Sunday 2 December 2012

ಭರವಸೆ 
ಮಂಜು ಮುಸುಕಿದ ಹಾದಿಯಿದು 
ಜೊತೆ ಮುಸ್ಸಂಜೆಯೂ ಆಗಿಹುದು 
ಎಲ್ಲೆಂದು ಹುಡುಕಲಿ ನಾ ನಿನ್ನ 
ಬಂದು ಸೇರಲಾರೆಯಾ ನೀ ನನ್ನ 
ಕತ್ತಲಾವರಿಸೊ ಮುನ್ನ 
ದಾರಿಯುದ್ದಕೂ ಅರಳಿ ಸತ್ತ 
ಆಸೆ ಹೂಗಳು ಹಲವು 
ಸಿಗದಿರೆ ಎಲ್ಲೆಲ್ಲೂ ನಿನ್ನ 
ಇರುವಿಕೆಯ ಕುರುಹುಗಳು 

ಆದರೇನಂತೆ ಹೊಳೆಯುತಿದೆ ಎದೆಯಲ್ಲಿ
ಸೋಲನೊಪ್ಪದ ನಂಬಿಕೆಯ ಕಿಚ್ಚು
ಬಂದು ಸೇರುವೆ ನೀ ನನ್ನ
ಕತ್ತಲಾವಾರಿಸೊ ಮುನ್ನ
ಅಂದು ಶಬರಿಯ ಭರವಸೆಯು
ಕರೆತರಲಿಲ್ಲವೇ ಶ್ರೀ ರಾಮನನ್ನ
ಬರದಿದ್ದರಲ್ಲಿ ನಡೆಯುತ್ತಿತ್ತು
ನಂಬಿಕೆಯ ಮಾರಣ ಹೋಮ
ಮುಸ್ಸಂಜೆಯಾದರೆನಂತೆ ಕತ್ತಲಲ್ಲವಲ್ಲ
ದೀವಟಿಗೆ ನೀ ಹಿಡಿದು ನಡೆಸಲು
ಬಂದು ಸೇರುವೆ ನನ್ನ
ಕತ್ತಲಾಗುವ ಮುನ್ನ ...

Friday 5 October 2012


ಲಜ್ಜೆ
ಚಂದಿರನ ಕಂಡೊಡನೆ
ಉಕ್ಕಿ ಮೇಲೇರುವ ಈ
ಸಮುದ್ರಕ್ಕೆ ಲಜ್ಜೆಯೇ ಇಲ್ಲವೆ

ತಾರೆಗಳ ಕಂಡೊಡನೆ
ನಗುತ ಮುಗಿಲಲಿ
ತೇಲುವ ಚಂದಿರಗೆ
ಲಜ್ಜೆಯೇ ಇಲ್ಲವೆ

ಸೂರ್ಯ ದರ್ಶನ ಕಾದು
ಮೈ ಮರೆತು ನಗುಬೀರೊ
ಹೂಗಳಿಗೆ ಲಜ್ಜೆಯೇ ಇಲ್ಲವೆ

ಕರೆಯದಿದ್ದರೂ ಬಂದು
ಹೂಗಳ ಮೈಸವರಿ
ಗಂಧವ ಹೊತ್ತೊಯ್ಯೋ
ಗಾಳಿಗೆ ಲಜ್ಜೆಯೇ ಇಲ್ಲವೆ

Sunday 16 September 2012


ಅಜ್ಜಿಯ ಸೀರೆ
ಅಜ್ಜಿಪೆಟ್ಟಿಗೆಯಲಿ ಇತ್ತೊಂದು ರೇಷಿಮೆ ಸೀರೆ
ಅದರ ತುಂಬೆಲ್ಲ ಅಜ್ಜಿಯ ನೆನಪಿನಾ ಧಾರೆ
ಒಂದೇ ನೋಟದಿ ಕಣ್ಮನವ ಸೆಳೆದಿತ್ತು
ಸ್ಪರ್ಶಿಸಲು ಅದರಲ್ಲಿ ಬೆಣ್ಣೆಯ ನುಣುಪಿತ್ತು

ಅದರಂಚಿನಲ್ಲೋ ನವಿಲಿನ ಚಿತ್ತಾರ
ಸೀರೆಯಳತೆಯೋ ಗಜದ ವಿಸ್ತಾರ
ಸುತ್ತಿ ಮೆರೆಯುವದು ಕಷ್ಟದ ವಿಚಾರ
ಗ್ರಹಿಸಿದರೆನೆ ಹೆದರಿಕೆ ಅದರಲ್ಲಿ ನನ್ನ ಆಕಾರ

ಕತ್ತರಿಸ ಹೋದರೆ ಎದಿರು ಅಜ್ಜಿಮುಖ ಬರುತ್ತಿತ್ತು
ಮಾಡಲೇನೆಂದು  ಪೆಟ್ಟಿಗೆಯಲಿ ಭದ್ರವಾಗಿತ್ತು
ಅಂದು ನೆನಪಾಗಿ ನೋಡಿದರೆ........
ಜಿರಳೆ ಅದರಲ್ಲಿ ಚಿತ್ತಾರ ಬಿಡಿಸಿತ್ತು
ಪಾಪ ಅಜ್ಜಿಯ ಸೀರೆ ಗುಜರಿ ಮಾಲಾಗಿತ್ತು

