗೆಯ ಹಬ್ಬ
ಕಾಯುತಿರುವೆನು ನಾ ಕಾತರದಿ ಅವನಾಗಮನಕೆ
ಎಂದು ಬರುವನೇ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ಅತ್ತಿತ್ತ ಹೊರಳದ ಚಿತ್ತ ಭಿತ್ತಿಯಲಿ 
ಅಳಿಸಲಾರದ ಚಿತ್ರ ಬರೆದೊತ್ತಿ ಹೋದೆ
ಅದಾವ ಜನ್ಮದ ಬಂಧ ತಂದರುಹಿದ 
ಅದ್ಭುತ ಕಲೆಗಾರನೋ ನೀನು 
ಈ ಕಲೆಯನ್ನಾರಾಧಿಸೋ ನಿಮಿತ್ತವಷ್ಟೇ ನಾನು ...................ಕೀಮ .
ಕಣ್ಣಿನ ಗಡಿಯ ದಾಟಿ ಒಂದೊಂದು ಮಣಿಯಂತೆ 
ನೀ ಉರುಳುವುದ ನೋಡಿ ಆ ಸಮುದ್ರದ 
ಮುತ್ತು ನಾಚಿ ಚಿಪ್ಪೊಳಗೆ ಸೇರಿತು........ಕೀಮ
ಕಾರ್ಗತ್ತಲಿನ ಬದುಕಲ್ಲಿ 
ನಿನ್ನಾಗಮನ ಬೆಳಕೆಂದು ತಿಳಿದೆ
ಆ ಬೆಳಕಲ್ಲೇ ಹಲವು ಕನಸುಗಳ ಕಟ್ಟಿ 
ನಾ ನಗುವ ಚೇತನವಾದೆ 
ಓ ವಿಧಿಯೇ ದೂರ ಮಾಡದಿರು 
ನನ್ನ ಬೆಳಕನ್ನ......ಮರೆಸದಿರು
ನನ್ನ ನಗುವನ್ನ............................................ಕೀಮ

Monday 10 November 2014

ಮಗನ ಬಿಟ್ಟು ಬರ್ತಾ ಇದ್ದೆ...ಸಿಗ್ನಲ್ ಅಲ್ಲಿ ಕಾರ್ ನಿಲ್ಸಿದಾಗ ಪಕ್ಕದಲ್ಲೇ ಬಸ್ಸು ನಿಂತಿತ್ತು...ಸುಮ್ಮನೆ ಮೇಲೆ ನೋಡಿದೆ..ಅಲ್ಲಿಯ ಡ್ರೈವರ್ ನೋಡಿದಾಗ ಅವನು ನನ್ನ ಕಡೆನೇ ನೋಡಿ ಸ್ಮೈಲ್ ಮಾಡಿದ ...ಮನಸ್ಸು ಯಾಕೋ ಫ್ಲಾಶ್ ಬ್ಯಾಕ್ ಗೆ ಹೋಯ್ತು...ನಾವು ಕಾಲೇಜ್ ಓದ್ತಾ ಇದ್ವಿ ಆಗ...ನಾವು ಹೋಗುವ ಬಸ್ನ ಡ್ರೈವರ್ ಬಾಬು ಅಂತ ಇದ್ದ..ನೋಡಲು ತುಂಬಾ ಚಂದ...ಬೆಳ್ಳಗೆ ಎತ್ತರ ಒಂತರ ಟೈಗರ್ ಪ್ರಭಾಕರನ ಹಾಗೆ ಆದರೆ ಮುಖ ಹಾಗಲ್ಲ..ಯಾವಾಗಲೂ ನಗು ಮುಖ...ನಕ್ಕಿದರೆ ಚಂದದ ಹಲ್ಲು ಆದರೆ ತಲೆ ಮಾತ್ರ ಸ್ವಲ್ಪ ಬಾಲ್ಡ್....ಹುಡುಗೀರ್ ಬಗ್ಗೆ ತುಂಬಾ ಕಾಳಜಿ ..ಎಷ್ಟೆಂದರೆ ಒಂದು ಸ್ಮೈಲ್ ಹಾಕಿದರೆ ಸಾಕು ಬಸ್ ಎಲ್ಲೇ ಬೇಕಿದ್ರು ನಿಲ್ತಿತ್ತು...ವಾರದಲ್ಲಿ ಮೂರು ದಿವಸ ನಮ್ಮ ಟೈಮ್ ಬಸ್ಸಿಗೆ ಅವನಿರುತ್ತಿದ್ದ...ಆದ್ದರಿಂದ ಮೂರು ದಿವಸ ಬಸ್ ತಪ್ಪುತ್ತೆ ಅನ್ನೋ ಚಿಂತೆನೇ ಇರಲಿಲ್ಲ....ಸೀಟ್ ಸಿಕ್ಕದೆ ಇದ್ರೂ ಪರವಾಗಿರಲಿಲ್ಲ...ಯಾಕೆಂದರೆ ಅವನ ಸೀಟ್ ನ ಹಿಂದೆ ನಿಂತುಕೊಳ್ಳುತ್ತಾ ಇದ್ವಿ..ಇದರಿಂದಾಗಿ ತುಂಬಿ ತುಳುಕುತ್ತಿದ್ದ ಬಸ್ ಅಲ್ಲಿ ಬೇರೆಯವರ ಕಾಟದಿಂದ ಮುಕ್ತಿ ಸಿಗುತ್ತಿತ್ತು...ನಾವು ಎಲ್ಲಾದರೂ ರೋಡ ಅಲ್ಲಿ ನಡೆದು ಹೋಗುವಾಗ ಕಂಡ್ರೆ ಜೋರಾಗಿ ಒಂದು ಹಾರ್ನ್ ಮಾಡ್ತಿದ್ದ..ನಮಗೆಲ್ಲ ಆ ಹಾರ್ನ್ ಇಂದಲೇ ಬಾಬು ಡ್ರೈವರ್ ಬರ್ತಾ ಇದ್ದಾನೆ ಅಂತ ಗೊತ್ತಾಗ್ತಿತ್ತು...ತಿರುಗಿ ನೋಡಿದ್ರೆ ಸಾಕಿತ್ತು ಕೈ ಮಾಡಿ ಹೋಗ್ತಿದ್ದ...ಯಾವತ್ತೂ ಕೆಟ್ಟದಾಗಿ ನಡ್ಕೋತಾ ಇರ್ಲಿಲ್ಲ....ಒಂದು ಸಕ್ಕರೆ ಸ್ಮೈಲ್...ಮತ್ತು ಒಮ್ಮೊಮ್ಮೆ ಕೈ ಮಾಡಿ ಹೋಗುತ್ತಿದ್ದ ಬಾಬು ಡ್ರೈವರ್....ಹೆಚ್ಚಾಗಿ ಡ್ರೈವರ್ಗಳೆಂದರೆ  ಮೂಗು ಮುರಿಯುವವರೇ ಹೆಚ್ಚು ..ಆದರೆ ಇಂತಹ ಅಪರೂಪದ ಬಾಬು ಡ್ರೈವರ್ ಅಂತವರೂ ಇರ್ತಾರೆ ಅನ್ನೋದು ಹಲವರು ಮರೆತಿರುತ್ತಾರೆ....ಯಾರನ್ನೇ ಆಗಲಿ ಅವರ ವೃತ್ತಿಯಿಂದ ಅಳೆಯುವದು ಅಪರಾಧ...ಎಲ್ಲರಲ್ಲೂ ಒಬ್ಬ ಹೃದಯವಂತ ಅನ್ನೋನು ಇದ್ದೇ ಇರುತ್ತಾನೆ...


ನಿನ್ನ ಕಾಣದೆ ಬೇಸತ್ತು
ಸುತ್ತಿ ಸುತ್ತಿ ಭ್ರಮಣಿಯಂತೆ
ನಾ ಬಂದು ನಿಲ್ಲುವದು ಮೂಲಕ್ಕೆ .......ಕೀಮ 
ಭಾವಗಳು ಬತ್ತಿ ಬರಡಾಗಿರುವ 
ಪ್ರೀತಿಯ ಗಾಳಿಯೇ ಬೀಸದ 
ನಿನ್ನಲ್ಲಿ ನನ್ನ ಆಸೆ ಹೂಗಳರಳಲು ಹೇಗೆ ಸಾಧ್ಯ......ಕೀಮ
ಧೈರ್ಯಂ ಸರ್ವತ್ರ ಸಾಧನಂ ಅನ್ನೋದು ಕೆಲವುಸಲ ಎಷ್ಟೊಂದು ನಿಜ ಅನಿಸುತ್ತೆ...ಆವತ್ತಿನ ದಿನ ಇನ್ನೂ ಕಣ್ಣಿಗೆ ಕಟ್ಟಿದಂತಿದೆ....ಆಗಿನ್ನೂ ಡ್ರೈವಿಂಗ್ ಕಲಿತ ಹೊಸದು...ನನ್ನದು ಮಾರುತಿ 800 ಆಗಿತ್ತು...ನನ್ನ ಯಜಮಾನರು ಸೆಕೆಂಡ್ ಹ್ಯಾಂಡ್ ಕಾರ್ ಸಾಕು ಸ್ವಲ್ಪ ಸಮಯ ...ಕಲಿತ ಹೊಸದರಲ್ಲಿ ಅಲ್ಲಿ ಇಲ್ಲಿ ಗುದ್ದಿ ಹಾಳಾಗುತ್ತೆ ಅಂತ ಹೇಳಿದ್ದರು...ಅದಕ್ಕಿಂತ ಹೆಚ್ಹಾಗಿ ನನ್ನ ಡ್ರೈವಿಂಗ್ ಸ್ಟೈಲ್ ಗೊತ್ತಿದ್ದ ಅವರು ಇವಳಿಗೆ ಈಗಲೆ ಹೊಸ ಕಾರ್ ಕೊಡಿಸಿದರೆ ದಿನ ತಾನು ಪೋಲಿಸ್ ಸ್ಟೇಷನ್ ಸುತ್ತೋ ಪ್ರಸಂಗ ಬರುತ್ತೆ ಅಂತ ಅರಿತಿದ್ದರು...ನನಗೋ ಡ್ರೈವಿಂಗ್ ಕಲಿತ ಹೊಸದು ಯಾವುದಾದರೇನು ಒಟ್ಟಾರೆ ಕಾರ್ ಸಿಕ್ತಲ್ಲ ಅನ್ನೋ ಕುಶಿ....ಪಾಪ ಆ ಕಾರ್ ಗೂ ಒಡತಿಯ ಮನಸ್ಸು ತಿಳಿದಿತ್ತೋ ಏನೋ ಆತುರಗಾರನಿಗೆ ಬುದ್ಧಿ ಮಟ್ಟ ಅಂತ ... ತಾನೂ ಒಡತಿಯ ವೇಗಕ್ಕೆ ಓಡಿದರೆ ಈ ಒಡತಿ ತನ್ನನ್ನ ಗುಜರಿಗೆ ಕಳಿಸುತ್ತಾಳೆ ಅಂತ... ಅದಕ್ಕೆ ಅದು ಇದ್ದಕ್ಕಿದ್ದಲ್ಲೇ ಆಗಾಗ ಎಲ್ಲೆಂದರಲ್ಲಿ ನಿಂತು ಸ್ಲೋ ಮಂತ್ರ ಉಪದೇಶಿಸುತ್ತಿತ್ತು.....ಆವತ್ತು ಹಾಗೆ ಆಯ್ತು...ಎಲ್ಲೋ ಬೇಗ ಹೋಗೋಣ ಅಂತ ಹೊರಟೆ ಈ ಕಾರಿನದ್ದೋ ಬದಲಾಗದ ಬುದ್ಧಿ...ಗೇಟಿನ ಹತ್ತಿರವೇ ರೋಡ್ ಗೆ ಅಡ್ಡವಾಗಿ ನಿಂತ್ಬಿಡ್ತು ...ಎಷ್ಟೇ ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೂ ಮುಷ್ಕರ ಕ್ಕೆ ನಿಂತಾಗೆ ನಿಂತಿತ್ತು ...ಏನ್ಮಾಡೋದು ರೋಡ್ ಗೆ ಅಡ್ಡ ನಿಂತಿದೆ ಇನ್ನು ಬೇರೆ ವೆಹಿಕಲ್ ಬಂದ್ರೆ ಅವರುಗಳ ಬಳಿ ಸಹಸ್ರಾರ್ಚನೆ ಕೇಳಬೇಕಾಗುತ್ತೆ ಅದ್ಕೆ ನಾನು ಕಾರ್ ಬದಿಯಲ್ಲಿ ಹಾಕಲೇ ಬೇಕು.....ಆಗ ಪಕ್ಕದ ಮನೆ ಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಾಲಿಯನ್ನ ಕರೆದೆ.....ಪಾಪ ಅವನು ಮಾಡುತ್ತಿರುವ ಕೆಲಸ ಬಿಟ್ಟು ಬಂದು ಕಾರ್ ತಳ್ಳಿ ಬದಿಗೆ ನಿಲ್ಲಿಸಲು ಸಹಾಯ ಮಾಡಿ ಅವನು ಅವರ ಮನೆಯ ಗೇಟಿನ ಒಳಕ್ಕೆ ಹೋದ...ಪಾಪ ಕರೆದ ತಕ್ಷಣ ಸಹಾಯಮಾಡಿದ್ದಕ್ಕೆ ಅವನು ಕೇಳದಿದ್ದರೂ ಅವನಿಗೆ ದುಡ್ಡು ಕೊಡೋಣ ಅನಿಸಿತು....ಎಷ್ಟೆಂದ್ರೂ ಪಾಪ ಕಷ್ಟ ಜೀವಿಗಳು ...ಅದಕ್ಕೆ ದುಡ್ಡು ಕೊಡಲು ನಾನು ಅವರ ಮನೆ ಗೇಟಿನ ಒಳಕ್ಕೆ ಹೋದೆ........ಅವರ ಮನೆಯಲ್ಲೋ ಎರಡು ಜರ್ಮನ್ ಶಫರ್ಡ್ ನಾಯಿಗಳಿವೆ....ಯಾವಾಗಲೂ ಕಟ್ಟಿರುತ್ತಿದ್ದ ನಾಯಿಗಳು ನನ್ನ ದುದ್ರ್ಧೈವಕ್ಕೆ ಬಿಟ್ಟುಕೊಂಡಿದ್ದವು.........ನನ್ನನ್ನು ನೋಡಿದ್ದೇ ಹಸಿದ ತೋಳಗಳಂತೆ ಎರಗಲು ದೊಡ್ಡದಾಗಿ ಬೊಗಳುತ್ತಾ ಬಂದೇಬಿಟ್ವು....ಏನು ಮಾಡಲು ತೋಚದಾಯಿತು...ಮನಸ್ಸು ಓಡು ಅಂತಿದ್ರೂ ......ಕಾಲುಗಳು ಮಾತ್ರ ಭೂಮಿಗೆ ಅಂಟಿಕೊಂಡಿವೆಯೇನೋ ಅನ್ನೋ ಹಾಗೆ ಒಂದಿಂಚೂ ಅಲ್ಲಾಡಲೆ ಇಲ್ಲ...ಓಡಿದರೆ ನಾನು ಅವುಗಳಿಗೆ ಆಹಾರ ಆಗೋದು ನಿಶ್ಚಿತ ಅನಿಸಿಹೋಯ್ತು...ಒಮ್ಮೊಮ್ಮೆ ಇಂತ ಸಂದರ್ಭದಲ್ಲೇ ನಮ್ಮ ಸಿಕ್ಸ್ತ್ ಸೆನ್ಸ್ ಕೆಲಸ ಮಾಡುತ್ತೋ ಏನೋ.........ಏನೇ ಬಂದರೂ ದೈರ್ಯದಿಂದ ಎದುರಿಸು ಅಂತ ನನ್ನ ಒಳಮನಸ್ಸು ಗಟ್ಟಿ ನಿರ್ಧಾರ ಮಾಡಿತ್ತು....ಅಷ್ಟರಲ್ಲೇ ಓಡಿಬಂದ ಈ ನಾಯಿಗಳಲ್ಲಿ ಒಂದು ಎರಡು ಕಾಲನ್ನೆತ್ತಿ ನನ್ನ ಭುಜದ ಮೇಲೆ ಇಟ್ಟಿತ್ತು...ಇನ್ನೊಂದು ನನ್ನ ಒಳ್ಳೆ ಉಗ್ರರನ್ನ ಪರೀಕ್ಷಿಸುವಂತೆ ನನ್ನ ಸುತ್ತ ಸುತ್ತ ತೊಡಗಿತು.....ನನಗೆ ಆ ಕ್ಷಣಕ್ಕೆ ಮೃತ್ಯು ದರ್ಶನವೇ ಆಗಿತ್ತು.ಕ್ಷಣದಲ್ಲೇ ಹೆಂಡತಿ ಕಳೆದುಕೊಂಡ ಗಂಡನ ದುಃಖ ತಪ್ತಮುಖ ಹಾಗೂ ಚಿಕ್ಕ ನನ್ನೆರಡು ಮಕ್ಕಳ ಅನಾಥವಾಗಿ ಅಳುತ್ತಿರುವ ಮುಖಗಳೆಲ್ಲ ಮನಸ್ಸಲ್ಲಿ ಬಂದು ಹೋದವು....ದೇವರೇ ನೀನೇ ದಿಕ್ಕು ಅಂತ ಮನಸ್ಸಲ್ಲೇ ಅಂದುಕೊಂಡೆ ....ಪವಾಡವೇನೋ ಅನ್ನುವಂತೆ ಕಚ್ಹುವದಕ್ಕೆ ಹೆಸರಾದ ಅವರ ನಾಯಿ ಕಚ್ಚುವ ಬದಲು ನನ್ನ ತುಟಿ,ಮುಖ ಎಲ್ಲ ನೆಕ್ಕುವದಕ್ಕೆ ಶುರು ಮಾಡಿತ್ತು.....ನನಗೋ ಒಮ್ಮೆ ಮುಖ ಒರೆಸಿಕೊಳ್ಳೋಣ ಅಂತ ..ಆದರೆ ಅಲ್ಲಾಡೋಕು ಹೆದರಿಕೆ ಆಗೋ ಸಂದರ್ಭ .....ಮನೆಯವರನ್ನ ಕೂಗೋಣ ಅನ್ನೋಕೂ ಆಗ್ತಾ ಇಲ್ಲ ಈ ನಾಯಿ ನನ್ನ ಮೇಲಿಟ್ಟ ಕಾಲನ್ನ ತೆಗೆಯುತ್ತಲೇ ಇಲ್ಲ....ಅಂತೂ ಆ ಮನೆಯ ಹುಡುಗ ಮಹಡಿಯಲ್ಲಿ ಕುಳಿತು ಓದುತ್ತಿದ್ದವ ನಾಯಿ ಯಾಕೆ ಬೊಗಳುತ್ತಿದೆ ಅಂತ ಕಿಡಕಿಯಿಂದ ಇಣುಕಿ ನೋಡಿ ಸಂದರ್ಭ ಅರ್ಥ ಆಗಿ ಓಡಿ ಬಂದು ಅವರ ನಾಯಿಗಳನ್ನ ಕರೆದು ಅಂತೂ ನನಗೆ ಜೀವಭಯದಿಂದ ಮುಕ್ತಿ ಕೊಟ್ಟ....ಆಮೇಲೆ ಅವನ ತಾಯಿ ಬಂದು...ಒಳಕ್ಕೆ ಕರೆದು...ನೀರು ಕೊಟ್ರು...ಸ್ವಲ್ಪ ಹೊತ್ತು ಮಾತಾಡಿದರು....ನಾಯಿ ಸಾಕಿದವರನ್ನ ಅಥವಾ ನಾಯಿ ಬಗ್ಗೆ ಕಾಳಜಿ ಇರುವವರನ್ನ ನಾಯಿ ಗುರುತಿಸುತ್ತದೆ.....ಕಚ್ಹೊಲ್ಲವಂತೆ ...ಹೀಗೆ ಅಂತೆ ಕಂತೆಗಳ ವಿಚಾರವನ್ನ ಅವರ ಜ್ನಾನಕ್ಕನುಗುಣವಾಗಿ ಬಿತ್ತರಿಸಿದರು...ಐದು ನಿಮಿಷ ಬಿಟ್ಟು ಸ್ವಲ್ಪ ಸಮಾಧಾನವಾದಾಗ ಅಲ್ಲಿಂದ ಜಾಗ ಕಾಲಿ ಮಾಡಿದ ನನಗೆ ಪುನರ್ಜನ್ಮ ಪಡೆದ ಸಂತೋಷ......ಆದರೆ ಒಂದಂತೂ ನಿಜ ಅನಿಸಿತ್ತು ನಾವು ಯಾವದೇ ಸಂದರ್ಭದಲ್ಲೂ ದೈರ್ಯ ಕಳೆದುಕೊಳ್ಳ ಬಾರದು....ದೈರ್ಯ ಮತ್ತು ದೃಢ ಆತ್ಮವಿಶ್ವಾಸ ನಮ್ಮಲ್ಲಿದ್ದರೆ ಎಂತಹ ಸಂದರ್ಭವನ್ನೂ ಎದುರಿಸಬಹುದು...
ನನ್ನ ಸೋಲಿನ .. ನಿಟ್ಟುಸಿರೇ ನಿನ್ನ ಗೆಲುವಾದರೆ
ನಾ ಯಾವಾಗಲೂ ಸೋಲುವೆ ಬೇಸರವಿಲ್ಲದೆ..
ಗೆಲುವು ನಿನ್ನದೇ ಆಗಿರಲಿ ...............................ಕೀಮ
ನನ್ನ ಕನಸಿನ ಮೊಗ್ಗುಗಳನ್ನೆಲ್ಲ 
ನಿರ್ವಂಚನೆಯಲಿ ನಿನ್ನ ಹೃದಯದಿ ಸುರಿದೆ 
ಹೂವಾಗಿ ಪೂಜೆಗೆ ಸಲ್ಲಿಸುವದು 
ಕಸವಾಗಿ ಬುಟ್ಟಿ ಸೇರಿಸುವದು 
ಎರಡೂ ನಿನಗೇ ಸೇರಿದ್ದು........ಕೀಮ
ಇದೊಂದು ಸಣ್ಣ ಕಥೆ.....ತುಂಬಾ ಜನ ಸೇರಿ ಎಲ್ಲೋ ಹೊರಟಿದ್ದರು....ನಡೆಯುತ್ತಾ ದಾರಿಯಲ್ಲಿ ಅವರಿಗೆ ದಣಿವಾಯಿತು ಆಲ್ಲೆ ಪಕ್ಕದಲ್ಲಿದ್ದ ಶಿವ ದೇವಸ್ತಾನದಲ್ಲಿ ವಿಶ್ರಮಿಸಲೆಂದು ದೇವಸ್ಥಾನದ ಒಳಕ್ಕೆ ಹೋಗುತ್ತಾರೆ....ಅಲ್ಲಿ ಶಿವನ ಮುಂದೆ ಒಂದು ದೊಡ್ಡ ನಂದಿ ವಿಗ್ರಹ ಇತ್ತು....ಒಬ್ಬನಿಗೆ ಅದನ್ನು ಮುಟ್ಟಿ ನೋಡುವ ಆಸೆ ಆಯ್ತು ..ಆ ನಂದಿ ವಿಗ್ರಹದ ಬಳಿ ಹೋಗಿ ಅದರ ಮೈ ದಡವುತ್ತ ಅದರ ಮೂಗಿನ ಹೊರಳೆಯಲ್ಲಿ ಕೈ ಇಡುತ್ತಾನೆ...ಅದರಲ್ಲಿ ಮೊದಲೇ ಸ್ಥಾಪಿತವಾದ ಒಂದು ಚೇಳು ಇವನ ಕೈಗೆ ಕಚ್ಚಿತು,..ಆಗ ಅವನು ಹಾ ಅಂತ ಕಿರಿಚಿದ ಮಲಗಿದ್ದ ಉಳಿದವರು ಏನಾಯ್ತು ಅಂತ ಕೇಳುತ್ತಾರೆ ....ಆಗ ಅವನಿ ತಕ್ಷಣ ಒಂದು ಯೋಚನೆ ಬರುತ್ತದೆ,...ತಾನೊಬ್ಬನೇ ಯಾಕೆ ನೋವು ಮಾಡಿಕೊಳ್ಳಬೇಕು ಉಳಿದವರಿಗೂ ನೋವಾಗಲೀ ಅನ್ನೋ ದುರಾಸೆ ಕಾಡುತ್ತೆ...ಅದಕ್ಕಾಗಿ ಅವನು ತಕ್ಷಣ ಮೊಗದಲ್ಲಿ ನಗು ತಂದುಕೊಂಡು ವ್ಹಾ ಈ ನಂದಿಯ ಮೂಗಲ್ಲಿ ಅದ್ಭುತ ಶಕ್ತಿಯಿದೆ ..ಕೈ ಇಟ್ಟರೆ ರೋಮಾಂಚನ ವಾಗುತ್ತೆ ಅನ್ನುತ್ತಾನೆ...ಆಗ ಉಳಿದವರು ಆಶ್ಚರ್ಯ ಕುತೂಹಲದಿಂದ ಅದನ್ನೇ ಅನುಸರಿಸುತ್ತಾರೆ.....ಹೀಗೆ ನಮ್ಮ ಸಮಾಜದಲ್ಲೂ ಕೂಡ ಎಷ್ಟೊಂದು ಮೌಡ್ಯಗಳು ಇಂತಹದ್ದೇ ತಳಹದಿಯಲ್ಲಿ ನಿಂತಿದೆ...ತಮಗೆ ಸಿಗದ್ದು ಬೇರೆಯವರಿಗೂ ಸಿಗಬಾರದೆಂಬ ಉದ್ದೇಶಕ್ಕೆ ಎಷ್ಟೊಂದು ಡಂಬಾಚಾರ ,ಕಟ್ಟುಪಾಡುಗಳನ್ನ ಹೇರಿದ್ದಾರೆ....ನಾವು ಅದನ್ನೇ ಕುರಿಮಂದೆಗಳಂತೆ ಅನುಸರಿಸುತ್ತ ಇದ್ದೀವಿ ಕೂಡ...ಯೋಚನಾ ಶಕ್ತಿ ಇದ್ದೂ ನಮ್ಮ ನಿರ್ಧಾರ ನಾವು ತೆಗೆದುಕೊಳ್ಳದಂತ ಪರಿಸ್ಥಿತಿಯಲ್ಲಿ...
ಅದೊಂದು ಕಾಲದಲಿ ಸಾವಿರ ಬಿಂಬದಲಿ ಚಂದವಾದವಳು 
ನಾನಾಗಿ..ಇಂದು ಸಾವಿರ ಬಿಂಬಗಳೆಲ್ಲ ಸುಂದರ 
ನಿನ್ನ ಬಿಂಬದ ಹೊರತು ಅನಿಸಿದಾಗ 
ನನ್ನ ಮನದಲ್ಲಿ ಜತನದಲಿ ಕಾಯ್ದಿರಿಸಿದ 
ನಿನ್ನ ಹೆಸರನ್ನು ಅಳಿಸುವ ಕಾಲ ಬಂದಿದೆ ಎಂದೇ ಅರ್ಥ..
ಆಗಲಿ ನಿನ್ನಿಷ್ಟವೇ ನನ್ನದು ಎಂದು ನೋವ ನುಂಗಿ
ಸ್ವೀಕರಿಸುವೆ ನಿರ್ವಂಚನೆಯ ಪ್ರೀತಿಗೆ
ನೀ ಕೊಟ್ಟ ಕಾಣಿಕೆ ಇದೆಂದು.................................ಕೀಮ
.