Wednesday 12 September 2012


ಸೋಲು ಗೆಲುವು
ಕಲಿಯಲೇ ಬೇಕು ಒಮ್ಮೆಯಾದರೂ
ಜೀವನದಲಿ ಸೋಲನು
ಇಲ್ಲದಿರೆ ಅರಿಯಲಾರೆ ಬದುಕನು
ಸೋಲ ಕಲಿಸೋಕೆ ಯಾವ ಶಾಲೆಗಳಿಲ್ಲ
ಉಂಟು ನೂರು ದಾರಿಗಳು ಗೆಲ್ಲುವದಕೆ
ಎಲ್ಲ ಗುರಿಗಳಿಗೂ ಗೆಲುವೆಂಬುದೇ ಕೊನೆಯು
ಗೆಲಿವಿಗಾಗಿಯೇ ತುಡಿತ,ಮುಡಿಪು ದೇವರಿಗೆ
ಗೆಲುವಿನಾ ಏಣಿಯನು ಏರುವದು ಸುಲಭ
ಇಳಿಯುವಾ ಸಂಕಟವ ತಡೆಯಲಾರೆ
ಗೆಲುವಿಂದ ನೀ ಉಬ್ಬಿ ಬೀಗಿದರೆ
ಸೋಲು ಕಂಡಾಗ ಮತಿ ಭ್ರಮಣೆ
ಎಚ್ಚೆತ್ತಿಕೋ ಮನವೆ ಸೋಲಿಂದ ಕಂಗೆಡದೆ
ಸೋಲು ಗೆಲುವೆಂಬುದು ಬದುಕಿನೆರಡು ಮುಖ
ಸೋಲಿನ ಸರಣಿಯಾ ಮಧ್ಯೆ ಒಮ್ಮೊಮ್ಮೆ
ಪಡೆವ ಗೆಲುವಿಂದ ತುಂಬಿಕೊ ಮನಕೆ ಚೈತನ್ಯ
ಎದುರಿಸು ನೀ ಜೀವನದ ಕಷ್ಟ ಕಾರ್ಪಣ್ಯ 
 

Friday 7 September 2012


ತೊಳಲಾಟ
ಎಲ್ಲ ಇದ್ದರೂ ಇಲ್ಲಿ
ಅದೇನೋ ಕೊರತೆ
ಮನಸಿನ ಮೂಲೆಯಲ್ಲಿ
ಬೇಸರದ ಒರತೆ
ಅದೇನೋ ಚಡಪಡಿಕೆ
ಮಾತಲ್ಲಿ ತಡಬಡಿಕೆ
ಬತ್ತದಾ  ನೀರೀಕ್ಷೆ
ನನ್ನ ಪಾಲಿಗಿದು ಅಗ್ನೀಪರೀಕ್ಷೆ


ಅಂದು-ಇಂದು
ಅಂದು ನೀನಿದ್ದೆ ಬಳ್ಳಿಯೂ ನಾಚುವಂತೆ
ಇಂದೇಕೆ ಆದೆ ಕುಂಬಳ ಕಾಯಿಯಂತೆ
ಅಂದಾಗಿದ್ದೆ ನೀ ಏಳು ತೂಕದ ಮಲ್ಲಿಗೆ
ಇಂದು ಕೈ ಹಿಡಿದು ಹೇಳಬೇಕು
ಏಳು..ತೂಕವೆ ಮೆಲ್ಲಗೆ
ಅಂದು ನಿನ್ನ ಕಂಠ ಕೇಳಿ ಕರ್ಣ ಪಾವನ
ಇಂದೇಕೋ ಅನಿಸುತಿದೆ ಗಾರ್ಧಬ ಗಾಯನ
ಅಂದೆನಿಸಿತ್ತು ಬದುಕು ಸುಂದರ ಕವನ
ಇಂದು ನಾನಾಗಿರುವೆ ಜಂಜಾಟದಲಿ ಹೈರಾಣ
(ಸ್ನೇಹಿತರೆ ಇದು ಬರಿ ಹೆಂಗಸರಿಗಷ್ಟೆ ಅನ್ವಯವಾಗಲ್ಲ ಗಂಡಸರಿಗೂ ಅನ್ವಯವಾಗುತ್ತದೆ)

Saturday 1 September 2012

ನೀರೀಕ್ಷೆ
ನನ್ನ ನೆನಪಲಿ ಒಮ್ಮೆ
ಬರಲಾರೆಯ ಗೆಳೆಯಾ
ಬವಬಂಧಗಳ ಸರಿಸಿ
ನೀ ಬಳಿ ಸಾರಲಾರೆಯ
ಬೇಡವೆಂದರೂ ಈ ಹುಚ್ಚುಮನ
ರಚ್ಚೆ ಹಿಡಿದು ತಾ ರೋಧಿಸಿದೆ
ಕಣ್ಣೆರಡು ಕಾತರಿಸಿ
ಕೊಳವಾಗಿ ಹರಿಯುತಿದೆ
ಯಾಕಿಂತ ಮೌನ
ಕಲ್ಲಾಯಿತೆ ಹೃದಯ
ಕಿವಿಗೊಟ್ಟು ಆಲಿಸಲು ಕಾಡುತಿದೆ
ಕರಗಿಬಿಡುವೆನೆಂಬ ಭಯ
ಬೇಡ ಈ ಮುಖವಾಡ
ಕಿತ್ತೆಸೆದು ತೋರು ನೈಜತೆಯ
ಒಮ್ಮೆ ಹಿಂತಿರುಗಿ ನೋಡು
ನೀ ನಡೆದ  ಹಾದಿಯ
ಬೆಂಡಾಗಿ ಬಸವಳಿದು ಕಾಯುತಿಹೆ
ಹಗಲಲ್ಲಿ ಕಾಣೋ ಚಂದ್ರನಾ ಶವದಂತೆ
ತಂಗಾಳಿಯಂತೆ ನೀ ಬಂದು ಮುಖತೋರು
ಸತ್ತ ಕನಸಿಗೆ ನೀ ಮರುಜನ್ಮ ನೀಡು  