Friday 17 October 2014

ಶೂನ್ಯದಿಂದಲೇ ಆರಂಭ 
ಶೂನ್ಯದಲ್ಲೇ ಅಂತ್ಯ 
ಶೂನ್ಯದಲ್ಲೇ ನಿನ್ನಿರುವಯ್ಕ್ಯತೆಯಿರುವಾಗ 
ಶೂನ್ಯದಲ್ಲೆನಿದೆಯೆಂದೆಣಿಸದಿರು ಮನವೇ..........ಕೀಮ.

Thursday 16 October 2014

ಓಡುತಿರುವ ಓ ಮೇಘಗಳೆ ತುಸು ನಿಲ್ಲಿ ಅಲ್ಲೇ 
ಕಳುಹಿಸಬೇಕಿದೆ ನನ್ನೆದೆಯ ಬೆಚ್ಚನೆಯ ಭಾವಗಳ 
ನನ್ನವನಿರುವೆಡೆಗೆ....
ಜತನದಲಿ ಸಲಹಿರುವೆ ಅವನ ಪ್ರೀತಿಯನು 
ಇಂದೇಕೋ ತಡೆಯದಾಗಿಹೆ ನನ್ನ ಭಾವವನು 
ಹೊತ್ತೊಯ್ದು ತಲುಪಿಸಿರಿ ಅವನೆದಯ ಗೂಡಿಗೆ ....
ಹಾಗೆಯೇ ಸುರಿಸಿಬಿಡಿ ನಾಲ್ಕು ಹನಿ ಮಳೆ ನೀರು
ನೆನೆಪಾಗಲಿ ಅವಗೆ ನನ್ನ ಮೌನದ ಕಣ್ಣೀರು
ನೋವೆಲ್ಲ ನನಗಿರಲಿ ನಲಿವಿರಲಿ ಅವಗೆ......ಕೀಮ

Monday 6 October 2014

ಮುಸುಕಿನಿಂದ ಬೆಳಕಿಗೆ

ತುಂತುರು ಮಳೆ, ಛಳಿ ಗಾಳಿಯಲ್ಲಿ ಒಂದು ಸಣ್ಣ ಬೆಟ್ಟದ ತಪ್ಪಲಲ್ಲಿರುವ ಕೋಟೆಯಂತಿರುವ ಆಶ್ರಮಕ್ಕೆ ಬಂದು ತಲುಪಿದಳು.ಬಹಳಷ್ಟು ಕೊತುಹಲ,ಅಂಜಿಕೆ ಹಾಗೂ ಏನೋ ಅಸ್ಪಷ್ಟ ತವಕ ಅವಳನ್ನು ಕಾಡುತಿತ್ತು.ಬಹಳ ದಿನಗಳ ಆಸೆ,ಹಲವು ಘರ್ಷಣೆಗಳ ಅಂತ್ಯ ಈ ಪ್ರಯಾಣವಾಗಿತ್ತು.ಅಲ್ಲಿಯ ಹೆಬ್ಬಾಗಿಲಿನತ್ತ ಬಂದಾಗ, ಒಂದು ಕ್ಷಣ ಹಿಂದಿನ ನೆನಪಾಯಿತು.ಧ್ಯಾನ,ಪ್ರಾಣಾಯಾಮ,ಗುರುವಿನ ಭಾವ ಚಿತ್ರ,ಪವಾಡಗಳ ಬಗ್ಗೆ ಪ್ರವಚನ,ಭಜನೆಗಳಲ್ಲಿ ತಲ್ಲೀನವಾದ ಕ್ಷಣಗಳೆಲ್ಲಾ ಕಣ್ಣಮುಂದೆ ಒಮ್ಮೆ ಹಾದು ಹೋದವು.ಅಸಹಾಯಕತೆಗೆ ಅಂತ್ಯ ಹೇಳುವ ಕ್ಷಣ ಬಂತೆಂದು ಹರ್ಷಿಸಿದಳು.
ಆಶ್ರಮದ ವಾತಾವರಣ ಬಹಳ ಸುಂದರವಾಗಿತ್ತು.ಮರ ಗಿಡಗಳು,ಜರಿ ತೊರೆಗಳು ಹಾಗೂ ಬ್ರಹತ್ ಧ್ಯಾನ ಮಂದಿರ ಅವಳ ಮನ ಗೆದ್ದಿತ್ತು.ಮಾಯಾ ಜಗತ್ತಿನಲ್ಲಿ ತಲ್ಲೀನಳಾದಳು. ಭೋಜನದ ವೇಳೆ ಅಲ್ಲಿಯ ವಾಸಿಗಳು ಒಂದು ಸುಂದರ ಕಟ್ಟಡದಲ್ಲಿ ಬಗೆ ಬಗೆಯ ಖಾದ್ಯಗಳನೊಳಗೊಂಡ ಊಟ ಬಡಿಸಿದರು.ನಂತರ ಬೆಟ್ಟದ ಮೇಲಿರುವ ಒಂದು ವೈವಿದ್ಯಮಯ ಕಲ್ಲುಗಳ ಮಂಟಪಕ್ಕೆ ಕರೆದೊಯ್ದು ಧ್ಯಾನ ಮಾಡಲು ಹೇಳಿದರು. ಧ್ಯಾನದ ಬಳಿಕ ಒಂದು ಚಿಕ್ಕ ಕುಟೀರದ ಬಳಿ ಕರೆದುಕೊಂಡು ಹೋದರು.ಅಲ್ಲಿ ನೂರಾರು ಭಕ್ತರು ಭಜನೆಯಲ್ಲಿ ತಲ್ಲೀನರಾಗಿದ್ದರು.ಅವಳೂ ಅವರೊಂದಿಗೆ ಧ್ವನಿ ಗೂಡಿಸಿ ಗುರುವಿನ ದರುಶನಕ್ಕಾಗಿ ಕಾಯ ತೊಡಗಿದಳು.
ಎಷ್ಟೋ ಸಮಯದ ನಂತರ ಜಯಕಾರಗಳ ಧ್ವನಿ ಅವಳನ್ನ ಎಚ್ಚರಿಸಿತು.ತಾನು ಬಂದ ಮಹದ್ದೊದೇಶ ಅವಳನ್ನ ವಾಸ್ತವಕ್ಕೆ ತಂದಿತು. ಉದ್ದನೆಯ ಶಲ್ಯವನ್ನು ಮೈಗೆರಸಿ ಬಿಸುವ ಗಾಳಿ ಮಳೆಯಲ್ಲಿ ಜಯ ಘೋಶ ಮತ್ತು ಜನಗಳ ಮಧ್ಯದಲ್ಲಿ ನಿಧಾನವಾಗಿ ಭಕ್ತ ಸಮೂಹದೆಡೆಗೆ ಕೈ ಬೀಸುತ್ತಾ ,ಗುಂಪಿನಲ್ಲಿ ಹಲವರ ತಲೆಸವರಿ ಪ್ರವಚನ ಮಾಡುವ ಸ್ಥಳಕ್ಕೆ ಗುರುಗಳು ಪಾದ ಬೆಳೆಸಿದರು.ದೀರ್ಘ ಪ್ರವಚನಕ್ಕೆ ಭಕ್ತರು ಪರವಶರಾದರು.ಆದರೆ ಅವಳಿಗೆ ಅದೆಲ್ಲಾ ಬರೇ ಮಾತುಗಳಾಗಿದ್ದವು. ಗುರುವಲ್ಲಿ ತನ್ನ ನೋವನ್ನು ಹೇಳಿಕೊಂಡು ತನ್ನ ಸಮಸ್ಯೆಗೆ ಅದ್ಭುತವಾದ ಪರಿಹಾರ ಸಿಗುವದೆಂಬ ನಂಬಿಕೆಯಲ್ಲಿ ಬಂದಿದ್ದಳು. ಪ್ರವಚನದ ನಂತರ ಗುರುವನ್ನು ಭಕ್ತರು ಮುತ್ತಿಗೆ ಹಾಕಿದರು.ನೂಕು ನುಗ್ಗಲಲ್ಲಿ ಅವರ ಬಳಿ ಹೋಗಿ ತನ್ನ ನೋವನ್ನು ಕಣ್ಣೀರಿಟ್ಟು ಅರಿಕೆ ಮಾಡಿಕೊಂಡಳು. ಗುರುವು
ಹುಂ ಎಂದು ಎದ್ದು ಮುಂದೆ ಸಾಗಿದರು. ಆ ಕ್ಷಣದಲ್ಲಿ ಅವಳಿಗೆ ತನ್ನ ಅಸಹಾಯಕತೆ ಹಾಗೂ ಮುಗ್ಧ ನಂಬಿಕೆಯ ಬಗ್ಗೆ ಅರಿವಾಯಿತು.ಶಾಂತಿ,ಪ್ರೀತಿಯ ದೂತ,ಅಪಾರ ಪವಾಡಗಳ ಶಿಲ್ಪಿ,ನಡೆದಾಡುವ ಸಾಕ್ಷಾತ್ ದೇವರು ಅಂದದ್ದೆಲ್ಲ ಬರಿ ಜಾಹಿರಾತು.ತನ್ನಂತರಂಗದ ಸಮಸ್ಯೆಗಳಿಗೆ ತಾನೇ ಜವಾಬ್ದಾರಿ,ತನ್ನ ನೋವುಗಳಿಗೆ ಪರಿಹಾರ ನನ್ನ ಮನಸ್ಸಲ್ಲೇ ಹುಡಕಬೇಕು. ತನ್ನೊಡನೆ ತನ್ನ ಆಧಾರಕ್ಕೆ ತನ್ನ ಕುಟುಂಬವೆಂಬುದು ಅರಿವಾಯಿತು.ನಿಧಾನವಾಗಿ ಕಣ್ಣೊರೆಸುತ್ತಾ ದೂರದಲ್ಲಿ ನಿಂತಿದ್ದ ಗಂಡ,ಮಗನೆಡೆಗೆ ಕಾಲಿಟ್ಟಳು.ಮಂಜು ಮುಸುಕಿನಿಂದ ಶುಭ್ರ ಬೆಳಕಿನೆಡೆಗೆ ಹೋದ ಅನುಭವವಾಯಿತು. ಓಡಿ ಹೋಗಿ ಮಗುವನ್ನು ತಬ್ಬಿಕೊಂಡಳು.ತಾ ಪಡೆದದ್ದೇ ತನ್ನ ಭಾಗ್ಯ,ತನ್ನವರೇ ತನ್ನ ಸರ್ವಸ್ವವೆಂದುಕೊಂಡು ಆ ಮಾಯಾ ಲೋಕದಿಂದ ತನ್ನೂರಿಗೆ ಹಿಂತಿರುಗಿದಳು.
                                   


ತಾನೊಂದು ಬಗೆದರೆ.......

ರಾಜೇಶನದು ಸುಂದರ ದಾಂಪತ್ಯ.ಮನ ಮೆಚಿದ್ದ ಮಡದಿ ಸ್ವಾತಿ.ಒಳ್ಳೆಯ ಉದ್ಯೋಗದಿಂದಾಗಿ ಕೈತುಂಬಾ ಸಂಬಳ,ಕಾರು ಬಂಗಲೆ ಎಲ್ಲ ಇದ್ದ ಶ್ರೀಮಂತ ಜೀವನ.ಕೊರತೆಯೊಂದೆ ಮದುವೆಯಾಗಿ ಹತ್ತು ವರುಷ ಕಳೆದರೂ ಅವರ ಹೆಸರು ಹೇಳೋ ವಂಶದ ಕುಡಿ ಮೂಡದಿರುವದು.
ಸ್ವಾತಿಗಾದರೋ ಮಕ್ಕಳುಎಂದರೆ ಪಂಚಪ್ರಾಣ.ದಿನಾಲೂ ಸಾಯಂಕಾಲ ತಮ್ಮ ಮನೆಯಿದಿರು ಇರುವ ಉದ್ಯಾನದಲ್ಲಿ ಆಡುವ ಮಕ್ಕಳನ್ನು ಕಿಟಕಿಯಿಂದ ಗಂಟೆಗಟ್ಟಲೇ ನೋಡುತ್ತಾ ಮೈಮರೆಯುತ್ತಿದ್ದಳು. ಆದರೂ ರಾಜೇಶನ ಮನಸ್ಸಿಗೆ ಬೇಸರವಾಗಬಾರದೆಂದು ತನ್ನ ನೋವನ್ನು ಅಡಗಿಸಿ ಸತ್ತ ನಗುವಿಗೆ ಜೀವತುಂಬೊ ಪ್ರಯತ್ನ ಮಾಡುತ್ತಿದ್ದಳು.ಮಡದಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ರಾಜೇಶನಿಗೆ ಪತ್ನಿಯ ನಗುವಿನ ಹಿಂದಿರುವ ನೋವನ್ನು ಅರಿಯುವದು ಕಷ್ಟವಾಗಿರಲಿಲ್ಲ. ಹೀಗಿರುವಾಗ ಒಂದು ದಿನ ರಾಜೇಶ ಒತ್ತಾಯ ಮಾಡಿ ಹೆಂಡತಿಯನ್ನ ವೈದ್ಯರ ಬಳಿ ಕರೆದೊಯ್ಯುತ್ತಾನೆ. ಇಬ್ಬರನ್ನು ಪರೀಕ್ಷಿಸಿದ ವೈದ್ಯರ ರಿಪೋರ್ಟ್ ಹೇಳಿದ್ದು ತೊಂದರೆ ಇರೋದು ರಾಜೆಶನಲ್ಲಿ ಎಂದು. ಎಷ್ಟೇ ಚಿಕಿತ್ಸೆ ಮಾಡಿಸಿದರೂ ಯಾವ ಪ್ರಯೋಜನವೂ ಆಗುವದಿಲ್ಲ. ರಾಜೇಶನಿಗೆ ಮನಸ್ಸಿನಲ್ಲಿ ಅಪರಾಧಿ ಪ್ರಜ್ಞೆ ಕಾಡುತ್ತದೆ. ತನ್ನ ಸರ್ವಸ್ವವನ್ನು ದಾರೆಯೆರೆದು ತನ್ನ ಜೀವನವನ್ನು ಸ್ವರ್ಗ ಮಾಡಿದ ಹೆಂಡತಿಯ ಒಂದೇ ಒಂದು ಬಯಕೆಯನ್ನ ಈಡೇರಿಸುವಲ್ಲಿ ನಾನು ಸೋತುಹೋದೆ ಎಂದು ಅವನ ಮೇಲೆ ಅವನಿಗೆ ಬೇಸರ ಮೂಡುತ್ತದೆ. ಹೇಗಾದರೂ ತನ್ನ ಹೆಂಡತಿಯ ಆಸೆಯನ್ನ ಪೂರೈಸಲೇ ಬೇಕೆಂದು ನಿರ್ಧರಿಸಿದ. ಆಗ ಅವನಿಗೆ ನೆನಪಾದದ್ದು ತನ್ನ ಜೀವದ ಗೆಳೆಯ ಅವಿವಾಹಿತ ಶ್ಯಾಮ್. ಅವನ ಬಳಿ ಹೋಗಿ ತನ್ನ ಮನಸ್ಸಿನ ನೋವನ್ನೆಲ್ಲ ಎಳೆಎಳೆಯಾಗಿ ಬಿಚ್ಚಿಟ್ಟು ನನ್ನ ಹೆಂಡತಿಯ ಮೊಗದಲ್ಲಿ ನಗು ಚಿಮ್ಮುವಂತೆ ಮಾಡುವ ಕೆಲಸ ನಿನ್ನದು ಎಂದು ವಿನಂತಿಸಿದ. ಮೊದಲು ಒಪ್ಪದ ಶ್ಯಾಮ್ ಕೊನೆಯಲ್ಲಿ ಸ್ನೇಹಕ್ಕೆ ಮಣಿದು ಒಪ್ಪಿಕೊಂಡ. ಗೆಳೆಯನನ್ನೇನೋ ಒಪ್ಪಿಸಿಯಾಯ್ತು ಆದರೆ ಹೆಂಡತಿಯನ್ನು ಒಪ್ಪಿಸೋದು ಹೇಗೆ ಎಂದು ಚಿಂತಿತನಾದ. ಒಂದು ದಿನ ಗಟ್ಟಿ ಮನಸ್ಸಿಂದ ಉದ್ಯೋಗಕ್ಕೆ ರಜಾ ಹಾಕಿ ಹೆಂಡತಿಗೆ ತನ್ನ ಯೋಚನೆಯನ್ನ  ಅರುಹಿದ. ವಿಷಯ ಕೇಳಿ ಹೆಂಡತಿ ಕೆಂಡಾಮಂಡಲವಾದಳು. ಅವಳನ್ನ ರಮಿಸುತ್ತಾ ಇದಕ್ಕೆ ನೀನು ಒಪ್ಪಲೇ ಬೇಕೆಂದಾಗ ಹೆಂಡತಿ ಕೋಪದಲ್ಲಿ ಅವನಿಂದಲೂ ನನಗೆ ಮಕ್ಕಳಾಗದಿದ್ದರೆ ಇನ್ನೆಷ್ಟು ಜನರಿಗೆ ನನ್ನನ್ನು ಒಡ್ಡುವಿರಿ ಎಂದು ಮನಚುಚ್ಚುವಂತೆ ಪ್ರಶ್ನಿಸುತ್ತಾಳೆ.ಕೋಪ ನೋವು,ಅಪಮಾನದಿಂದ ಕಣ್ಣೀರಿಡುತ್ತಿರುವ ಹೆಂಡತಿಯನ್ನ ಒಪ್ಪಿಸುವದು ಸುಲುಭದ ಕೆಲಸವಾಗಿರಲಿಲ್ಲ.ಅವಳಿಗೆ ಮಹಾಭಾರತದ ಕುಂತಿಯ ಕಥೆ,ಪಾಂಚಾಲಿಯ ಕಥೆ ಹೀಗೆ ಹಲವು ಹತ್ತು ಉದಾಹರಣೆ ಕೊಟ್ಟು ಅವಳ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾನೆ.ನೀನು ಇದಕ್ಕೆ ಒಪ್ಪದಿದ್ದರೆ ನಿನ್ನ ತಾಯ್ತನದ ಸೌಭಾಗ್ಯವನ್ನ ಕಿತ್ತುಕೊಂಡೆ ಎಂಬ ಕೊರಗಿನಲ್ಲೇ ನಾನು ಜೀವನ ಸವೆಸಬೇಕಾಗುತ್ತದೆ.ಎಂದು ಪರಿಪರಿಯಾಗಿ ತಿಳಿ ಹೇಳಿದ.

ಈಗ ಅವನ ತಲೆಯಲ್ಲಿ ಇವರಿಬ್ಬರನ್ನು ಒಂದುಗೂಡಿಸುವ ಪರಿ ಹೇಗೆಂಬ ಯೋಚನೆ ಸುತ್ತತೊಡಗಿತು. ಎಷ್ಟೇ ಮನ ಒಲಿಸಿದರೂ ನನ್ನ ಉಪಸ್ಥಿತಿಯಲ್ಲಿ ಕಂಡಿತಾ ನನ್ನ ಹೆಂಡತಿ ಒಪ್ಪುವದಿಲ್ಲ,ಶ್ಯಾಮನಿಗೂ ಕಷ್ಟ ಅದಕ್ಕಾಗಿ ಇವರಿಬ್ಬರನ್ನೇ ಬಿಟ್ಟು ಎಲ್ಲಾದರೂ ಹೋಗಬೇಕು ಎಂದು ನಿರ್ಧರಿಸಿದ. ಅದಕ್ಕೆ ದೇವರೇ ದಾರಿ ತೋರಿದಂತೆ ಅವನಿಗೆ ಕಚೇರಿಯಿಂದ ಬೇರೆ ಊರಿಗೆ ವರ್ಗಾವಣೆಯಾಗಿತ್ತು. ಹೆಂಡತಿಗೆ ತನ್ನ ವರ್ಗಾವಣೆ ವಿಚಾರ ತಿಳಿಸಿ ತಾನು ಮೊದಲು ಅಲ್ಲಿ ಹೋಗಿ ಎಲ್ಲ ವ್ಯವಸ್ಥೆಮಾಡಿ ನಿನ್ನನ್ನು ಕರೆದೊಯ್ಯುತ್ತೇನೆ ಎಂದು ಹೇಳಿ ಸ್ವಾತಿಯನ್ನೊಬ್ಬಳನ್ನೇ  ಮನೆಯಲ್ಲಿ ಬಿಟ್ಟು ತನ್ನ ಗೆಳೆಯ ಶ್ಯಾಮನಿಗೆ ಬಂದು ಸ್ವಾತಿ ಜೊತೆ ಇರುವಂತೆ ಹೇಳಿ ಹೊರಡುತ್ತಾನೆ. ಹೊರಟುನಿಂತ ರಾಜೇಶನಿಗೆ ಹೃದಯವೇಕೋ ಭಾರ ಅನಿಸುತ್ತಿತ್ತು.ಕಣ್ಣಿನ ಆಳದಲ್ಲಿ ತಿಳು ನೀರಿನ ಪೊರೆಯಿತ್ತು.ಆದರೂ ಏನನ್ನು ತೋರಗೊಡದೆ ಇದು ತನ್ನದೇ ನಿರ್ಧಾರ,ಸ್ವಾತಿ ನಿರಪರಾಧಿ ಎಂದು ಗಟ್ಟಿ ಮನಸ್ಸು ಮಾಡಿ ಹೆಂಡತಿಯ ಹಣೆಗೆ ಚುಂಬಿಸಿ ಹೊರಟ.ಸ್ವಾತಿಗೋ ಹೃದಯವೇ ಕಿತ್ತು ಬಾಯಿಗೆ ಬಂದ ಅನುಭವ.ಕಣ್ಣಲ್ಲಿ ಧಾರಾಕಾರ ನೀರು ಸುರಿಯುತ್ತಿತ್ತು. ರಾಜೇಶ ಹೊಸ ಪರಿಸರದಲ್ಲಿ,ಕೆಲಸದಲ್ಲಿ ತನ್ನನ್ನೆ ತಾನು ಮರೆತ. ಅಲ್ಲಿಯ ಅತೀ ಕೆಲಸದಿಂದ ಅವನಿಗೆ ಬೇಗನೆ ಹಿಂದಿರುಗಲು ಆಗಲಿಲ್ಲ .

ಶ್ಯಾಮ್ ಗೆಳೆಯನಿಗೆ ಮಾತುಕೊಟ್ಟಂತೆ ಹದಿನೈದು ದಿನ ಸ್ವಾತಿ ಜೊತೆ ಇದ್ದು ಹೊರಟು ಹೋಗುತ್ತಾನೆ ಸ್ವಾತಿ ತನ್ನ ತಾಯಿ ಮನೆಗೆ ಹೋಗಿ ಅವರ ಜೊತೆ ಇರುತ್ತಾಳೆ. ಹೀಗೆ ಒಂದೂವರೆ ತಿಂಗಳು ಕಳೆದಾಗ ಸ್ವಾತಿ ಗರ್ಭಿಣಿ ಎಂದು ವೈದ್ಯರ ಪರೀಕ್ಷೆಯಿಂದ ತಿಳಿದುಬರುತ್ತದೆ. ವಿಷಯವನ್ನ ರಾಜೇಶ್ ಗೆ ಫೋನ್ ಮೂಲಕ ತಿಳಿಸುತ್ತಾಳೆ. ಸಂತೋಷಗೊಂಡ ರಾಜೇಶ್ ಹೆಂಡತಿ ನೋಡಲು ಬರುತ್ತಾನೆ.ಜೊತೆಗೆ ಶ್ಯಾಮ್ ಗೂ ವಿಷಯ ತಿಳಿಸುತ್ತಾನೆ.  ಗರ್ಭಿಣಿ ಯರ ಸಹಜ ಸುಸ್ತು ಮತ್ತು ಮನದ ಮೂಲೆಯಲ್ಲೆಲ್ಲೋ ತಪ್ಪಿತಸ್ಥ ಭಾವನೆ ಎಲ್ಲವೂ ಸೇರಿ ಸ್ವಾತಿ ತುಂಬಾನೇ ನಿಶ್ಯಕ್ತಳಾಗಿದ್ದಳು. ರಾಜೇಶ್ ಎರಡು ದಿನ ಅವಳ ಜೊತೆಗೆ ಇದ್ದು ವಾಪಸ್ ಊರಿಗೆ ಹೊರಡುತ್ತಾನೆ.ಹಾಗೂ ಹೀಗೂ ನವ ಮಾಸಗಳು ತುಂಬಿ ನಿರೀಕ್ಷೆಯ ಕ್ಷಣಗಳು ಹತ್ತಿರ ಬಂದೇ ಬಿಡುತ್ತವೆ. ಶ್ಯಾಮ್ ಗೆ ಯಾಕೋ ಮನದಲ್ಲಿ ಗೊಂದಲ. ತಾನು ಇನ್ನು ಯಾವದೇ ಕಾರಣಕ್ಕೂ ರಾಜೇಶ್ ಮತ್ತು ಸ್ವಾತಿ ಬಾಳಲ್ಲಿ ಅಡ್ಡ ಬರಬಾರದು ಅವರು ಸಂತೋಷವಾಗಿರಬೇಕು ಎಂದು ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟು ವಿದೇಶಕ್ಕೆ ಹೊರಡಲು ಸಿದ್ಧನಾಗುತ್ತಾನೆ. ಹೋಗುವಾಗ ಒಮ್ಮೆ ರಾಜೇಶ ಗೆ ಕೊನೆವಿದಾಯ ಹೇಳಿ ಹೋಗೋಣ ಅಂತ ರಾಜೇಶನನ್ನು ಕಾಣಲು ಬರುತ್ತಾನೆ. ಇಬ್ಬರೂ ಮಾತನಾಡುತ್ತ ಹೋಟೆಲೊಂದರಲ್ಲಿ ಊಟ ಮುಗಿಸಿ ಇನ್ನೇನು ಹೊರಡಬೇಕೆನ್ನುವಾಗ ರಾಜೇಶನಿಗೆ ಸ್ವಾತಿಯ ತಂದೆಯಿಂದ ಫೋನ್ ಕರೆ ಬರುತ್ತದೆ. ಅವಳ ತಂದೆ  ಸ್ವಾತಿಗೆ ಹೆರಿಗೆ ನೋವು ಬಂದಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವಿಷಯ ತಿಳಿಸುತ್ತಾರೆ. ಆಗ ಶ್ಯಾಮ್ ತನ್ನ ಕಾರ್ ಅಲ್ಲೇ ರಾಜೇಶ್ ನನ್ನು ಬಸ್ ನಿಲ್ದಾಣಕ್ಕೆ ಬಿಡುತ್ತೇನೆ ಎಂದು ಹೇಳಿ ಇಬ್ಬರೂ ಕಾರಲ್ಲಿ ಹೊರಡುತ್ತಾರೆ.ಆದರೆ ಇವರ ಸ್ನೇಹ ನೋಡಿ ಆ ದೇವರಿಗೂ ಅಸೂಯೆ ಆಯ್ತೇನೋ ಎಂಬಂತೆ ಎದುರಲ್ಲಿಯ ವಾಹನವೊಂದು ಇವರ ಕಾರಿಗೆ ಗುದ್ದಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತರಾಗುತ್ತಾರೆ. ಇತ್ತ ಸ್ವಾತಿಗೆ ಹೆರಿಗೆನೋವು ಜಾಸ್ತಿ ಆಗುತ್ತದೆ. ವೈದ್ಯರು ಸ್ವಾತಿ ತಂದೆಯ ಬಳಿ ಬಂದು ಸ್ವಾತಿಯ  ಸ್ಥಿತಿ ತುಂಬಾ ಗಂಭೀರವಾಗಿದ್ದು ಹೊಟ್ಟೆಯಲ್ಲಿ ಅವಳಿ ಮಕ್ಕಳಿದ್ದ ಕಾರಣ ಒಂದೋ ತಾಯಿ ಅಥವಾ ಮಕ್ಕಳು ಬದುಕುತ್ತಾರೆ ಎಂದು ಒಪ್ಪಿಗೆ ಪತ್ರ ಬರೆಸಿಕೊಳ್ಳುತ್ತಾರೆ. ಅಂತು ಕಷ್ಟದಲ್ಲಿ ಸ್ವಾತಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ.ಆದರೆ ಇಬ್ಬರೂ ಮಕ್ಕಳಲ್ಲಿ ಯಾವದೇ ಚಲನೆ ಇಲ್ಲದೆ ಇರುವದನ್ನು ಕಂಡು  ತತ್ತರಿಸಿದ ಸ್ವಾತಿ ತಂದೆಗೆ ಇನ್ನೊಂದು ಶಾಕ್ ಕಾದಿರುತ್ತದೆ.ಅವರ ಮೊಬೈಲ್ ಗೆ ಪೋಲಿಸ್ ಕರೆ ಮಾಡಿ ರಾಜೇಶ್ ಮತ್ತು ಶ್ಯಾಮ್ ಅಪಘಾತ ದಲ್ಲಿ ತೀರಿ ಹೋದ ವಿಷಯ ತಿಳಿಸುತ್ತಾರೆ.ಅವರು ತಡೆಯಲಾರದ ನೋವಿನಿಂದ ಕುಸಿಯುತ್ತಾರೆ.ಅದೇ ಸಮಯಕ್ಕೆ ಸತ್ತಂತಿದ್ದ ಎರಡು ಮಕ್ಕಳೂ ಒಮ್ಮೆಲೇ ಕಾಲನ್ನು ಅಲ್ಲಾಡಿಸುತ್ತ ಕೂಗುತ್ತವೆ.