Sunday 26 August 2012

ಬದುಕು
ಎಣಿಸಿದಂತೆ ನಡೆಯುವದಿಲ್ಲ 
ನಮ್ಮ ಈ ಜೀವನ
ಒಯ್ದಕಡೆಗೆ ನಡೆಯಬೇಕು
ನೋವ ನಲಿವಿನ ಸಿಂಚನ

ಜನುಮ ಜನುಮದ ದಾರಿಯಲ್ಲಿ
ಹಲವು ಕವಲು ತಿರುವು
ಯಾರದೋ ಶೃತಿಗೆ ಹಾಡಬೇಕು
ಜೀವನವಿದು ಗಾಯನ

ಯಾವ ತುತ್ತ ಚೀಲದಲ್ಲಿ ಯಾರ ಹೆಸರು ಬರೆದಿದೆ
ಯಾವ ಮಣ್ಣಿನಲ್ಲಿ ಯಾರ ಋಣವು ಸೇರಿದೆ
ಬೆಳೆವವನಾರೊ ಪಡೆವವನಾರೊ
ಮೂರುದಿನದ ಬದುಕಿನಲ್ಲಿ

ಬದುಕೆಂಬುದೊಂದು ಸಂತೆ
ನಾವಿಲ್ಲಿ ಬಿಕರಿ ವಸ್ತುವಂತೆ
ಯಾರಿಗೆ ಯಾರು ಕಾವಲಿಲ್ಲ
ಕ್ಷಣಿಕವಿದು ಗಾಳಿಗೊಡ್ಡಿದ ದೀಪದಂತೆ

Thursday 2 August 2012


ಮರೆವು
ನಿದ್ದೆಯಲಿ ಕನಸಾಗಿ ಎದ್ದಾಗ ನೆನಪಾಗಿ
ಉಸಿರಲ್ಲಿ ಉಸಿರಾಗಿ
ನರನಾಡಿ ಸಂಚರಿಸಿ
ನೀ ಕಾಡುತಿರಲನುದಿನವು
ಮರೆವೆಂಬುದು ಮರಿಚಿಕೆಯಾಯ್ತಲ್ಲ  ಗೆಳೆಯಾ ....


ಅಮ್ಮಾ.....

ನೆನಪಿಂದ ನೆನೆನೆನೆದು
ಭಾರವಾಗಿಹೆ ಮನಸು
ಆದರೂ ನಾ ನಿನ್ನ ಪ್ರೀತಿಸುವೆ 
ಓ ನೆನಪೆ..
ಆಶಿಸಿದೆ ಅಂದು ನೀ ದೂರ ಹೋಗದಿರಲೆಂದು
ಆದರೂ ನೀ ತೊರೆದೆ ನನ್ನನ್ನು
ಅದಕಾಗಿಯೇ ಬಿಗಿದಿಹೆ ಪ್ರೀತಿಯಾ ಪಾಶವನು
ನಿನ್ನ ನೆನಪಿಗೆ  ಕಳೆದುಕೊಳ್ಳಬಾರದೆಂದು 

ಇಂದು ನಾ ಅಲಂಕರಿಸಿಹೆ ತಾಯಿಯಾ ಪಟ್ಟವನು
ಆದರೂ ನಾ ನಿನಗೆ ಎಂದಿಗೂ ಪುಟ್ಟ ಮಗುವಲ್ಲವೇನು
ಹೆಜ್ಜೆ ಹೆಜ್ಜೆಗೂ ಹಂಬಲಿಸಿ ಕೊರಗುತಿಹೆ
ನಿನ್ನ ಮಮತೆಯಾ ಶ್ರೀ ಮುಖವನು

Saturday 21 July 2012


ನೆನಪು
ನೆನಪಿನಾಗೂಡಲ್ಲಿ ಬಚ್ಚಿಟ್ಟು ಸಲಹುತಿಹೆ
ಆಗಾಗ ತೆಗೆದೊರೆಸೆ ಕೋಟಿ ಪ್ರಭೆಯು
ಬಿಚ್ಚಿಡದೆ ಮುಚ್ಚಿಟ್ಟ ಭಾವಗಳು ಹಲವು
ನೆನಪುಗಳಾಗಿ ಚುಚ್ಚಿ ಕಣ್ಣಲ್ಲಿ ನೀರು

ಬದುಕೆಂಬ ಆಟದಲಿ ಆಟಗಾರರು ನಾವು
ಎಸೆದರು ದಾಳವ ಅವರವರ ಹಿತದಂತೆ
ತಿರುಗಿನೋಡದೆ ಮುನ್ನುಗ್ಗ ಬೇಕಾಯ್ತು
ತಲೆಬಾಗಿಸಿದ ಕುರಿಮಂದೆಯಂತೆ

ಸಮರ್ಪಿತವಾಯ್ತು ಇನ್ನಾರಿಗೋ ಜೀವಿತವು
ಮಂಜಂತೆ ಕರಗೊಯ್ತು ಮನದ ಇಂಗಿತವು
ನೋವು ನಲಿವಿನ ಸಂತೆಯಲಿ ನಿಂತು
ಬಾರದ ನಿನ್ನ ನಿರೀಕ್ಷೆಯು.