ಮಾರನೆ ದಿವಸ ವಿಷಯ ತಿಳಿದ ಸ್ವಾತಿಯ ಅಳು ಮುಗಿಲು ಮುಟ್ಟುತ್ತದೆ ಆದರೆ ಎಷ್ಟು ಅತ್ತರೂ ಹೋದವರು ತಿರುಗಿ ಬರಲಾರರು ಅಲ್ಲವೇ? ಸ್ವಾತಿ ನಿಧಾನಕ್ಕೆ ತನ್ನ ಮಕ್ಕಳ ಆಟ ಲೀಲೆ ಗಳನ್ನು  ನೋಡಿ ದುಃಖ ಕಡಿಮೆ ಮಾಡಿಕೊಳ್ಳುತ್ತಾಳೆ. ಜೀವದ ಗೆಳೆಯರಾದ ರಾಜೇಶ್ ಶ್ಯಾಮ್ ಸಾವಿನಲ್ಲೂ ಒಂದಾಗಿ  ತನ್ನ ಮಕ್ಕಳಲ್ಲೇ ಸೇರಿದ್ದಾರೆ ಎಂದು ಸ್ವಾತಿ ಭಾವಿಸುತ್ತಾಳೆ.





ನಾಳೆ ಗಣೇಶನ ಹಬ್ಬ..ನಾವು ಹಬ್ಬ ಆಚರಿಸೋ ಮುನ್ನ ಗಣೇಶನ ದೇಹ ರಚನೆ ಕುರಿತು ಸ್ವಲ್ಪ ತಿಳ್ಕೊಂಡ್ರೆ ಇನ್ನು ಹೆಚ್ಚಿನ ಭಕ್ತಿ..ಸಂತೃಪ್ತಿ....ಇದು ಶ್ರೀ ಶ್ರೀ ರವಿಶಂಕರ ಗುರೂಜಿಯವರ ಪ್ರವಚನದ ಸಾರಾಂಶ ...ನನಗೆ ತಿಳಿದದ್ದನ್ನ ಬರಿತಿದ್ದೀನಿ..ತಪ್ಪಿದ್ದರೆ ಯಾರಾದ್ರೂ ತಿಳಿದವರು ಇದ್ದರೆ ಅವರ ಅಭಿಪ್ರಾಯ ತಿಳಿಸಿ..ನಾನೂ ಹೆಚ್ಚಿನದನ್ನ ತಿಳ್ಕೋತೀನಿ..
ಗಣೇಶ ಅಂದರೆ ಮನುಷ್ಯನ ದೇಹದ ಆನೆಯ ಮುಖದವ ..ಯೋಚಿಸಿದಾಗ ಆಶ್ಚರ್ಯ ಆಗುತ್ತೆ...ಮನುಷ್ಯನಿಗೆ ಅಷ್ಟು ದೊಡ್ಡ ಪ್ರಾಣಿಯ ತಲೆ ಸರಿ ಹೋಗುತ್ತಾ ಅಂತ...ಆದರೆ ಇದರ ಆಧ್ಯಾತ್ಮಿಕ ಅರ್ಥ...ಎಲ್ಲ ಜೀವಿಗಳಲ್ಲಿ  ಮನುಷ್ಯ ಶರೀರ  ಉತ್ತಮವಾದದ್ದು...ಹಾಗೆ ಎಲ್ಲ ಜಿವಿಗಳಲ್ಲಿ ದೂಡ್ಡ ತಲೆ ಅಂದರೆ ಆನೆಯದ್ದು..ದೊಡ್ಡ ತಲೆ ಅಂದರೆ ಅನಂತ ಜ್ಞಾನದ ಸಂಕೇತ. ಅಂದರೆ ಉತ್ತಮ ಶರೀರದಲ್ಲಿ ಅನಂತ ಜ್ಞಾನ ಶಕ್ತಿ ಹೊಂದಿರುವವನು...ಇನ್ನು ಸೊಂಡಿಲು ..ಅಂದರೆ ಮೂಗು ..ಮೂಗು ನಮಗೆ ಬರೆ ಜ್ಞಾನೇಂದ್ರಿಯ ಆದರೆ ಆನೆಗೆ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯ....ಆನೆಯ ಕಣ್ಣು ಚಿಕ್ಕದ್ದು ಮತ್ತು ಕಿವಿ ದೊಡ್ಡದು . ನೋಡೋದಕ್ಕೂ ಕೇಳೋದಕ್ಕೂ ಸಮನ್ವಯ ಕಲ್ಪಿಸಿಕೊಂಡರೆ ಮಾತ್ರ ಜ್ಞಾನ ಉಂಟಾಗುತ್ತೆ. ಆನೆ ಕಿವಿಯಿಂದ ಆಗಾಗ ಕಣ್ಣಿಗೆ ಬೀಸಿಕೊಳ್ಳುತ್ತೆ ಅಂದರೆ ನೋಡೋದಕ್ಕೂ ಕೇಳೋದಕ್ಕೂ ಸಮನ್ವಯ ತಂದುಕೊಳ್ಳುತ್ತೆ. ಆಗ ಮಾತ್ರ ಯಾವದೇ ವಿಷಯ ಸತ್ಯವಾಗೋಕೆ ಸಾಧ್ಯ. ಹಾಗೆ ಕೃತ್ಯಕ್ಕೂ ವಾಸನೆಗೂ ಸಂಬಂಧ ಕಲ್ಪಿಸುತ್ತೆ ಸೊಂಡಿಲು. ಆನೆ ಸೊಂಡಿಲಿಂದ ಸ್ನಾನ ಮಾಡುತ್ತೆ ಅಂದರೆ ಜ್ಞಾನೇಂದ್ರಿಯದಿಂದ ಸ್ನಾನ ಮಾಡೋದು ಆನೆ ಮಾತ್ರ. ಗಣ ಅಂದರೆ ಗುಂಪು...ಗಣ ಅಂತಾಗಬೇಕಾದರೆ ಅದರಲ್ಲಿ ಶಿವ ಮತ್ತು ಶಕ್ತಿ ಎರಡೂ ಇರಬೇಕು. ಅಲ್ಲಿ ಒಂದು ನಿಯಮ ಇರುತ್ತೆ..ಆ ನಿಯಮವನ್ನ ಹೊಂದಿರುವಂತವನು ಅಂದರೆ ಗಣಪತಿ. ಇನ್ನು ಗಣೇಶನಿಗೆ ದೊಡ್ಡ ಹೊಟ್ಟೆ ಇದೆ..ದೊಡ್ಡ ಹೊಟ್ಟೆ ಸಂತೋಷದ ಪ್ರತೀಕ. ಜ್ಞಾನ ಇದ್ದವನ ಮುಖ ಯಾವಾಗಲೂ ಸಂತೋಷದಿಂದ ತುಂಬಿರುತ್ತೆ ..ಇದರ ಇನ್ನೊಂದು ಅರ್ಥ ಉದಾರತೆ...ಉದಾಹರಣೆ..ಸಾಂತ ಕ್ಲಾಸ್, ಲಾಫಿಂಗ್ ಬುದ್ಧ ಎಲ್ಲರಿಗೂ ದೊಡ್ಡ ಹೊಟ್ಟೆ ಅಂದರೆ ಉದಾರತೆಯನ್ನ ತೋರಿಸುತ್ತೆ. ಯಾವಾಗಲೂ ಜ್ಞಾನದ ಜೊತೆ ಸಂತೋಷ , ಉದಾರತೆ ಇರಲೇ ಬೇಕು ಇಲ್ಲದಿದ್ದರೆ ಜ್ಞಾನ ಬಂದಿಲ್ಲ ಅಂತಾನೆ ಅರ್ಥ. ಹೊಟ್ಟೆಯ ಸುತ್ತ ಒಂದು ಹಾವು ಸುತ್ತಿರೋದು..ಹಾವು ಪ್ರಜ್ಞೆಯ ಸಂಕೇತ. .ಅಂದರೆ ಸ್ವೀಕಾರ ಇರಬೇಕು,,ಸಂತೋಷ.ಇರಬೇಕು .ಎಲ್ಲದರ ಜೊತೆ ಪ್ರಜ್ಞೆ ಇರಬೇಕು ..ಇನ್ನೊಬ್ಬರ ಭಾವನೆಯ ಜೊತೆ ಸಂವೇದನಾ ಶೀಲತೆ ಇರಬೇಕು. ಇನ್ನು ಕೈಯ್ಯಲ್ಲಿ ಪಾಶ ಮತ್ತು ಅಂಕುಶ ...ಅಂಕುಶ ಎಚ್ಚರಿಸುವಂತದ್ದು..ಅಂದರೆ ಶಕ್ತಿಯನ್ನ ಜಾಗರೂಕತೆ ಮಾಡುವದು..ಶಕ್ತಿ ಜಾಗೃತಿಯಾದಾಗ ಅದನ್ನ ಹಿಡಿತದಲ್ಲಿಟ್ಟು ಕೊಳ್ಳಲು ಪಾಶ ಬೇಕು. ಇಲ್ಲದಿದ್ದರೆ ಜ್ಞಾನ ಎಲ್ಲೆಂದರಲ್ಲಿ ಓಡುತ್ತೆ ..ಕುದುರೆ ಸರಿಯಾಗಿ ಓಡಲು ಹೇಗೆ ಕಡಿವಾಣ ಬೇಕೋ ಹಾಗೆ..ಇಲ್ಲದಿದ್ದರೆ ಜ್ಞಾನ ವಿನಾಶಕ್ಕೆ ಎಡೆ ಮಾಡಿಕೊಡುತ್ತೆ...ಇನ್ನೊಂದು ಕೈಯ್ಯಲ್ಲಿ ಮೋದಕ ..ಮೋದ ಅಂದರೆ ಸಂತೋಷ..ಕ ಅಂದರೆ ಇಂದ್ರಿಯ..ಯಾವದು ನಮ್ಮ ಎಲ್ಲ ಇಂದ್ರಿಯಗಳಿಗೆ ಸಂತೋಷವನ್ನು ಕೊಡುತ್ತದೋ ಅದು ಮೋದಕ...ಅಂದರೆ ಜ್ಞಾನ ನಮ್ಮ ಮನಸ್ಸಿಗೆ ಮಾತ್ರ ಅಲ್ಲ ಎಲ್ಲ ಇಂದ್ರಿಯಗಳಿಗೂ ಸಂತೋಷ ತಂದುಕೊಡುತ್ತದೆ...ಇನ್ನು ಇಲಿ ಮೇಲೆ ಕುಳಿತಿದ್ದು...ಜ್ಞಾನ ಬರಬೇಕಿದ್ದರೆ ದೂಡ್ಡ ಕೆಲಸದಿಂದ ಬರಬೇಕೆಂದೇನು ಇಲ್ಲ..ಒಂದು ಚಿಕ್ಕ ವಿಷಯವು ಸಾಕು...ಮೂಶಕದ ಸ್ವಭಾವ ಕತ್ತರಿಸುವಂತದ್ದು,..ಅಂದರೆ ಮೂಷಿಕ ತರ್ಕದ ಪ್ರತೀಕ ...ಜ್ಞಾನ ಕೇವಲ ಒಂದು ಚಿಕ್ಕ ಮಂತ್ರದಿಂದಲೂ ಬರಬಹುದು...ಉದಾ-ಕನಕ ದಾಸ.ಕವಿರತ್ನ ಕಾಳಿದಾಸ....ಒಂದು ಚಿಕ್ಕ ಮಂತ್ರ ಕೂಡ ಅಜ್ಞಾನದ ಪರದೆ ಕಡಿಯುತ್ತದೆ....ವಿಧ್ಯಾದಿ ದೇವತೆಯ ಆವಿರ್ಭಾವ ಉಂಟಾಗುತ್ತೆ...ಅದಕ್ಕಾಗಿ ಒಂದು ಚಿಕ್ಕ ಇಲಿಯಮೇಲೆ ಗಣೇಶ ಕುಳಿತಿದ್ದು...
ಇನ್ನೊಂದು ಮೂಷಿಕ ಅಂದರೆ ಬರೆ ಇಂದ್ರಿಯ ಜಾಡಿನಲ್ಲೇ ಸುತ್ತೋ ಮನಸ್ಸನ್ನ ಮೂಲಕ್ಕೆ ಒಯ್ಯೋದು ..ಇಲಿ ಏನೇ ದೊರೆತರೂ ಅದನ್ನ ತನ್ನ ಬಿಲ ಅಂದರೆ ಮೂಲಕ್ಕೆ ಒಯ್ಯೋದು...ಹಾಗೆ ಮನಸ್ಸನ್ನ ಅಂತರ್ಮುಖ ವಾದಾಗ ಮೂಲಕ್ಕೆ ಸೇರುತ್ತೆ ಆಗ ಜ್ಞಾನ ಉಂಟಾಗೋದು...ಯಾವಾಗ ಜ್ಞಾನ ಉಂಟಾಗುತ್ತೋ ಆಗ ವಿಘ್ನಗಳೆಲ್ಲಾ ವಿಘ್ನ ವಾಗಿ ಉಳಿಯೋಲ್ಲ ...ಇವೆಲ್ಲ ಜೀವನದ ಘಟನೆಗಳು ..ಅನ್ನೋ ಸಮಗ್ರ ದೃಷ್ಟಿ ಕೋನ ಉಂಟಾಗುತ್ತೆ....ಇವು ಗಣೇಶನ ಸ್ವರೂಪದ ವಿಷಯ.....ಇನ್ನು ಚೌತಿ ದಿನ ಚಂದಿರನನ್ನ ನೋಡಬಾರದು ಅನ್ನೋ ವಿಷಯ..ಚಂದಿರ ಅಂದರೆ ಮನಸ್ಸಿನ ಪ್ರತೀಕ...ಎಷ್ಟೋ ಸಲ ಬುದ್ಧಿ ಹೇಳಿದ್ದನ್ನ ಮನಸ್ಸು ಕೇಳೋಲ್ಲ..ಹಾಗೆ ಮನಸ್ಸಿನ ಪ್ರತೀಕ ಚಂದ್ರ ಬುದ್ಧಿ ದೇವತೆಯಾದ ಗಣಪತಿಯನ್ನ  ನೋಡಿ ನಕ್ಕ.. ಆಗ ಗಣೇಶ ಒಂದು ಹಲ್ಲನ್ನ ಮುರಿದು ಚಂದ್ರನಿಗೆ ಎಸೆದ....ಯಾವಾಗಲೂ ಆನೆ ಅಗೆಯೋ ಹಲ್ಲು ಕಾಣೊಲ್ಲ..ಕಾಣೋ ಹಲ್ಲು ಅಗೆಯೋಲ್ಲ..ಅಂದರೆ ನಾವು ಯೇನಾಗಿರ್ತಿವೋ ಅದನ್ನ ವ್ಯಕ್ತ ಮಾಡಲು ಸಾಧ್ಯವಿಲ್ಲ...ವ್ಯಕ್ತ ಆಗೋದಷ್ಟೆ  ನಾವಲ್ಲ...ಒಳಗೆ ಬೇರೇನೆ ಆಗಿರ್ತಿವಿ....ಗಣೇಶ ಚಂದ್ರನಿಗೆ ನಿನ್ನ ಯಾರೂ ನೋಡದ ಹಾಗೆ ಆಗಲಿ ಎಂದು ಶಾಪ ಕೊಟ್ಟ..ಆದರೆ ಮನಸ್ಸೇ ಇಲ್ಲದಿದ್ದರೆ ಜಗ ನಡೆಯುವದಾದರೂ ಹೇಗೆ...ಅದಕ್ಕೆ ದೇವತೆಗಳೆಲ್ಲ ಬೇಡಿಕೊಂಡಾಗ ಗಣಪತಿ ಕರುಣಾಪೂರಿತ ನಾಗುತ್ತಾನೆ...ಇಲ್ಲಿ ದೈವಿ ಗುಣ ಅಂದರೆ ಕರುಣೆ..ಆಗ ಪರಿಹಾರ ಸೂಚಿಸುತ್ತಾನೆ...ಚೌತಿ ದಿನ  ಮಾತ್ರ ಚಂದ್ರನ ನೋಡಬಾರದು ಅಂತ... ಬುದ್ಧೀಗೆ ವಿರುದ್ಧವಾದ ಮನಸ್ಸನ್ನ ಯಾವತ್ತೂ ಕೇಳ ಬಾರದು ಅನ್ನೋ ಸಂದೇಶವನ್ನ ತಿಳಿಸಲಿಕ್ಕಾಗಿ...ಇದೊಂದು ನಿರೋಪಣೆ..




ಅಂತರ್ಜಾಲದ ಹುಡುಗ

http://www.panjumagazine.com/?p=664
ಭಾವನ ಊಟಮುಗಿಸಿ ವಿಶ್ರಾಂತಿಗಾಗಿ ಸ್ವಲ್ಪ ಹೊತ್ತು ಮಲಗೋಣ ಎಂದು ಸೋಫಾದಲ್ಲಿ ಇನ್ನೇನು ಮಲಗಬೇಕು ಅಷ್ಟರಲ್ಲಿ ಅವಳ ಮೊಬೈಲ್ ಗೆ ಟಿನ್ ಟಿನ್ ಎಂದು ಸಂದೇಶ ಬಂತು, ಎದ್ದು ನೋಡಿದಾಗ  ಹಾಯ್ ಅಕ್ಕಾ ಹೇಗಿದ್ದೀಯ,ಈ ಬದನಸೀಬ್ ತಮ್ಮನ ಮರೆತುಬಿಟ್ಟೆಯ ಎನ್ನುವ ಸಂದೇಶ ನೋಡಿ ಅವಳಲ್ಲಿ ಬೇಸರ, ಸಂತೋಷ, ಆತಂಕದ ಭಾವನೆಗಳು ಒಮ್ಮೆಲೆ ನುಗ್ಗಿ ಕರುಳಲ್ಲಿ ಚುಚ್ಚಿದ ಅನುಭವ. ನಿಧಾನವಾಗಿ ಕಣ್ಣಲ್ಲಿ ನೀರಿನ ಹನಿಗಳು ತೊಟ್ಟಿಕ್ಕಿದವು. ಒಮ್ಮೆ ನಿಟ್ಟುಸಿರಿಟ್ಟಳು. ಮನಸ್ಸು ನಿದ್ದೆ ಮರೆತು ನೆನಪಿನ ಕುದುರೆಯ ಬೆನ್ನೇರಿತ್ತು.
ಆಗಿನ್ನು ಹೊಸತಾಗಿ ಅಂತರ್ಜಾಲದಲ್ಲಿ ಮುಖಪುಸ್ತಕ (FB) ಖಾತೆ ತೆಗೆದ ಸಮಯ. ಗಂಡ ಆಫೀಸ್, ಮಕ್ಕಳು ಸ್ಕೂಲ್ ಅಂತ ಹೋದಾಗ ಹೆಚ್ಚಿನ ಸಮಯವೆಲ್ಲ ಕಂಪ್ಯೂಟರ್ ಮುಂದೆ ಕಳೆಯುತ್ತಿದ್ದಳು ಭಾವನ. ಅಂತಹ ಸಮಯದಲ್ಲಿ ಪರಿಚಯವಾದವನೇ ಕುಮಾರ. ಅವಳಿಗಿಂತ ವಯಸ್ಸಿನಲ್ಲಿ ೬-೮ ವರ್ಷ ಚಿಕ್ಕವನು. ಮುಖದಲ್ಲಿ ಮುಗ್ಧತೆ ತುಂಬಿದ ಗುಂಗುರು ಕೂದಲಿನ ಸುಂದರ ಹುಡುಗ. ಮೇಡಂ ಎಂದು ಸಂಭೋದಿಸುತ್ತ ಬೆಂಬಿಡದೇ ಪರಿಚಯವಾದ ಈತ ದಿನಕಳೆದಂತೆ ಹತ್ತಿರವಾಗಿ  ಅಕ್ಕಾ ಎಂದು ಕರೆಯಲು ಪ್ರಾರಂಭಿಸಿದ. ಭಾವನಾಳೋ ಹೆಸರಿಗೆ ತಕ್ಕಂತೆ ಭಾವನಾ ಜೀವಿ. ಮೃದು ಸ್ವಭಾವದ ಶುದ್ಧ ಮನಸ್ಸಿನ ಸುಂದರ ಮಹಿಳೆ. ಅಕ್ಕಾ ಎಂದು ಕರೆದಾಗ ತನಗಿಲ್ಲದ ತಮ್ಮನನ್ನು ದೇವರೇ ಪರಿಚಯಿಸಿದ ಎಂದು ಸಂಭ್ರಮ ಪಟ್ಟಳು. ಹೆಂಗಸರಿಗೇ ಕರುಣೆ ಜಾಸ್ತಿ ಅದರಲ್ಲೂ ಅಕ್ಕಾ, ಅಮ್ಮಾ ಅಂತೆಲ್ಲ ಕರೆದಾಗ ಕರಗಿ ನೀರಾಗೋದು ಹೆಂಗಸರ ದುರ್ಬಲತೆ. ಕುಮಾರ ಕೂಡ ಇವಳಿಗೆ ಇಷ್ಟವಾಗುವ ರೀತಿಯಲ್ಲೇ ಮಾತನಾಡುತ್ತ ಅಕ್ಕನ ಮನಸ್ಸಲ್ಲಿ ತನ್ನ ಸ್ಥಳ ಭದ್ರವಾಗಿಸುವಲ್ಲಿ ಸಫಲನಾಗುತ್ತಾನೆ.
ನೀವು ಇದ್ದ ಜಾಗದಲ್ಲಿ ನೀನು, ಬನ್ನಿ, ಹೋಗಿ ಜಾಗದಲ್ಲಿ ಬಾರೋ, ಹೋಗೋ ಬಂದಾಯ್ತು. ಒಂದು ದಿನ ಸಾಯಂಕಾಲ ತನಗೆ ಮೈ ಹುಷಾರಿಲ್ಲ ಎಂದು ಸಂದೇಶ ಜೊತೆಗೆ ಅವನ ಫೋನ್ ನಂಬರ್  ಕಳುಹಿಸಿದ. ಭಾವನಾಳಿಗೋ ತಮ್ಮನಿಗೆನೋ ಆಯಿತು ಎನ್ನೋ ಚಡಪಡಿಕೆ. ನೋಡಿ ಬರಲು ಅವನಿರುವದು ದೂರದ ಶಹರದಲ್ಲಿ. ಬೆಳಗಾಗುವದನ್ನೇ ಕಾದ ಭಾವನ ಬೇರೇನೂ ಯೋಚಿಸದೆ ಫೋನ್ ಮಾಡುತ್ತಾಳೆ. ಅಲ್ಲಿಗೆ ಅವಳು ತನಗರಿವೆ ಇಲ್ಲದೆ ತನ್ನ ಮೊಬೈಲ್ ಸಂಖ್ಯೆಯನ್ನ ತಮ್ಮನಿಗೆ ರವಾನಿಸಿದಂತಾಯ್ತು. ಹೀಗೆ ಅಕ್ಕ ತಮ್ಮನ ಸಂಬಂಧ ಗಟ್ಟಿಯಾಗುತ್ತಾ, ಮಾತನಾಡುವ ಸಮಯ ಕೂಡ  ಬೆಳೆಯುತ್ತಾ ಹೋಯಿತು. ಒಂದು ದಿನ ಮಾತನಾಡದಿದ್ದರೆ ಕರುವನ್ನ ಕಳೆದುಕೊಂಡ ಹಸುವಿನಂತೆ  ಚಡಪಡಿಸ ತೊಡಗಿದಳು. ಇವಳಿಗೆ ತಮ್ಮನ ಮೇಲೆ ಇಷ್ಟು ಪ್ರೀತಿ ಹುಟ್ಟಿಕೊಳ್ಳಲು ಕಾರಣ ಕುಮಾರನ ಜೀವನ ಕಥೆ.
ಕುಮಾರ ಹುಟ್ಟಿದ್ದು ಕರಾವಳಿಯ ಒಂದು ಪುಟ್ಟ ಹಳ್ಳಿಯಲ್ಲಿ.. ಊರ ಮುಖಂಡರ ಮನೆತನದಲ್ಲಿ  ಮೂರು ಹೆಣ್ಣು ಮಕ್ಕಳ  ನಂತರ ಹುಟ್ಟಿದ ಒಬ್ಬನೇ ಮುದ್ದಿನ  ಮಗ. ಮನೆಯವರ ಅತಿ ಪ್ರೀತಿಯಿಂದ ಪುಂಡನಾಗಿ ಬೆಳೆದ.. ಎಂಟನೆ ತರಗತಿಯಲ್ಲಿ ಅನುತ್ತೀರ್ಣನಾದಾಗ ಮನೆಯವರ ಬೈಗುಳ, ಅವಮಾನಕ್ಕೆ ಹೆದರಿ ಯಾರಿಗೂ ಹೇಳದೆ ಊರು ಬಿಟ್ಟು ದೂರದ ಶಹರ ಸೇರಿದ. ಆ ದೊಡ್ಡ ನಗರದಲ್ಲಿ ಬದುಕಿನ ದಾರಿ ಹುಡುಕಿ ಹೊರಟ ಈ ಪೋರನಿಗೆ  ಆಸರೆಯಾಗಿದ್ದು ರಸ್ತೆ ಬದಿಯ ಪಾನಿ ಪುರಿ ಗಾಡಿಯ ಮಾಲಿಕನ ಮನೆ. ಅವನ ಜೊತೆ ಕೆಲಸಮಾಡುತ್ತ ಅವ ಕೊಟ್ಟ ಅರೆ ಹೊಟ್ಟೆ ಊಟ ತಿನ್ನುತ್ತ ದಿನ ಕಳೆಯುತ್ತಿದ್ದ. ಕಷ್ಟದಲ್ಲೂ ಇವನ ಯೋಗ ಎನ್ನುವಂತೆ ಅಲ್ಲೇ ಹತ್ತಿರದ ಹೋಟೆಲಿನ ಮಾಲೀಕ ಒಂದು ದಿನ ಕುಮಾರನನ್ನು ಕರೆದು ಹೋಟೆಲಿನಲ್ಲಿ ಕೆಲಸ ಮಾಡುವಂತೆ ಕೇಳುತ್ತಾನೆ.
ಆಗ ಕುಮಾರ ಅಲ್ಲಿ ಕೆಲಸ ಮಾಡುತ್ತಾ ಅತಿ ಕಷ್ಟದಲ್ಲೂ ತನ್ನ ಓದು ಮುಂದುವರೆಸುವ ಆಸೆಗೆ ಜೀವ ನೀಡಿ ರಾತ್ರಿ ಶಾಲೆಗೆ ಸೇರಿ ಶ್ರದ್ಧೆಯಿಂದ ಓದಿ ಅಂತು ಡಿಗ್ರೀ ಮುಗಿಸಿ ಒಂದು ಸಂಸ್ಥೆ ಯಲ್ಲಿ ಕೆಲಸಕ್ಕೆ ಸೇರಿದ ವಿಷಯವನ್ನ ಕಲ್ಲು ಹೃದಯವೂ ಕರಗುವಂತೆ ಭಾವನಾಳಿಗೆ ಬಣ್ಣಿಸಿದ. ಮೊದಲೇ ಮೃದು ಹೃದಯದ ಭಾವನಾ ಪೂರ್ತಿ ಕರಗಿ ಕುಮಾರನ ಜಾತಿ. ಅಂತಸ್ತು ಎಲ್ಲ ಮರೆತು ತನ್ನ ಕುಟುಂಬದ ಸದಸ್ಯನಂತೆ  ಅವನನ್ನ ಆದರಿಸುತ್ತಾ ತನ್ನ ಕಷ್ಟ ಸುಖಗಳನ್ನೆಲ್ಲ ಹಂಚಿಕೊಳ್ಳಲು ಪ್ರಾರಂಭಿಸುತ್ತಾಳೆ. ಅವನೂ ಸಹ ಅಕ್ಕ ಅಕ್ಕ ಎಂದು ಅವಳ ಕಷ್ಟಕ್ಕೆ ಸಮಾಧಾನದ ಮಾತಾಡಿ ಅವಳಲ್ಲಿ ನಗು ಮೂಡಿಸುತ್ತಿದ್ದ.ಇದು ಇವರಿಬ್ಬರ ಸಂಭಂದಕ್ಕೆ ಭದ್ರ ಬೆಸುಗೆಯಾಯ್ತು. ಜಾತಿ ಯಾವದಾದರೇನು ಪ್ರೀತಿಗೆ. ಅದು ಯಾವದೇ ತರಹದ್ದಾಗಿರಲಿ ಅಣ್ಣ – ತಂಗಿ, ಅಕ್ಕ-ತಮ್ಮ ,ತಾಯಿ-ಮಗ, ಪ್ರೇಮಿಗಳ ಪ್ರೀತಿ ಹೀಗೆ ರೂಪ ಬೇರೆ ಯಾದರೂ ಪ್ರೀತಿ ಅನ್ನೊದು ಹಣ, ಜಾತಿ, ಅಂತಸ್ತುಗಳ ಬೇಧವಿಲ್ಲದೆ  ಅದು ಅವ್ಯಾಹತವಾಗಿ ಎಲ್ಲ ಅಡೆ ತಡೆ ಗಳನ್ನೂ ದಾಟಿ ಸಾಗುತ್ತದೆ ಅಲ್ಲವೇ?
ಹೀಗಿರುವಾಗ ಅಬ್ಬಾ ಅದೊಂದು ದಿನ ತಮ್ಮನ ಮುಖ ಪುಸ್ತಕದಲ್ಲಿ ಅವನ ಛಾಯ ಚಿತ್ರ ಬದಲಾಯ್ತು. ಅದೇ ಭಾವನಾಳ ಭಾವನೆಯ ಕೋಟೆಗೆ ಬಿದ್ದ ಮೊದಲ ಪೆಟ್ಟು. ಒಮ್ಮೆಲೆ ಹಾವನ್ನು ತುಳಿದಂತೆ ಬೆಚ್ಚಿದಳು.ಯಾಕಂದರೆ ಅವಳ ಮುದ್ದಿನ ತಮ್ಮ ಮುಗ್ಧತೆ ಕಳೆದುಕೊಂಡು ರೌಡಿಯಂತೆ ನಿಂತಿದ್ದ.ಆದರೂ ಸಾವರಿಸಿಕೊಂಡ ಭಾವನಾ ಮುಂದೆ ನೋಡಿದಾಗ ಜೊತೆಯಲ್ಲಿ ಒಂದು ಅಸಹ್ಯ ಕರವಾದ ಕೊಂಡಿಯನ್ನು ಇವಳ ಹೆಸರಿಗೆ ಟ್ಯಾಗ್ ಮಾಡಿದ್ದ. ಭಾವನಾಳಿಗೆ ಒಮ್ಮೆಲೆ ಪಾತಾಳಕ್ಕೆ ಕುಸಿದ ಅನುಭವವಾಯ್ತು. ಮುಖ ಬಿಳಿಚಿಕೊಂಡು ಮೈಯೆಲ್ಲಾ ಕಂಪಿಸಿತು, ಕಣ್ಣಲ್ಲಿ ಆಕ್ರೋಶ, ಜೊತೆಗೆ ತಾನು ತಮ್ಮ ಎಂದು ಪ್ರೀತಿಸಿದ ಕುಮಾರನಿಂದಲೇ ಮೋಸಹೋದೆ ಎಂಬ ಅವಮಾನ, ವ್ಯಥೆ ಎಲ್ಲವೂ ಒತ್ತರಿಸಿ ಬರತೊಡಗಿದವು. ಒಮ್ಮೆಲೇ ತಮ್ಮನಿಗೆ ಮೋಸಗಾರ ಎಂದು ಉಗಿದು ತಮ್ಮನನ್ನು ಸ್ನೇಹಿತರ ಪಟ್ಟಿಯಿಂದ ಕಿತ್ತೆಸೆದಳು. ಪಟ್ಟಿಯಿಂದ ಏನೋ ಕಿತ್ತೆಸೆದಳು ಸರಿ ಆದರೆ ಅಷ್ಟೆ ಸುಲಭದಲ್ಲಿ ಮನಸ್ಸಿಂದ ಹೊರಹಾಕಲು ಸಾಧ್ಯವೇ? ದಿನಾಲು ತಮ್ಮನ ನೆನೆದು ಕಣ್ಣೀರು ಹಾಕುವದೆ ಕೆಲಸವಾಯ್ತು. ಎಲ್ಲ ಕೆಲಸದಲ್ಲೂ ಆಸಕ್ತಿ ಕಳೆದುಕೊಂಡು ಮಂಕಾದಳು.
ಒಂದೆರಡು ದಿನ ಹೀಗೆ ಕಳೆಯೋ ಹೊತ್ತಿಗೆ ಭಾವನಾಳ ಫೋನ್ ಗೆ ಸಂದೇಶಗಳು ಬರ ತೊಡಗಿದವು. ಅಕ್ಕಾ ಕ್ಷಮಿಸು, ತಪ್ಪಾಯ್ತು ಒಳ್ಳೇ ಅಕ್ಕನ ಮನಸ್ಸಿಗೆ ನೋವುಕೊಟ್ಟೆ, ಇನ್ನೊಮ್ಮೆ ಹೀಗೆ ಮಾಡಲ್ಲ, ಹೀಗೆ ತರ ತರದ ಬೇಡಿಕೆಗಳು. ಇವಳಿಗೋ ಇದನ್ನೆಲ್ಲಾ ಓದಿ, ಒಮ್ಮೆ ಯಾಕೆ ಕ್ಷಮಿಸಿ  ಕುಮಾರನಿಗೆ ತಪ್ಪನ್ನ ತಿದ್ದಿಕೊಳ್ಳಲು ಒಂದು ಅವಕಾಶ ಕೊಡಬಾರದು ಅನಿಸಿದರೆ ಇನ್ನೊಮ್ಮೆ ಬಾಯ್ತುಂಬ ಅಕ್ಕ ಅಂತ ಕರೆದು ಅಕ್ಕನ ಭಾವನೆಗೆ ಬೆಂಕಿ ಇಟ್ಟ ನೀಚ, ಇವನನ್ನು ನಂಬುವದಾದರು ಹೇಗೆ ಎನ್ನೊ ಅಕ್ರೋಶ ದಲ್ಲಿ ತಲ್ಲಣಿಸುತ್ತಿರುತ್ತಾಳೆ.  ಗಂಡ ಮಕ್ಕಳ ಯಾವ ಸಮಾಧಾನವೂ ಅವಳ ನೋವನ್ನ ಕಡಿಮೆಮಾಡುವಲ್ಲಿ ಯಶಸ್ವಿಯಾಗುತ್ತಿಲ್ಲ. ಅವನು ಯಾವ ತರದ ವ್ಯಕ್ತಿಯೇ ಆಗಿರಲಿ ಅವನು ೩-೪ ತಿಂಗಳಿಂದ ಭಾವನಾಳ ಮನಸ್ಸಲ್ಲಿ ತಮ್ಮನಾಗಿ ಭಾವನೆಯ ಮಹಾಪೂರವನ್ನೇ ಹರಿಸಿದ್ದಾನೆ, ಪ್ರೀತಿ ವಿಶ್ವಾಸ ತೋರಿ ಅವಳ ಮನಸ್ಸಲ್ಲಿ ಆಳವಾಗಿ ಬೇರೂರಿದ್ದಾನೆ, ಮಾತಿನ ಮೋಡಿಯಿಂದ ಅವಳ ಹೃದಯದಲ್ಲಿ ತನ್ನದೇ ಚಾಪು ಒತ್ತಿದ್ದಾನೆ. ಹೀಗಿರುವಾಗ ಅವನನ್ನು ದೂರಮಾಡುವ ಯೋಚನೆ ಬಂದಾಗ ಭಾವನಾಳಿಗೆ ಹೊಟ್ಟೆಯಲ್ಲಿ ಕತ್ತರಿ ಆಡಿಸಿದ ಅನುಭವವಾಗುತ್ತಿತ್ತು. ಕೆಟ್ಟ ನಡತೆಯ ಕುಮಾರನನ್ನು ತಮ್ಮ ಅಂತ ಒಪ್ಪಿಕೊಳ್ಳಲೂ ಮನಸ್ಸಿಗೆ ಹಿಂಸೆಯಾಗ ತೊಡಗಿತು. ಹೀಗೆ ಇಬ್ಬಗೆಯ ಹೊಯ್ದಾಟದಲ್ಲಿ ದಿನಾ ಕಣ್ಣಿರು ಸುರಿಸುತ್ತಾ ಈ ಸಮಸ್ಯೆಯ ಮುಕ್ತಿಗಾಗಿ ಮಾರ್ಗ ಹುಡುಕುತ್ತಿದ್ದಾಳೆ ಭಾವನ.
ಓದುಗರೇ ಈಗ ನೀವೇ ಹೇಳಿ ಭಾವನ ಯಾವ ನಿರ್ಧಾರಕ್ಕೆ ಬಂದರೆ ಒಳಿತು. ತಮ್ಮನ ಸಂದೇಶಕ್ಕೆ ಪ್ರತಿಕ್ರಿಯಿಸದೆ ಮನಸ್ಸನ್ನ ಕಲ್ಲು ಮಾಡಿಕೊಂಡು ತನ್ನ ಮನಸ್ಸಲ್ಲಿ ನಿಂತ ತಮ್ಮನನ್ನ ನಿರ್ಧಯೆಯಿಂದ ದೂರ ತಳ್ಳು ವುದೋ ? ಅಥವಾ  ಅವನಿಗೆ ತಪ್ಪನ್ನ ತಿದ್ದಿಕೊಳ್ಳಲು ಒಂದು ಅವಕಾಶ ಕೊಟ್ಟು ಅವನ ಸ್ವಭಾವವನ್ನ ಪರಿವರ್ತಿಸಲು ಪ್ರಯತ್ನಿಸುವದೋ?
-ಮಮತಾ ಕೀಲಾರ್