ಬರಲಾರೆ ನೀನು ಕರೆಯಲಾರೆ ನಾನು
ಬಂಧಿಸಿಹುದು ಚೌಕಟ್ಟಿನೊಳಗೆ ಸಂಭಂದವು
ಆದರೇನಂತೆ ಹಾರೈಸುವೆ ಎದೆತುಂಬಿ
ಎಲ್ಲಾದರೂ ನೀ ಸುಖವಾಗಿರು

Tuesday 17 July 2012


ಆಶಯ

ಸೆಳೆಯುತಿರುವಳು  ತನ್ನ ಮಾಯಾಪಾಶದಿ
ಮುಗ್ದ ಜನತೆಯನ್ನು
ಬಂಧಿಸುತಿಹಳು ಹಲವು ರೂಪದಿ
ಮೋಹದಾ ಬಲೆಯಲಿ
ಒಮ್ಮೆ ಸಿಕ್ಕರೆ ಸಾಕು ಬಿಡಳಿ ಮೋಹನಾಂಗಿ
ಸುತ್ತಿ ಮೈ ಮರೆಸುವಳು ನಶೆಯಲ್ಲಿ

ಅಡಿಯಿಟ್ಟರೆ ಸಾಕು ನೀ ಭಂದಿ ಚಕ್ರವ್ಯೂಹದಲ್ಲಿ
ಕಡಿದೇ ಬಿಡುವಳು ನಿನ್ನ ಸಂಭಂದ ಸಮಾಜದಲ್ಲಿ
ಬರಬೇಕೆಂದರೂ ಬರಲಾರೆ ನೀ ಹೊರಕೆ
ದಾಸಾನು ದಾಸ ನೀ ಅವಳ ಪಾದಕೆ

ದಿನದಲೆಷ್ಟೋ ಜನರು ಮರುಳು ಇವಳ ಸೆಳೆತಕೆ
ಒಂದೊಂದೆ ಅಡಿಯಿಡುವರು ತಮ್ಮದೇ ಅಧಃಪತನಕೆ
ಅವತಾರವೋ ಇವಳಿಗೆ ಹಲವಾರು
ಹಿಂದೆ ಹೋದವರಿಗೆ ಕನಸಾಗುವದು ಸುಂದರ ಬಾಳು

ಕ್ಷಣದಲ್ಲೇ ಆವರಿಸುವಳು ಇಡಿಯಾಗಿ ಇವಳು
ವಿಧಿಯಿಲ್ಲದೆ ಆಗುವೆ ಅವಳ ಸೆರೆಯಾಳು
ಬೆಳೆಸುವಳು ನಿನ್ನಲ್ಲಿ ಬಿಟ್ಟಿರಲಾರದ ನಂಟು
ತೆರಲೇ ಬೇಕು ನೀ ಇದಕೆ ಆಯುಷ್ಯದ ಘಂಟು

ಎಚ್ಚರಾ ಮನುಜ ಸೇರೆಯಾಗದಿರು ಇವಳ ಮೋಹದಲಿ
ಸುಂದರ ಸಮಾಜದ ಶಿಲ್ಪಿಯಾಗು ಬಾಳಲಿ

Thursday 5 July 2012


ಭಗ್ನ ಕನಸು
ನೂರು ಕನಸಿನ ಮೊಗ್ಗ  ಹೊತ್ತು ಬಂದೆ
ನಿನ್ನ ಪೂಜೆಗೆ
ಒಂದೂ ಅರಳದೆ ಹೊಸಕಿಹೊಯಿತಲ್ಲ
ನಿನ್ನ ಕಾಲ ಕೆಳಗೆ
ಮನಸಲ್ಲಿ ಹೆಣೆದಿಟ್ಟ ಕನಸುಗಳು ನೂರು
ಚಿಲಿಪಿಲಿ ಅನ್ನುತ ಕಟ್ಟಿದವು ಪುಟ್ಟ ಗೂಡು
ಮೊಟ್ಟೆ ಒಡೆದು ಮರಿಯಾಗಿ ಗರಿಗೆದರ ಬೇಕಿತ್ತು
ಆದರದಕೆ ಬಿತ್ತು  ಕಾಳ್ಗಿಚ್ಚು
ಇಂದು ನಿಂತಿದೆ ಬರಿ ಅವಶೇಷವು
 ಸಾರುತಿದೆ ಗತ ಇತಿಹಾಸವು


ಹಣತೆ
ಒಲವು ತುಂಬಿದ ನಿನ್ನ
ಆ ಎರಡು ಕಂಗಳು ನನ್ನ
ಬಾಳಿನ ದಾರಿ ತೋರುವ
ಎರಡು ಹಣತೆಗಳು  ಇನಿಯಾ
ಮುಸುಕುವಾ ಕತ್ತಲೆಯ ಓಡಿಸಿ
ಪ್ರೀತಿಯೆಂಬ ಬೆಳಕ ಚೆಲ್ಲುತ
ನಂದಾದೀಪದಂತೆ ಬೆಳಗುತಿರಲಿ
ಅನವರತಾ.....

Tuesday 3 July 2012


ನೆನಪೆ ನೀ ಯಾಕೆ ಹೀಗೆ

ಮನಸೆಂಬ ಕಡಲಲ್ಲಿ ಅಲೆಯಂತೆ ಉದ್ಭವಿಸಿ
ಸರದಿಯಲಿ ಬಂದು
ಹೃದಯಕೆ ನೀ ಅಪ್ಪಳಿಸುವೆ

ಮರಳಂತೆ ನಾ ನಿನ್ನನೆ ಅನುಸರಿಸೆ
ತಿರುಗಿ ನೂಕುವೆ ಯಾಕೆ
ವಾಸ್ತವದ ದಡಕೆ

ದಡದಲುಂಟು ನೂರಾರು ಚಿಪ್ಪುಗಳು
ಒಂದೊಂದಕೂ ಒಂದೊಂದು ಕಥೆಯು
ನೋವು ಸಂತಸದ ಹಲವು ಮುಖವು

ಸಿಹಿಕಹಿಗಳ ಹದವಾದ ಮಿಶ್ರಣದಿ
ಮಣಿಮಾಡಿ ಪೋಣಿಸಲು
ಬದುಕು ಹೊಳೆಯುವ ಸುಂದರ ಮಾಲೆಯು  






ಹೂಗಳು
ಬಾಳೆಂಬ ತೋಟದಲಿ
ಅರಳಿದಾ ಹೂಗಳು ನಾವು
ಬಿಸಿಲಿಗೆ ಬಾಡುವೆವೋ
ಗಾಳಿಗೆ ತೂಗುವೆವೋ
ತಿಳಿಯದೆ ಭವಿಷ್ಯಕೆ ಮುಖ ಮಾಡಿ ನಿಂತಿಹೆವು

ಅರಳಿ ನಗುತಿರೆ ತೋಟವದು ಚಂದ
ದುಂಬಿಗೂ ಆನಂದ
ಸೋತು ಬಸವಳಿಯೇ ಮೌನದ ಛಾಯೆ
ಗಿಡದ ಬುಡಕಿಸ್ಟು ಕಸ ಗೊಬ್ಬರ

ಹೆಣ್ಣಿನಾ ಮುಡಿಯೇರೆ ಮೆರೆವುದು ಗರ್ವ
ಸಂತಸದ ಸಂಭ್ರಮಕೆ ನಾ ಪ್ರತೀಕ
ದೇವರಾ ಪೂಜೆಗೆ ಉಪಯೋಗವಾಗೆ
ಬದುಕಿದು ಸಾರ್ಥಕ  ಪರಮಾರ್ಥಕ  

Tuesday 19 June 2012


ಪಯಣ
ಕಾಣದೂರಿಗೆ ನಮ್ಮ ಪಯಣ
ದಣಿವಾರಿಸಲು ಮಧ್ಯದಲಿದು
ತಂಗುದಾಣ
ಇಲ್ಲಿ ಕೊಟ್ಟು ಕೊಳ್ಳಬೇಕು ಪ್ರೀತಿ
ಪ್ರೇಮ ಮಮತೆ
ಬದಲು ಕೊಳ್ಳುವೆವು ಕೋಪ
ದ್ವೇಷ ಅಸೂಯೆ
ಕಚ್ಚಾಡುವೆವು ನಮ್ಮದಲ್ಲದ
ವಸ್ತುವಿಗಾಗಿ
ಕೊನೆಗೆ ಹೊತ್ತಯ್ಯಲಾಗದೆ
ಬಿಟ್ಟೋಗಲಾಗದೆ ಅನುಭವಿಸುವೆವು
ತ್ರಿಶಂಕುವಿನ ಪಾಡು
ಕೊಳ್ಳಬೇಕಾದುದನೆ ಕೊಂಡರೆ
ಪಯಣವದು ಸುಖವು
ಕರೆದಾಗ ಹೋಗಲು ನಮಗಿಲ್ಲ ಭಯವು
ಶಾಶ್ವತವಲ್ಲವೀ ತಂಗುದಾಣ
ಸರತಿ ಬಂದಾಗ ಮುಂದುವರಿಸಬೇಕು
ನಮ್ಮ ಪಯಣ 

Thursday 7 June 2012


ಕುರುಡು
ನಾನು ಪುಟ್ಟ ಮಗು ಕುರುಡಿ
ಬದುಕ ಬಂಡಿ ಎಳೆಯುತಿಹೆ ಭಿಕ್ಷೆ ಬೇಡಿ
ನಾ ನಿಲ್ಲುವದು ಆ ಶಾಲೆಯ ಇದಿರು
ಯಾಕಂದರೆ ಮಕ್ಕಳು ದಿನಾಲು ಅಲ್ಲಿ ಆಡುವರು
ನಾ ಕೇಳುವೆ ಮಕ್ಕಳಾ ಆಟದ ಸದ್ದು
ನನಗೂ ಅಡುವ ಬಯಕೆ ಮೂಡುವದು
ನಾನು ಕುರುಡಿ ನನಗೆಲ್ಲಿಯ ಶಾಲೆ
ಕಣ್ಣೀರೊರೆಸಲೂ ಯಾರಿಲ್ಲದೆ ಬೆಳೆದ ಬಾಲೆ
ಮಕ್ಕಳ ಕರೆದೊಯ್ಯಲು ಬರುವರು ಅಪ್ಪ ಅಮ್ಮ
ನಾ ಇಲ್ಲಿ ಹೆತ್ತವರಿಗೂ ಬೇಡದ ಒಂಟಿ ಗುಮ್ಮ
ನನಗೆ ಗೊತ್ತು ಮಕ್ಕಳಿಗೆ ನನ್ನೊಡನೆ ಆಟ ಆಡಲು ಆಸೆ
ಅವರಿಲ್ಲಿ ಬಂದು ನೋಡಿದರೆ ನಾ ಕುರುಡಿ ಮತ್ತದೆ ನಿರಾಸೆ
ಮೂಡುವದು ನನ್ನಲ್ಲಿ ಸಾವಿನ ಬಯಕೆ
ಇದರಿಂದ ಶಾಂತಿ ಸಿಗಬಹುದೇನೋ ಮನಕೆ
ಸ್ವರ್ಗದಲ್ಲಾದರೆ ನನ್ನಂತವರಿಗೆ ಕಣ್ಣು ಸಿಗುವದಂತೆ
ನನ್ನ ಕೂಗ ಕೇಳಿಸಿ ಕೊಳ್ಳಲು ಆ ದೇವನಿರುವನಂತೆ   