Sunday 5 October 2014

ನೀನೊಂದು ಕವಿತೆಯಂತೆ ನನಗೆ 
ಹಾಡಿದರೂ ಮುಗಿಯುವೆ 
ಬರೆದರೂ ಮುಗಿಯುವೆ 
ಅದಕ್ಕಾಗಿ ಹೃದಯ ಕವಾಟಿನಲ್ಲಿ ಮುಚ್ಚಿಟ್ಟಿದ್ದೇನೆ .........ಕೀಮ

Wednesday 1 October 2014

Fear is worst than reality ...ಅನ್ನೋ ಮಾತು ಎಷ್ಟು ಸತ್ಯ ಅನಿಸ್ತು ನಿನ್ನೆಯ ಒಂದು ಘಟನೆಯಿಂದ....ನನ್ನ ಯಜಮಾನರು ಕಾಲೇಜ್ ಸ್ಟುಡೆಂಟ್ ಕರ್ಕೊಂಡು ಕಾಲೇಜ್ ಬಸ್ ಅಲ್ಲಿ ತುಮಕೂರಿಗೆ ಹೋಗಿದ್ರು ಏನೋ ಕೆಲಸಕ್ಕಾಗಿ...ಮೊನ್ನೆನೆ ಹೇಳಿದ್ರು ಬರುವಾಗ ನೀನು ಕಾರ್ ತಕೊಂಡು ಬಾ ನಾನು ಇಳಿಯೋ ಜಾಗಕ್ಕೆ ಅಂತ..ಆಯ್ತು ಅಂತ ನಾನೂ ಹೇಳಿದ್ದೆ...ನಿನ್ನೆ ಅವರು ಎಲ್ಲ ಕೆಲಸ ಮುಗಿದು ತುಮಕೂರ್ ಬಿಟ್ಟಿದ್ದೆ ಲೇಟ್...ಇಲ್ಲಿ ಬರುವಾಗ ರಾತ್ರಿ 12.30.ಸಮಯ...ಶ್ರೀರಂಗ ಪಟ್ಟಣದ ಹತ್ತಿರ ಬರುವಾಗ ಫೋನ್ ಮಾಡಿದ್ರು..ಬಾ ಹೇಳಿದ ಜಾಗಕ್ಕೆ ಅಂತ....ಮಕ್ಕಳೆಲ್ಲ ಮಲಗಿದ್ರು ..ನಾನು ಮನೆ ಲಾಕ್ ಮಾಡಿ ಹೊರಟೆ...ನಿನ್ನೆ ಬೇರೆ ರಾತ್ರಿ 9 ಘಂಟೆ ಅಷ್ಟೊತ್ತಿಗೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ...ಮಳೆ ಬಂದು ನಿಂತಿದ್ದಕ್ಕೋ ಏನೋ ವಾತಾವರಣ ಒಂಥರಾ ಭೀತಿ ಹುಟ್ಟಿಸೋ ಹಾಗೆ..ಜೊತೆಗೆ ಆ ರಾತ್ರಿಯಲ್ಲಿ ಜನರ ಸುಳಿವೇ ಇಲ್ಲ...ಆದರೂ ಯಜಮಾನರ ಕರೆದುಕೊಂಡು ಬರಲು ಹೊರಟೆ..ಅವರ ಬಸ್ ಬರೋಕಿಂತ ಮುಂಚೆ ನಾನು ಅವರು ಹೇಳಿದ ಜಾಗಕ್ಕೆ ಹೋಗಿದ್ದೆ...ಅಲ್ಲೇ ಕಾರ್ ನಿಲ್ಲಿಸಿ...ಕಾಯುತ್ತ ಇದ್ದೆ...ನಿರ್ಜನ ರೋಡ್..ಆಗ ಈಗ ತೊಟ್ಟಿಕ್ಕೋ ನೀರ ಹನಿ ಶಬ್ದ ಜೊತೆಗೆ ಎಲ್ಲೋ ದೂರದಲ್ಲಿ ಕುಡುಕರೋ..ಹುಚ್ಚರೋ ..ಕೂಗೋ ಶಬ್ದ...ನಾನೂ ಒಬ್ಬಳೇ ಕಾಯ್ತಾ ಇದ್ದೆ..ಇದ್ದಕ್ಕಿದ್ದಂತೆ ಒಂದು ಬೈಕ್ ಬಂತು..ನಾನು ಕಾರ್ ಗ್ಲಾಸ್ ಮೇಲೆ ಮಾಡಿ ಕುಳಿತೆ..ಆ ಬೈಕ್ ಸವಾರ ಬಂದು ಕಾರ್ ಗ್ಲಾಸ್ ತಟ್ಟಿದ...ನನಗೆ ಒಂತರ ಹೆದರಿಕೆ ಶುರುವಾಯ್ತು....ಒಂದೇ ಕ್ಷಣದಲ್ಲಿ ದಂಡು ಪಾಳ್ಯದ ಕಳ್ಳರಿಂದ ನಿರ್ಭಯಳ ಕೇಸ್ ವರೆಗಿನ ರೀಲ್ ಮನಸ್ಸಲೇ ಬಿಚ್ಕೊಂಡ್ತು ...ಉಮೇಶ್ ರೆಡ್ಡಿ ಯಿಂದ..ಮೊನ್ನೆ ಮೊನ್ನೆ ವರೆಗೆ ಭೀತಿ ಹುಟ್ಟಿಸಿದ ಜೈ ಶಂಕರ ನೆನಪಾದ...ಏನು ಮಾಡಲಿ ಅಂತ ತಿಳಿಯದಾದೆ...ಆದರೂ ಎಲ್ಲೋ ಒಂದು ಕಡೆ ನನಗೆ ಆತ್ಮವಿಶ್ವಾಸ ..ನಾನು ಯಾರಿಗೂ ಮೋಸ ಮಾಡಿಲ್ಲ ಹಾಗಾಗಿ ಆ ದೇವರು ನನಗೆ ಮೋಸ ಮಾಡಲ್ಲ ಅಂತ...ಅಂತು ಕತ್ತಲ್ಲಿದ್ದ ಗಣೇಶನ ಲಾಕೆಟ್ ಕಣ್ಣಿಗೆ ಒತ್ತುಕೊಂಡು ವಿಂಡೋ ಗ್ಲಾಸ್ ಇಳಿಸಿದೆ..ಕೋಪದಲ್ಲಿ ಏನು ಅಂತ ಕೇಳಿದೆ...ಆಗ ಅವನು ಏನಿಲ್ಲ ಮೇಡಂ ಒಬ್ರೇ ಈ ರಾತ್ರಿಯಲ್ಲಿ ಕಾರ್ ನಿಲ್ಸಿದ್ದೀರಿ...ಕಾರ್ ಗೆ ಏನೋ ಪ್ರಾಬ್ಲಮ್ ಆಯ್ತಾ ..ಏನಾದ್ರು ಹೆಲ್ಪ್ ಬೇಕಾ ಅಂತ ಕೇಳೋಕೆ ಬೈಕ್ ತಿರುಗಿಸಿ ಬಂದೆ ...ಅಂದ ..ನನಗೆ ಏನು ಹೇಳೋಕು ತೋಚಲಿಲ್ಲ..ನಾನು ನಗುತ್ತ ಇಲ್ಲ..ಯಜಮಾನರಿಗೆ ಕಾಯ್ತಿದೀನಿ ..ಧನ್ಯವಾದ ..ಎಂದೆ ಓಕೆ ಮೇಡಂ ಅಂದು ಹೊರಟು ಹೋದ....ನನಗೆ ನನ್ನ ಮೇಲೆ ನಾಚಿಕೆ ಎನಿಸಿತು...ಏನೇನೋ ವಿಷಯ ಓದಿರ್ತಿವಿ.ಕೇಳಿರ್ತಿವಿ ..ಅದಕ್ಕಾಗಿ ಮನಸ್ಸು ಎಲ್ಲರನ್ನೂ ಒಂದೇ ತರದಲ್ಲಿ ಯೋಚಿಸಿಬಿಡುತ್ತೆ..ಒಳ್ಳೆಯವರು ಕೂಡ ನಮ್ಮ ಮನಸ್ಸಲ್ಲಿ ಕೆಟ್ಟವರಾಗಿ ಬದಲಾಗಿ ಬಿಡ್ತಾರೆ ಇಂತ ಸಂಧರ್ಬದಲ್ಲಿ...ಅದ್ಕೆ ಹೇಳೊದು ಹೆದರಿಕೆ ..ಅಥವಾ..ಯೋಚನೆ ಅನ್ನೋದು ನೈಜತೆಗಿಂತ ಎಷ್ಟು ಕೆಟ್ಟದ್ದಾಗಿರುತ್ತೆ ಒಮ್ಮೊಮ್ಮೆ...ಹೆದರಿಕೆ ಕೂಡ ಹುಟ್ಟೋದು ಯೋಚನೆಯಿಂದನೆ ಅಲ್ವಾ ...ನಾವು ಒಮ್ಮೊಮ್ಮೆ ಈ ಜಗತ್ತಲ್ಲಿ ನಿಜವಾಗಿ ಯಾರೂ ಇರೋಲ್ಲ ನಮಗೆ ನಾವಷ್ಟೇ ಅಂತ ಅಂದುಕೊಂಡು ನಿಜವಾದ ಪ್ರೀತಿ..ಸ್ನೇಹವನ್ನೂ ಅನುಮಾನಿಸಿ ಬಿಡುತ್ತೇವೆ...ಆದರೆ ತಮಾಷೆ ಅಂದರೆ ಈ imegination ಅನ್ನೋದು reality ಗಿಂತ ಕೆಟ್ಟದ್ದಾಗಿರುತ್ತೆ.....ಅದಕ್ಕೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕಾಗುತ್ತದೆ...

Monday 29 September 2014

ನಿನ್ನ ಕಾಣದೆ ಜೀವ 
ನೀರಿಂದ ಹೊರಬಂದ ಮೀನು 
ಪರದಾಡುತಿದೆ ಉಸಿರಿಗೂ .........ಕೀಮ
ಕಣ್ಣ ರೆಪ್ಪೆಯಲಿ ಮುಚ್ಚಿಟ್ಟು ನಿನ್ನ ಜತನ 
ಮಾಡಿದ್ದೇ ತಪ್ಪಾಯ್ತು 
ನಿದ್ರಿಸಲೂ ಬಿಡದೆ ಕಾಡುತ್ತಿಯಲ್ಲ...... ಕೀಮ
ನಿನ್ನ ಮಾತಿನ ಹಿಂದಿರುವ ಕಾಳಜಿ 
ಅರ್ಥ ಆಗದ್ದಲ್ಲ ಗೆಳೆಯಾ...
ನಿನ್ನನ್ನೆಲ್ಲಿ ಕಳೆದು ಕೊಳ್ಳುವೇನೋ ಎಂಬ 
ಭೀತಿ ಅಷ್ಟೆ..............ಕೀಮ
ಸೋಲಿಗೆ ನಾನೊಂದು ಸವಾಲೇ ಎಸೆದಿದ್ದೇನೆ 
ನನ್ನ ಸೋಲಿಸುವ ವಿಷಯದಲ್ಲಿ 
ನಿನ್ನದೇ ಸೋಲೆಂದು ....ಕೀಮ

Tuesday 23 September 2014

ನಟ್ಟಿರುಳಿನಾ ಊರಿಗೆ ದಾರಿಯಾ ಸವೆಸುತಿಹೆ
ಕಾಲೆಳೆಯುತಾ ಸುಸ್ತಾಗಿ ..
ಮಧ್ಯದಲಿ ಅರೆ ನಿದ್ದೆ ,ಕಣ್ಮುಚ್ಚಿ
ರಂಗಿನಾ ಕನಸು ಕಾಣುತಿಹೆ...
ಕಣ್ಣು ತೆರೆಯಲೇ ಬೇಕು ದೀಪವಿಡುವ ಸಮಯಕೆ
ಮುಸ್ಸಂಜೆ ಬರುತಲಿದೆ
ಕಬಳಿಸ ಲದೆಷ್ಟು ಹೊತ್ತು ಕತ್ತಲಿಗೆ
ಇದು ಹಗಲೇ ಇರಬಹುದು ಪಾಶಿಮಾತ್ಯರಿಗೆ
ಕತ್ತಲೆಕೋ ಇಷ್ಟ ನಮ್ಮ ಸಂಸ್ಕೃತಿಗೆ
ಕಣ್ಬಿಟ್ಟರೆಲ್ಲಿ ಕನಸು ಕರಗುವ ದೆಂಬ ಭಯ
ಕಾಲ ತಡೆಯುವ ಶಕ್ತಿ ಎನಗಿಲ್ಲವಯ್ಯ
ಬುದ್ಧಿ ಹೇಳುತಿದೆ ಇದು ಹಗಲು ಕನಸೆಂದು
ಹೃದಯವೇಕೋ ಧ್ವನಿಸಿದೆ
ಆತ್ಮದ ಕೊರಿಕೆಯಿದು ನಿಜವಹುದೆಂದು
ಆದರೂ ಒಮ್ಮೊಮ್ಮೆ ಮನುಜನ ಸಹಜ ದೌರ್ಬಲ್ಯ
ಮನ ಅಣಕಿಸಿದೆ ಮರುಳೇ..
ರಂಗಾದರೇನು ..ಕಪ್ಪು ಬಿಳುಪಾದರೇನು
ಮುಂಜಾವಿನ ಕನಸಲ್ಲ ನಿಜವಾಗಲು..
ಏನು ಮಾಡಲು ಅರಿಯೆ....
ಏನು ಯೋಚಿಸಲರಿಯೇ ..
ಹೆಜ್ಜೆ ಚುರುಕಾಗಿಸಿ ಊರ ತಲುಪಲೇನು
ಶೂನ್ಯದಲೇ ಕರಗಿ ಕತ್ತಲಾಗಲೇನು...