Wednesday 30 May 2012


ಪಂಜರದ ಗಿಳಿ
ನಾನಿಲ್ಲಿ ಪಂಜರದಾ ಗಿಳಿ ನಲ್ಲಾ
ನಿನ್ನ ಹೃದಯದ ಪಂಜರದಲ್ಲಿ
ನನ್ನ ಬಂಧಿಸಿರುವೆಯಲ್ಲಾ
ಹಾರಬೇಕೆಂದರೂ ಹಾರಲಾರೆ
ಓಡಬೇಕೆಂದರೂ ಓಡಲಾರೆ
ನಿನ್ನ ಪ್ರೇಮ ಪಾಶ ಇಲ್ಲೇ
ಎಳೆದು ತರುವದಲ್ಲಾ
ಇದು ಅಂತಿಂತ ಪಂಜರವಲ್ಲ
ಕಬ್ಬಿಣದಂತೆ ತುಕ್ಕಿಲ್ಲ
ಮಣ್ಣಿನಂತೆ ಅಳಿವಿಲ್ಲ
ಬಣ್ಣಗಳೆಂದು ಮಾಸೋಲ್ಲ
ಇದು ನಿತ್ಯ ನೂತನದ
ಪ್ರೀತಿಯಾ ಪಂಜರ
ನನಗೆ ಬೇಸರವಿಲ್ಲ
ಹೊರಬರಲಾರೆ ನಾನೆಂದು
ಸಿಗುತಿಹುದು ಸುಖ ನೆಮ್ಮದಿ
ಇಲ್ಲಿಯೇ ನನಗಿಂದು
ಆ ದೇವರೇ ನೀಡಿಹನು
ಬೆಡಲೇನಿಲ್ಲ ನನಗಿನ್ನು
ಸ್ವಾತಂತ್ರ್ಯದ ಹುಚ್ಚ್ಯಾಕೆ
ನಿನ್ನ ಪ್ರೀತಿ ಕಾಯುವಾಗ
ಈ ಪಂಜರದ ಗಿಳಿಯನ್ನು
ನನಗನಿಸಿಲ್ಲ ಇದು ಸಂಕೋಲೆ ಎಂದು
ಅರಿತಿಹೆ ನಾ ಇದು ಪ್ರೀತಿಯಾ ಬಂಧವೆಂದು
ಕಾಣುತಿಹೆ ಪ್ರತಿದಿನವೂ ಹೊಸತನ
ನಮ್ಮ ಜೀವನವೇ ಒಂದು ಪ್ರೇಮದಾ ಕವನ
 



ಅಡಿಗೆಯೆಂಬುದೂ ಒಂದು ಕಲೆ
ತಿಳಿದಿರಬೇಕು ರುಚಿಬರಿಸೋ ಗುಟ್ಟಿನಾ ಸೆಲೆ 
ಶುಚಿ ರುಚಿ ಇದ್ದರೆನೆ ಊಟ
ಇಲ್ಲದಿದ್ದರೆ ಹೊಟ್ಟೆಯಲ್ಲಿ ಶುರು ತೊಳಲಾಟ

ಸವಿ ನೆನಪು

ಓ  ನೆನಪೆ ನೀನೊಂದು
ಮಳೆಗಾಲದ ಬಿಸಿಲಂತೆ
ಛಾಪಿಸುವೆ ಮಳೆಬಿಲ್ಲ
ಮನಸಿನಾ ತುಂಬಾ

ಓ ಸವಿ ನೆನಪೆ ನೀನೊಂದು
ಸುರಿವ ಬೆಳದಿಂಗಳಂತೆ
ಕತ್ತಲಲೂ ಮೂಡಿಸುವೆ
ತಂಪಾದ ಬೆಳಕ

ಓ ಸವಿ ನೆನಪೆ ನೀನೊಂದು
ಸುಂದರ ಸಂಗೀತದಂತೆ
ಹೃದಯದ ವೀಣೆಯ ನುಡಿಸಿ
ಬಡಿದೆಬ್ಬಿಸುವೆ ರಾಗ,ಭಾವ

ಓ ಸವಿ ನೆನಪೆ ನೀನೊಂದು
ಹರಿಯುವಾ ನದಿಯಂತೆ
ಧಮನಿ ಧಮನಿಯಲೂ  ನುಸುಳಿ
ಹರಡುವೆ ಮನದ ತುಂಬಾ


Friday 25 May 2012


ನೆನಪು
ನೆನಪೆ ನೀ ಮುತ್ತಬೇಡ
ಕಾರ್ಮೋಡದಂತೆ
ಅದರಿಂದ ಗುಡುಗು ಮಿಂಚುಗಳ
ಸಂಚಾರ ಮನದಲ್ಲಿ
ಮಳೆ,ಪ್ರವಾಹ ಕಣ್ಣಲ್ಲಿ
ನೀ ಕೊಚ್ಚಿ ಹೋಗುವೆ
ಅಸ್ತಿತ್ವ ಕಳೆದುಕೊಂಡು
ನನಗಿಷ್ಟ ನೀನಿರುವುದು
ಹದವಾಗಿ ಮನದಲ್ಲಿ
ಮಿತಿ ಮೀರಿ ಆವರಿಸೆ
ವಿಷವಹುದು ಅಮೃತವೂ
ನೀನಿದಕೆ ಸಹಕರಿಸೆ
ನಡೆವುದು ಮನಸು ಕನಸಿನ
ಸಹ ಬಾಳ್ವೆಯು

Monday 21 May 2012


ಕನಸಿನ ಪಯಣ
ಕನಸಿನಾ ಕುದುರೆಯನೇರಿ ಹೊರಟೆ ನಾ
ದೂರದೂರಿಗೆ ಪಯಣ
ಕೊಂಡೊಯ್ಯುತ್ತ್ತಿದೆ ಶರವೇಗದಿ ನನ್ನ
ಸೇರಿಸಲು ಸುಂದರ ತಾಣ
ಅದೊಂದು ಪುಟ್ಟ ಬಂಗಲೆ
ಹೊರಗೆ ಮೈ ನವಿರೇಳಿಸುವ ಹೂದೋಟ
ಹಕ್ಕಿಗಳ ಚಿಲಿಪಿಲಿ,ಹೂಗಳ ಸುಗಂಧ
ದುಂಬಿಗಳ ಝೇಂಕಾರ ಗಿಡಮರಗಳ ನೃತ್ಯ
ಆಹಾ! ಅದೆಂತಹ ಸುಂದರ ನಯನ ಮನೋಹರ
ನೋಡಿದಷ್ಟು  ತಣಿಯದಾ ದಾಹ

ಬಂಗಲೆಯ ಒಳಹೊಕ್ಕಿ ನೋಡಿದರೆ
ತೆರೆಯಿತೊಂದು ಅದ್ಭುತಲೋಕ
ಕಿಡಕಿಯಿಂದಿಳಿಬಿಟ್ಟ ತಿಳಿಗುಲಾಬಿ ಪರದೆ
ಗಾಳಿಬೀಸಲು ಅಲ್ಲಿ ಬೆಳಕು ನೆರಳಿನ ಆಟ
ಇನ್ನೊಂದುಕಡೆ ಮೆತ್ತನೆಯ ಪಲ್ಲಂಗ
ಸುತ್ತಲೂ ಮಂದಬೆಳಕಿನ ದೀಪ
ಅನಿಸಿತೆನಗೆ ಇದನನುಭವಿಸುವವ
ಎಂತಹ ಪುಣ್ಯವಂತ,ಸಿರಿಸಂಪತ್ತಿನೊಡೆಯ
ನಿಜಕೂ ಭಾಗ್ಯವಂತ

ಬಂದಿತೊಂದು ಆಗ ದಡೂತಿ ದೇಹ ಕಷ್ಟದಲಿ
ಆಡಿತವನ ಕೈ ಪುಟ್ಟ ಪೆಟ್ಟಿಗೆಯ ಮುಚ್ಚಳದಲಿ
ತೆಗೆದ ಮುಷ್ಟಿಯ ತುಂಬಾ ಬಣ್ಣದ ಕಹಿ ಮಾತ್ರೆಯ
ಕಷ್ಟದಿ ನುಂಗಿದ ಆ ರೋಗಗಳ ಮೂಟೆಯೊಡೆಯ
ಅರಿವಾಯಿತೆನಗಾಗ ಸಿರಿವಂತನಾ ಭಾಗ್ಯ
ಕೊಡದಿರು ದೇವರೇ  ಇಂತಹಸೌಭಾಗ್ಯ
ಒಮ್ಮೆಲೆ ನಾ ಬಿದ್ದೆ ಕನಸಿನ ಕುದುರೆಯಿಂದ ಕೆಳಗೆ
ಆದರೆ ನಾ ಬಿದ್ದಿದ್ದು ಮಾತ್ರ ಹಾಸಿಗೆಯಿಂದ ಕೆಳಗೆ  

Saturday 19 May 2012

ಚಿಂತೆ
ಮನಸೇ ಓ ಮನಸೇ
ಹೀಗೇಕೆ ನಿನಗೆ ಚಿಂತೆ
ಚಿಂತೆಗೂ ಚಿತೆಗೂ
ಬರಿ ಒಂದು ಸೊನ್ನೆಯ ಅಂತರವಂತೆ
ಚಿತೆ ದಹಿಸುವದು ದೇಹವನ್ನ
ಚಿಂತೆ ದಹಿಸುವದು ಮನಸ್ಸನ್ನ
ಇಂತಿರುವಾಗ ನಿನಗೇಕೆಬೇಕು
ಸುಡುಗಾಡಿನಾ ಆ ದಾರಿ
ಮರೆತು ಬಾಳಲೇ ಬೇಕು
ಭೂಮಿಯ ಋಣ ತೀರುವ ತನಕ
ನೀನಾಗಿರು ಬಾಳಿಗೆ ಆಭಾರಿ
ಸಮ ಚಿತ್ತತೆ ಕಷ್ಟವೇನಲ್ಲ
ಚಂಚಲತೆ ಪಕ್ವತೆಯ ಲಕ್ಷಣವಲ್ಲ
ಶಾಂತ ಗಂಭೀರ ರಸಗಳೇ ಭೂಷಣ
ಮರೆತರೆ ತೆಗೆದುಕೊಳ್ಳುವದು ನಿನ್ನನ್ನೇ ಆಪೋಷಣ

Wednesday 16 May 2012

ನೀರು ಕಣ್ಣೀರು
ಆರು ತಿಂಗಳು ಕಳೆದರೂ
ಕಾದುಕಾದು ಬೇಸರವಾದರೂ
ಮುಷ್ಕರ ಧರಣಿ ನಡೆಯುತ್ತಿದ್ದರೂ
ಇನ್ನೂ ಯಾಕ ಬರಲಿಲ್ಲವ್ವ
ನಲ್ಲಿಯಲ್ಲಿ ನೀರು
ಭೂ ತಾಯಿ ಬರುಡಾದರೂ
ಪೈರುಗಳೆಲ್ಲ ನಾಶವಾದರೂ
ಹೊಟ್ಟೆಗೆ ಹಿಟ್ಟಿಲ್ಲದಂತಾದರೂ
ಇನ್ನೂ ಯಾಕ ನಿಂತಿಲ್ಲವ್ವ
ಕಣ್ಣಲ್ಲಿ ನೀರು  