Thursday 18 September 2014

ನೆನಪುಗಳನೆಲ್ಲ ಗುಡಿಸಿ ಬಿಸುಟಿದೆನೆಂಬ 
ಗೆದ್ದ ಹಮ್ಮಿನಲ್ಲಿ ಧ್ಯಾನಕ್ಕೆ ಕುಳಿತೆ 
ಮನದೊಳಗೆ ನಾನಿಳಿದಂತೆ 
ಸೋಲನೆತ್ತಿ ನಗುತ್ತಿತ್ತು ಆಳದಲಿ 
ಹೃದಯ ಕೆತ್ತಿದ ನಿನ್ನಯಾ ಮೂರುತಿ....

Wednesday 17 September 2014

ನಿನ್ನೆ ನಾಳೆಗಳ ಮೇಲಿನದಲ್ಲ 
ನನ್ನ ಭರವಸೆ 
ನನಗಿಹುದು ನನ್ನಾತ್ಮವಿಶ್ವಾಸದಲಿ 
ನಂಬಿಕೆ 
ನಿನ್ನೆ ಹೇಗೆ ಇದ್ದಿರಲಿ ನಾಳೆ ಏನೇ ಬರಲಿ 
ನಾ ನಗುವೆ ಇಂದು ಸಂತಸದಿ....

Tuesday 16 September 2014

ಆಯಿ (ಅಮ್ಮ)
ಆಯೀ ಯಾಕೋ ಇವತ್ತೆಲ್ಲ ನಿನ್ನದೇ ನೆನಪು..ಆಗಾಗ ಕಣ್ಣು ತೇವವಾಗುತ್ತಿದೆ. ಯಾಕೋ ನಿನ್ನ ಪಕ್ಕ  ಜಗಲಿಯಲ್ಲಿ ಊಟದ ಮುಂಚೆ ಅಪ್ಪನ ಪೂಜೆ ಮುಗಿಯಲಿ ಅಂತ ಕಾಯ್ತಾ ಸ್ವಲ್ಪ ಹೊತ್ತು ಮಲಗಿದಾಗ ತಲೆ ನೇವರಿಸ್ತ ಇದ್ಯಲ್ಲ ಅದೇ ಸ್ಪರ್ಶಕ್ಕಾಗಿ ಮನ ಹಾತೊರೆಯುತ್ತಿದೆ..ಹೇಳಿಕೊಳ್ಳ ಬೇಕು ಅನ್ನೋ  ಎಷ್ಟೋ ಮಾತುಗಳು ಗಂಟಲಲ್ಲೇ ಹೆಪ್ಪುಗಟ್ಟಿ ಕುಳಿತು ಆಗಾಗ ಕಣ್ಣೀರಾಗಿ ಹೊರಕ್ಕೆ ದುಮ್ಮಿಕ್ಕುತ್ತಿವೆ...ನಿನಗೆ ಹೇಳಬೇಕಾದ ಮಾತುಗಳಿವು ..ಇನ್ಯಾರ ಬಳಿ ಹೇಳಿಕೊಳ್ಳಲಿ..ಹೇಳಿಕೊಂಡರೂ ನೀ ಕೊಡೊ ಸಾಂತ್ವಾನ ಯಾರು ತಾನೆ ನಿಡೋಕೆ ಸಾಧ್ಯ...ಆಯೀ ನೀ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗಬಾರದಿತ್ತು ..ಎಷ್ಟು ಚನ್ನಾಗಿ ಆರೋಗ್ಯವಂತಳಾಗಿಯೇ ಇದ್ದ ನೀನು ಹೀಗೆ ಮಾಡಿದ್ದು ಸರಿಯಾ...ರಾತ್ರಿ ಮಲಗಿದ ನೀನು ಬೆಳಿಗ್ಗೆ ಯಾಕೆ ಎದ್ದೆಳಲೇ ಇಲ್ಲ...ಆಯೀ ಆ ದಿವಸ ನಾ ಮರೆಯುವದಾದರೂ ಹೇಗೆ...ಅರ್ಜುನನ ಲೆಕ್ಕದ ಹೋಮಕ್ಕಾಗಿ ನಿನ್ನ ಕರೆಯಲೆಂದು ಊರಿಗೆ ಬಂದೆ..ಯಾಕೋ ಬರುವಾಗಲೇ ಅನೇಕ ತೊಂದರೆ ಮನಸ್ಸಿಗೆ ಕಸಿವಿಸಿ. ಗೊತ್ತಿಲ್ಲ.. ಮಂಗಳೂರು ಬಳಿ ಕಾರ್ ಕೆಟ್ಟಿ ನಿಂತಿದ್ದು...ಮತ್ತೆ ಸರಿ ಮಾಡಿಸಿಕೊಂಡು ಹೊರಟಾಗ ಮಧ್ಯಾಹ್ನವಾಗಿತ್ತು....ಬ್ರಹ್ಮಾವರ ದ ಹತ್ತಿರ ಮತ್ತೆ ಕಾರ್ ಕೈ ಕೊಟ್ಟಿದ್ದು...ಆಮೇಲೆ ಅಲ್ಲಿಂದ ಹೊರಟಾಗ ಕತ್ತಲೆ ಆಗೋದರಲ್ಲಿತ್ತು...ನಿನ್ನ ನೋಡಲು ಬರುವ ಮೊದಲೇ ಕೊಲ್ಲೂರ ದೇವಿ ದರುಶನ ಮಾಡಿ ಬರಬೇಕೆಂಬ ಬಯಕೆ ಕೈ ಗೂಡಲೇ ಇಲ್ಲ...ಅಂತೂ ಮನೆ ತಲುಪಿದಾಗ ರಾತ್ರಿಯೇ ಆಗಿತ್ತಲ್ಲ...ನೀನು ನಗುತ್ತ ಬಾಗಿಲಲ್ಲಿ ಕಾಯುತ್ತ ನಿಂತಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ...ಅಂತು ಊಟಮಾಡಿ ಮಾತಾಡಿ ಮಲಗಿದಾಗ ಮಧ್ಯ ರಾತ್ರಿ ಕಳೆದಿತ್ತು..ಮಾರನೇ ದಿನವೇ ನಿನಗೆ ನಮಸ್ಕರಿಸಿ ಹೊರಡುವಾಗ ಅದೇನೋ ನಿನ್ನ ಮುಖದಲ್ಲಿ ವಿಶೇಷ ಕಳೆ ನೋಡಿ ಬೆರಗಾಗಿದ್ದೆ..ಮೈಯ್ಯಲ್ಲಿ ಸ್ವಲ್ಪ ಇಳಿದಿದ್ದರೂ ಮುಖದಲ್ಲಿ ಮಾತ್ರ ಸಾಕ್ಷಾತ್ ದೇವರ ಕಳೆ ಕಂಡೆ..ಆಗಲೇ ನನಗೆ ಎಲ್ಲಿಂದಲೋ ಸೂಚನೆ ಸಿಕ್ಕಿತ್ತು ನಿನಗಿದು ನನ್ನ ಕೊನೆ ನಮಸ್ಕಾರ ಎಂದು.....ಅದನ್ನೇ ದಾರಿಯಲ್ಲಿ ಗಂಡನಿಗೆ ಹೇಳಿ ಬೈಸಿಕೊಂಡಿದ್ದೆ ಕೂಡ..ಅಷ್ಟು ಆರೋಗ್ಯವಾಗಿ ಮೊದಲಿಗಿಂತ ಚನ್ನಾಗಿ ಕಾಣುತ್ತಿದ್ದಾರೆ ಏನು ಅಂತ ಹೇಳ್ತಿಯ ಅಂತ..ಆದರೆ ಆಯೀ ನಾ ನಿನ್ನ ಮಗಳು..ನಿನ್ನ ಮುಖದ ಬದಲಾವಣೆ ನನಗೆ ಬೇರೆ ಸಂದೇಶವನ್ನೇ ನೀಡಿತ್ತು.....ಮಾರನೇ ದಿನ ಊರಿಂದ ನಿನಗೆ ಹುಷಾರಿಲ್ಲ ತಲೆನೋವಿಂದ ಒದ್ದಾಡಿದೆ ಸ್ವಲ್ಪ ಹೊತ್ತು ಅಂದಾಗಲೇ ನನ್ನಲ್ಲಿ ಆತ್ಮ ಸ್ಥೈರ್ಯ ಕುಸಿದಿತ್ತು....ಮತ್ತೆ ನೀನು ಆರೋಗ್ಯವಾದೆ ಅನ್ನೋ ವಿಷಯ ತಿಳಿದು ಸಮಾಧಾನಗೊಂಡೆ.....ನಾನು ನಿನ್ನ ನೋಡಲು ಬಂದಿದ್ದು ಶುಕ್ರವಾರ ಆದರೆ ಅದರ ಮುಂದಿನ ಶುಕ್ರವಾರ ಅಂದರೆ ಒಂದೇ ವಾರ ದಲ್ಲಿ ನೀ ನನ್ನ ಬಿಟ್ಟು ಕಾಣದ ಲೋಖಕ್ಕೆ ಹೋಗಿದ್ದೆ..ಬೆಳಿಗ್ಗೆ ಅಣ್ಣ ನಿಂದ ಫೋನ್ ಬಂದಾಗಲೇ ಆ ಶಬ್ದವೇ ಮೇಲೆ ಮಲಗಿದ ನನಗೆ ಯಾರೂ ಬಾಯಿಬಿಟ್ಟು ಹೇಳುವ ಮೊದಲೇ  ವಿಷಯ ಸಾರಿತ್ತು ಇದು ಹೇಗೆ ಅಂತ ಗೊತ್ತಿಲ್ಲ....ಆದರೆ ಆಯೀ ಯಾರೂ  ಹೇಳೋ ಮುಂಚೆನೇ ನಾನೂ ಅಳುತ್ತ ಕೆಳೆಗೆ ಬಂದಿದ್ದೆ....ನೀನಗೆ ರಾತ್ರಿ ಮಲಗಿದಲ್ಲೇ ಬ್ರೇನ್ ಹೆಮರೆಜ್ ಆಗಿದೆ ಅನ್ನೋ ಸುದ್ದಿ ಕೇಳಿ ನಿಂತಲ್ಲೇ ಕುಸಿದಿದ್ದೆ..ಹೃದಯ ಕಿತ್ತು ಬರುವಷ್ಟು ಅತ್ತಿದ್ದೆ ಕೂಡ...ತಕ್ಷಣ ಊರಿಗೆ ಬಂದು ನಿನ್ನ ನೋಡಿದ್ದು ಮಾತ್ರ ಜೀವಂತವಾಗಿ ಅಲ್ಲ....ನೀ ನನ್ನ ಮಗನ ಲೆಕ್ಕದ ಹೋಮಕ್ಕೆ ಬರಲೇ ಇಲ್ಲ..ಪಾಪ ಅಪ್ಪ ಒಬ್ಬರೇ ಬಂದು ನಿಂತಾಗ ಕರುಳ ಕತ್ತರಿಸಿದಷ್ಟು ನೋವಾಗಿತ್ತು...ಯಾವಾಗಲೂ ಹೇಳುತ್ತಿದ್ದೆಯಲ್ಲ ಯಾರ ಬಳಿಯೂ ತೊಟ್ಟು ನೀರೂ ಕೇಳದೇ ಗಟ್ಟಿಯಾಗಿರುವಾಗಲೇ ಹೋಗಿ ಬಿಡಬೇಕೆಂದು...ನಿನ್ನ ಇಷ್ಟದಂತೆ ಆಯಿತು ಆಯೀ ನೀನು ಸುಖಿ ಆದರೆ ನಿನ್ನ ಕಳೆದುಕೊಂಡ ನಾನು ಅನಾಥೆ....ನನಗೂ ನಿನ್ನಂತದ್ದೆ ಸಾವು ದೇವರು ಕರುಣಿಸಿದರೆ ನಾನು ಆತನಿಗೆ ಚಿರ ಋಣಿ....ಬೇಡ ಬೇಡ ಎಂದರೂ ಬಾಲ್ಯದ ನೆನಪು ಯಾಕೋ ಮರುಕಳಿಸುತ್ತೆ...ನಾವು ನಿನ್ನ ಕಣ್ಣು ತಪ್ಪಿಸಿ ಈಜೋಕೆ ಹೋದಾಗ ನೀನು ಬೆತ್ತ ಹಿಡಿದು ಅಲ್ಲಿಂದ ಹೊಡೆದು ತರುತ್ತಿದ್ದದ್ದು..ಹುಡುಗರಂತೆ ಗುಂಪು ಕಟ್ಟಿ ಗುಡ್ಡ ತಿರುಗ್ತಾ ಇರ್ತೀನಿ ಅಂತ ಬೈತಿದ್ದದ್ದು...ನನ್ನ ಮಗಳು ಎಷ್ಟು ಚಂದ ಎಲ್ಲಿ ಕಿಡ್ನಾಪ್ ಮಾಡ್ಬಿಡ್ತಾರೋ ಅಂತ ಸ್ವಲ್ಪ ಲೇಟ್ ಆದರೂ ಕಾತುರದಿಂದ ಕಾಯ್ತಾ ಇದ್ದಿದ್ದು...ರಾತ್ರಿ ಮಲಗುವಾಗ ನಿನ್ನ ಪಕ್ಕದಲ್ಲೇ ಆಗಬೇಕು ಆದರೆ ಒಂದು ಕೈ ಅಂತರದಲ್ಲಿ ಇರಬೇಕು ಅಂತ ಹಾಸಿಗೆ ಹಾಸಿ ಕೈಯಿಂದ ಅಳೆಯುತ್ತ  ನಿನ್ನ ಹತ್ತಿರ ಬೈಸಿಕೊಂಡಿದ್ದು...ನೀನೇ ನನ್ನ ಬಾಣಂತನ ಮಾಡಿದ್ದು...ನಿನ್ನ ಮೊಮ್ಮಕ್ಕಳನ್ನ ಮುದ್ದು ಮಾಡಿದ್ದು...ಎಲ್ಲಾ ಹಸಿ ಹಸಿ ನೆನಪಾಗಿ ಕಾಡುತ್ತಿವೆ ಆಯೀ....ಯಾಕೋ ನಿನ್ನ ಮಡಿಲಲ್ಲಿ ಮಲಗುವಾಸೆ ಕನಸ್ಸಲ್ಲಾದರೂ ಬಂದು ಒಮ್ಮೆ ನನ್ನ ತಲೆ ನೇವರಿಸಿ ಬಿಡು....ನನಗೆ ಸಂತ್ವಾನ ಹೇಳು ..ಕಾಯುತ್ತಿರುವೆ..ಬರುತ್ತಿಯಲ್ಲವಾ..ಈ ನಿನ್ನ ಕೊನೆ ಮಗಳನ್ನ ನೋಡಲು...


ನೀ ನನ್ನ ನೆನಪಿಸಿಕೊಂಡಾಗೆಲ್ಲ 
ನನ್ನ ಮನದಲ್ಲೇನೋ ಹೆದರಿಕೆಯ 
ಹಿತವಾದ ಕಂಪನ....
ನಾ ನೆನಪಿಸಿಕೊಂಡಾಗ 
ನಿನಗೂ ಹಾಗೆಯೇ......?
ನಾ ರಾಧೆಯಾಗ ಬೇಕೆಂದರೆ 
ನೀ ಕೃಷ್ಣ ನಾಗಬೇಕು 
ಆದರೆ ನನಗೆ ರಾಮನಲ್ಲೇ ಭಕ್ತಿ ...
ಸದಾ ಗೋಪಿಯರ ನೋಡುವ ಕೃಷ್ಣ ನಲ್ಲಲ್ಲ ....

Saturday 13 September 2014

ನಿನ್ನ ನೆನಪಿನ ಘಂಟು ಹೆಗಲಲ್ಲೇ ಇರುವಾಗ 
ನೀ ಬಿತ್ತಿದಾ ಕನಸು ಕಣ್ಣಲ್ಲೇ ಇರುವಾಗ 
ನೀ ತೊಡಿಸಿದಾ ನಗುವು ತುಟಿಯಲ್ಲೇ ಇರುವಾಗ 
ನಾ ಹೇಗೆ ಒಂಟಿ...?

Saturday 6 September 2014

ಆಡಿಸುವಾತ ಅದೆಲ್ಲಿಹನೋ.....
ಆಟ ಮುಗಿಸಲು ಅದ್ಯಾಕೆ ಮರೆತಿಹನೋ 
ದಿಗಂತದತ್ತ ನೋಟ ಹರಿಸಿ 
ತೀರದಿ ನಿಂತು ಕಾಯುತಿಹೆನು 
ನನ್ನ ಸರದಿಗೆ....
ಕಳೆದುಕೊಂಡಿದ್ದನ್ನ ಪಡೆವೆ ಎಂಬ ಖುಷಿಯಲ್ಲಿದ್ದೆ 
ಇನ್ನೇನು ಕೈಗೆ ಎಟಕುವದರಲ್ಲಿತ್ತು 
ಅದಾವ ಗಾಳಿ ಅಡರಿತೋ ಕಾಣೆ 
ಮಂಜಂತೆ ಮರೆಯಾಯ್ತು ....
ಕೊನೆಯ ಭರವಸೆ ಎಳೆಯೂ ಕಳೆಯುತ್ತಿದೆಯೆಂಬ ಭಾವ 
ಉಳಿದದ್ದು ನೆನಪಿನ ನಿಟ್ಟುಸಿರೊಂದೆ
ಈ ಹೃದಯ ಎನ್ನುವದು ನೀ ಕುಳಿತ ಸಿಂಹಾಸನ 
ಇಲ್ಲಿ ಬೇರೆಯವರಿಗೆಲ್ಲ ಪ್ರವೇಶ ನಿಷಿದ್ಧ 
ಪ್ರೀತಿ ಎಂದರೆ ಇಷ್ಟೆ 
ಎರಡು ಮನಗಳ ಮಿಳಿತ 
ಎರಡು ಹೃದಯದ ಬಡಿತ
ಎರಡು ದೇಹಗಳ ಸೆಳೆತ...
ಹೀಗಿರಲು ಪರರಿಗೆಲ್ಲಿದೆಯೋ ಜಾಗ...
ಎಂದೆಂದಿಗೂ ಅದು ನಿನಗೇ ಮೀಸಲು...ನೀ ಬಂದರೂ ..ಬಾರದಿದ್ದರೂ

Monday 25 August 2014

ಅದಾವುದೋ ಸ್ವರಕ್ಕೆ ಶೃತಿ ಯಾಗಿದೆ 
ಹೃದಯ ವೀಣೆಯ ತಂತಿ ....

ಅರಿಯಲಾರದೇ ಹೋದೆ ಇದಾವ ರಾಗವೆಂದು 
ಮೀಟಿದ್ದನ್ನ ಹಾಡೋದಷ್ಟೇ ನನ್ನ ಕೆಲಸವು 
ಭಾವ ರಸಗಳು ಬದಲಾದವು 
ಒಮ್ಮೆ ಮಂದ್ರಕ್ಕೂ ಇನ್ನೊಮ್ಮೆ ತಾರಕಕ್ಕೂ 

ಸಂಯೋಜಿಸಿದವರಾರೋ ಈ ಹಾಡು 
ಅನಿಸುತ್ತಿದೆ ಈಗ ಇದು ಶಿವರಂಜಿನಿ ಯೆಂದು
ಮೀಟಿಸಿಕೊಳ್ಳುವದಷ್ಟೇ ತಂತಿಯ ಕೆಲಸ 
ಮುಷ್ಕರ ಹೂಡುವ ಆಯ್ಕೆ ಎಲ್ಲಿದೆ ಅದಕೆ ...
ಮತಿ ಜಾರಿ ಬಿಸಿಯೇರಿದ್ದ ಮೈ ಮನಗಳು 
ಮಂಜಾಗಿ ಕೊರೆದಿದ್ದು ಶಿಥಿಲಗೊಂಡ 
ನಿನ್ನ ಹುಚ್ಚು ವಾದಗಳಿಂದ ...
ಕಾರ್ಗತ್ತಲು.... ಬಯಸಿತ್ತು 
ಬಿರುಗಾಳಿಯನೆದುರಿಸಿ ಉರಿವ ಬೆಳಕನ್ನ 
ಬಾಗಿಲಲೇ ಆರಿಸಿತ್ತು 
ಮಂದಮಾರುತವು...

Thursday 14 August 2014

ಹೆಗಲೇ ಅಂಬಾರಿಯಾದಾಗ....

ಹಳ್ಳಿ  ಮಕ್ಕಳು  ಮಳೆ ಗಾಳಿ ಚಳಿ ಬಿಸಿಲು ಒಂದನ್ನೂ ಲೆಕ್ಕಿಸದೆ, ಆಟವಾಡುತ್ತಾ ಬೆಳೆದಿರುತ್ತೇವೆ . ಆರೋಗ್ಯವೂ ಅಷ್ಟೆ ಕಲ್ಲನ್ನು ತಿಂದರೂ ಜಿರ್ಣಿಸೋ ಶಕ್ತಿ. ಆಗಿನ್ನು ಚಿಕ್ಕವಳು. ಪುಂಡಾಟಿಕೆಯಲ್ಲಿ ಗುಡ್ಡ ಬೆಟ್ಟ ಸುತ್ತುತ್ತಾ, ಗೇರು ಹಣ್ಣು,ನೇರಳೆ ಹಣ್ಣು ತಿನ್ನುತ್ತಾ ನಿಸರ್ಗದ ಮಡಿಲ ಮಗಳಾಗಿ ಬೆಳೆದವಳು. ಎಷ್ಟೇ ಗಟ್ಟಿ ಆರೋಗ್ಯ ಇದ್ದರೂ ಒಂದಲ್ಲ ಒಂದು ಸಮಯದಲ್ಲಿ ಪ್ರಕೃತಿಯ ಎದುರು ತಲೆ ಬಾಗಲೇ ಬೇಕಲ್ಲ . ತಂಪು ಉಷ್ಣ ಆಗೋದು, ಉಷ್ಣ ತಂಪಾಗೋದು ನಡೆದೇ ನಡೆಯುತ್ತೆ. ಅದರಂತೆ ನಾನೂ ಒಂದು ದಿನ ಉಷ್ಣ (ಜ್ವರ ) ಬಂದು ಮಲಗಿದೆ. ಆಯಿ ಮನೆ ಮದ್ಧುಗಳನ್ನೆಲ್ಲ ಮಾಡಿ ಕುಡಿಸಿದರೂ ಯಾವ ಪ್ರಯೋಜನವೂ ಆಗದೆ ಎಲ್ಲವನ್ನೂ ನಿಮಿಷದಲ್ಲೇ ಕಕ್ಕುತ್ತ ಬೆಳಗಾಗುವದರೊಳಗೆ ನಿತ್ರಾಣಳಾಗಿದ್ದೆ. ಮನೆಯವರಿಗೆಲ್ಲ ತಲೆಬಿಸಿ ಶುರುವಾಯ್ತು. ಅದು ಹಳ್ಳಿ ಡಾಕ್ಟರ್ ಬಳಿ ನನ್ನ ಒಯ್ಯಲು ವಾಹನಗಳಿಲ್ಲ. ಜೊತೆಗೆ ಮನೆ ತನಕ ವಾಹನಗಳು ಬರುವಂತ ರಸ್ತೆಗಳೂ ಇಲ್ಲ. ನಡೆದು ಹೋಗಲು ನನ್ನಲ್ಲಿ ಶಕ್ತಿ ಇರಲಿಲ್ಲ. ಆಗ ಬಂದವನೇ ರಾಮ ಗೌಡ. ಊರಲ್ಲಿ ಅಡಿಕೆ ತೋಟವಿದ್ದ ಪ್ರತಿಯೊಬ್ಬರಿಗೂ ರಾಮ ಗೌಡ ಆಪ್ತ. ಯಾಕೆಂದರೆ ಇಡೀ ಊರಿನಲ್ಲಿ ಅಡಿಕೆ ಕೊಯ್ಯೋ ಏಕೈಕ ಪ್ರತಿಭೆ. ಅಡಿಕೆ ಕೊಯ್ಯೋದು ಸುಲುಭದ ಕೆಲಸವಲ್ಲ. ಸರ್ಕಲ್ ತರ ಸುತ್ತಿದ ಹಗ್ಗವನ್ನು ಕಾಲಿಗೆ ಸಿಕ್ಕಿಸಿಕೊಂಡು ಮರ ಏರೋದು,ಮರದ ಕೆಲಸಕ್ಕೆಂದೇ ಇರುವ ವಿಶೇಷ ತರದ ಮಣೆಯಲ್ಲಿ ಮರದ ಮೇಲೆ ಕುಳಿತು ಅಡಿಕೆ ಕೊನೆ ಕತ್ತರಿಸುವದು, ಸೊಂಟಕ್ಕೆ ಸುತ್ತಿಕೊಂಡ ಇನ್ನೊಂದು ಹಗ್ಗದಿಂದ ಕೊನೆ ಇಳಿಸೋದು, ಜೊತೆಗೆ ಬೆನ್ನಿಗೆ ಸಿಕ್ಕಿಸಿಕೊಂಡ ಜೋಟಿ (ಒಂದು ತರದ ಕೊಕ್ಕೆ) ಯಿಂದ ಇನ್ನೊಂದು ಮರವನ್ನ ಬಗ್ಗಿಸಿ ಮರದಿಂದ ಮರಕ್ಕೆ ಹಾರೋದು ಇವೆಲ್ಲ ಎಲ್ಲರಿಗೂ ಬರುವಂತದ್ದಲ್ಲ . ದೈರ್ಯ ಇರಬೇಕು. ಆದರೆ ಈ ಕೆಲಸವನ್ನು ನೀರು ಕುಡಿದಷ್ಟೇ ಸುಲುಭವಾಗಿ ಮಾಡುವವನು ಈ ರಾಮಗೌಡ. ಇವನ ವಿಶೇಷತೆ ಎಂದರೆ ಇವನು ಈ ಕೆಲಸವನ್ನೆಲ್ಲ ಎಣ್ಣೆ (ಸರಾಯಿ) ಹಾಕಿಕೊಂಡೆ ಮಾಡುತ್ತಿದ್ದ. ಅ ದಿವಸ ನಮ್ಮ ಮನೆ ಕೆಲಸಕ್ಕೆಂದು ಬಂದವನು ಯಾವಾಗಲೂ ಚೈತನ್ಯದ ಚಿಲುಮೆಯಂತೆ ಇರುತ್ತಿದ್ದ ನಾನು ಶವದ ತರ ಹಾಸಿಗೆ ಹಿಡಿದಿದ್ದು ನೋಡಿ ಅವನಿಗೂ ಬೇಜಾರಾಯ್ತು. ಅಪ್ಪನ ಬಳಿ ನೀವು ಒಪ್ಪುವದಾದರೆ ನಾನು ಇವಳನ್ನು ಹೆಗಲಮೇಲೆ ಹೊತ್ತು ಸುರಕ್ಷಿತವಾಗಿ ಡಾಕ್ಟರ ಬಳಿ ಕರೆದೊಯ್ಯುತ್ತೇನೆ ಎಂದ. ಮನೆಯಲ್ಲಿ ಇವನು ಮೊದಲೇ ಕುಡುಕ  ದಾರಿಯಲ್ಲಿ ಬೀಳಿಸಿದರೆ ಅಂತ ಅನುಮಾನ ಪಟ್ಟರೂ ಬೇರೆ ದಾರಿಕಾಣದೆ ಅಣ್ಣನೂ ಜೊತೆಗೆ ಬರುವದೆಂದು ಒಪ್ಪಿಕೊಂಡರು. ನನ್ನ ಎಬ್ಬಿಸಿ ಅವನ ಹೆಗಲ ಮೇಲೆ ಕೂರಿಸಿದ್ದೂ  ಆಯ್ತು. ಡಾಕ್ಟರ ಇದ್ದಿದ್ದು ಕವಲಕ್ಕಿ ಅನ್ನೋ ಊರಲ್ಲಿ.ತೋಟ,ಹೊಳೆ,ಮನೆಗಳು,ದಾಟಿ ಗುಡ್ಡ ಹತ್ತಿ ತುಂಬಾ ನಡೆದು  ಹೋಗಬೇಕಿತ್ತು.  ದಾರಿಯಲ್ಲಿ ಸಿಕ್ಕವರೆಲ್ಲ ವಿಷಯ ಕೇಳಿ ನನ್ನ ಕಡೆ ಕರುಣೆಯ ನೋಟ ಬೀರಿದರೆ ಮಕ್ಕಳೆಲ್ಲ ನನ್ನ ಸವಾರಿ ನೋಡಿ ಅಸೂಯೆ ಪಡುತ್ತಿದ್ದರು. ಹೆಗಲೇರಿ ಕುಳಿತ ನನಗೆ ಜ್ವರದಲ್ಲೂ ಅಂಬಾರಿ ಹೊತ್ತ ಆನೆಯ ಮೇಲೆ ಕುಳಿತ ಅನುಭವ. ಕಣ್ಣುಬಿಡ ಲಾರದಷ್ಟು ಜ್ವರ ಇದ್ದರೂ ಕಷ್ಟದಲ್ಲಿ ಸುತ್ತಲ್ಲೂ ನೋಡುತ್ತಿದ್ದೆ.ರಾಮ ಗೌಡನ ಕಾಲು ಸ್ವಲ್ಪ ಆಚೆ ಈಚೆ ಆದರೂ ಅಣ್ಣ ಪಾಪ ಟೆನ್ಶ ನ್ ಅಲ್ಲಿ ಹುಷಾರು ಅನ್ನುತ್ತಿದ್ದ.  ಅಂತೂ ಡಾಕ್ಟರ ಬಳಿ ಹೋಗಿ ಅವರು ಇಂಜೆಕ್ಷನ್ ಮಾಡಿ ಒಂದು ತಾಸು ಅಲ್ಲೇ ಇಟ್ಟುಕೊಂಡು ನಾನು ಸ್ವಲ್ಪ ಚೇತರಿಸಿಕೊಂಡಾಗ ಮನೆಗೆ ಕರೆದುಕೊಂಡು ಹೋಗಿ ಅಂದರು.  ಮತ್ತೆ ಅದೇ ಅಂಬಾರಿಯಲ್ಲಿ ಕುಳಿತು ನಾನು ಮನೆಗೆ ಬಂದಿದ್ದೂ ಆಯ್ತು. ಅಂತೂ ರಾಮಗೌಡ ಹೇಳಿದಂತೆ ಸರಾಯಿ ಅಂಗಡಿಯ ಎದುರೇ ನಡೆದು ಹೋದರೂ ಸ್ವಲ್ಪವೂ ಕುಡಿಯದೆ ತನ್ನ ಮಾತಿನಂತೆ ಸುರಕ್ಷಿತವಾಗಿ ನನ್ನನ್ನು ಮನೆಗೆ ತಂದು ಬಿಟ್ಟದ್ದ . ನನ್ನ ಅಂಬಾರಿ ಸವಾರಿಯೂ ಸಂತಸದಿಂದ ಮುಗಿದಿತ್ತು. ಪಾಪ ಈಗ ಕೆಲವು ವರುಷದ ಹಿಂದೆ ಕುಡಿದು ಮರಹತ್ತಿದ್ದ ರಾಮಗೌಡ ಮರದಿಂದ ಬಿದ್ದು ಪ್ರಾಣ ಕಳೆದುಕೊಂಡ. ಈಗ ಬರಿ ನೆನಪಷ್ಟೆ.


Tuesday 12 August 2014

ಬಾಳ ಕತ್ತಲಿಗೆ ಬೆಳಕಾಗುವೆನೆಂದೆ 
ಅದಾವ ಗಾಳಿ ಅಡರಿತೋ ಕಾಣೆ 
ಕಾರ್ಗತ್ತಲ ತುಂಬಿ ಹೋದೆ

ಅರಿಯಲ್ಹೇಗೆ ಕಾರಣವ 
ಬೆಳಕಿನ ಕಿಡಿಯೇ ಇಲ್ಲದಿರೆ 
ದೃಷ್ಟಿ ಮಂಜಾಗಿ ಮಸುಕಾಗಿದೆ 
ನಿನ್ನ ಫಟ ದೂರದಲಿ 

ಹೊಳಪು ಕಳೆದಿದೆ ಭರವಸೆಯ ಮಿಂಚಲ್ಲಿ
ದ್ವಂದ್ವ ಕಲುಕಿದೆ ಮನವ
ನಿಟ್ಟುಸಿರೊಂದೆ ಶೇಷವಾಗಿದೆ
ತತ್ವಗಳಾವುದು ಸರಿ ಹೊಂದದೆ

Tuesday 5 August 2014

ನಾನಿಲ್ಲಿ ಒಂಟಿ ನೀ ಅಲ್ಲಿ ಒಂಟಿ
ನಡುವೆ ಸೇತುವೆಯಂತೆ
ವಿರಹದಾ ಬೆಂಕಿ
ಮಂದದಲಿ ಬೀಸುತಿದೆ ಹೊರಗೆ ಕುಳಿರ್ಗಾಳಿ
ಮುದುರಿದೆ ಮೈ ಚಳಿಗೆ ನಡುಕ
ಒಳಒಳಗೆ ದಹಿಸಿ ಮನ ಪರದಾಡುತಿದೆ
ಸುಪ್ತ ಜ್ವಾಲಾಮುಖಿಯ ತೆರದಿ
ನನ್ನೆದೆಯ ಬಡಿತವೇ ಅಪ್ಪಳಿಸಿದೆ
ಸಿಡಿಲಂತೆ ಕಿವಿಗೆ
ನಿದ್ದೆಯಲೂ ಅರಸುತಿದೆ ಕೈ
ಪಕ್ಕದಲಿ ನಿನ್ನ ಹಾಜರಾತಿಗೆ
ಎಲ್ಲಿದ್ದರೂ ಬಂದುಬಿಡು
ಬೋರ್ಗರೆವ ಮಳೆಯಂತೆ
ತಣಿದು ಸುಖದಲಿ ನರಳಲಿ ಇಳೆಯು
ಸುರಿವ ವರ್ಷ ಧಾರೆಗೆ