Friday 4 May 2012


ಸತ್ಯ
ಹುಡುಕುತಿಹೆ ಹುಡುಕುತಿಹೆ
ನಾ ಸತ್ಯವಾ
ಎಲ್ಲೆಂದು ಹುಡುಕಲಿ,ಹೇಗೆಂದು ಹುಡುಕಲಿ
ಯಾರನ್ನ ಕೇಳಿ ಹುಡುಕಲಿ ನಾ
ಈ ಸುಳ್ಳಿನಾ ಸಂತೆಯಲಿ

ನೋಟಿನಾ ಕಂತೆಯಲಿ ಸಿಕ್ಕಿ ಕಳೆದೋಯ್ತಾ
ರೌಡಿಗಳ ಮಚ್ಚಿಗೆ ಹೆದರಿ ಓಡಿಹೋಯ್ತಾ
ದೇವರ ಹುಂಡಿಯಲಿ ಬಿದ್ದೋಯ್ತಾ
ಎಲ್ಲಿ ಹೋಯಿತೋ ಕಾಣೆ
ಈ ಸುಳ್ಳಿನಾ  ಸಂತೆಯಲಿ

ನ್ಯಾಯ ದೇವತೆಯ ಕಣ್ಣಿನ ಕಪ್ಪು ಪಟ್ಟಿಯಲಿ ಮರೆಯಾಯ್ತಾ
ನ್ಯಾಯವಾದಿಗಳ ಮಾತಿನಾ ಜಾಣ್ಮೆಯಲಿ  ಕೊಚ್ಚಿಹೋಯ್ತಾ
ಮನುಜನ ಆಸೆಯ ದಾಹದಲಿ ಹುದುಗಿ ಹೋಯ್ತಾ
ಎಲ್ಲಿ ಹೋಯಿತೋ ಕಾಣೆ
ಈ ಸುಳ್ಳಿನಾ ಸಂತೆಯಲಿ

ಕಾವಿಬಣ್ಣವ ಕಂಡು ಕರಗಿ ಹೋಯ್ತಾ
ಕಾಖಿ ಬಣ್ಣವ ಕಂಡು ನಿಲ್ಲದಾಯ್ತಾ
ಖಾದಿ ಬಣ್ಣದ ಕದರಿಗೆ ಕಣ್ಮರೆಯಾಗೋಯ್ತಾ
ಎಲ್ಲಿ ಹುಡುಕಿದರೂ ಸಿಗುತ್ತಿಲ್ಲವಣ್ಣಾ
ಸಿಕ್ಕರೆ ತಿಳಿಸಿ ಅಂತಹ ತಾಣವನ್ನಾ



Monday 16 April 2012


ಜೀವನ ಪಯಣ

ಬಾಲ್ಯದಲಿ ಹೇಳಿದರು ಇವಳು ನಿನ್ನವಳು 
ನಿನ್ನವಳಾಗುವ ಆ ಕಾಲ ಬಂದಾಗ
ಎದ್ದಿತೊಂದು ತುಫಾನು ಬದುಕಲ್ಲಿ
ಅದರ ಹೊಡೆತಕೆ ಸಿಲುಕಿ ನಾನೆಲ್ಲೋ ನೀನೆಲ್ಲೋ

ಎದುರಿಸಲು ಧೈರ್ಯ ವಿಲ್ಲವಾಯ್ತು
ಮನದ ಮಾತು ಮೌನಕ್ಕೆ ಶರಣಾಯ್ತು
ದಾರಿಕಾಣದೆ ಹತ್ತಿದೆ ಹಿರಿಯರು ತೋರಿದ ನೌಕೆಯನು
ಹೊತ್ತು ಮನದತುಂಬ ನಿನ್ನ ನೆನಪನ್ನು

ನಿನ್ನ ನೆನಪುಗಳ ಮೂಟೆಗೆ ಬೀಗ ಜಡಿದೆ
ಹೊಸಬದುಕಿಗೆ ನಾ ನಾಂದಿ ಹಾಡಿದೆ
ದಿನಗಳುರುಳುತಿವೆ ಸಂತಸದಲಿ
ಒಮ್ಮೊಮ್ಮೆ ನಿಲ್ಲುವದು ಮನ ಬೀಗಜಡಿದ ಮೂಟೆಯಲಿ

ನನಗಾಗಿ ಕಾದು ಕಾದು ನಿನಗಾಯ್ತು ಬೇಸರ
ನೀರಾಸೆ ವೈರಾಗ್ಯ ತುಂಬಿಕೊಳ್ಳುವಲ್ಲಿ ನೀ ಮಾಡಿದೆ ಅವಸರ
ಅಂತೂ ನಿನ್ನ ಬದುಕಲ್ಲೂ ಬಂತೊಂದು ದಿನ ಶ್ರಾವಣ
ಅರಿವಾಗಿರಬೇಕು ಬದುಕು ಸುಖದುಃಖದ ಹೂರಣ  

ಬದುಕಬೇಕೆಂದುಕೊಂಡೆ ಎಲೆಮೇಲೆ ನೀರು ಜಾರುವಂತೆ
ಅಂಟಿಸಿಕೊಳ್ಳದೆ ನೆನಪುಗಳ  ಈ ಮನಕೆ
ಆದರೂ  ಒಮ್ಮೊಮ್ಮೆ ಆಗುವದು ಮನ ಹತ್ತಿಯಂತೆ
ನೀರನ್ನ ಹೀರಿ ಮುದ್ದೆ ಆಗುವಂತೆ

ಬದುಕೆಂಬುದು ವಿಧಿಸಾಹೇಬನ ಜಟಕಾಬಂಡಿ
ಅದು ಹೋಗದೆಂದು ನಾವು ತೋರಿದ ದಾರಿಯಲಿ
ನಾವೇ ತೂರಿಕೊಳಬೇಕು ಅದು ಕೊಂಡೊಯ್ದ ದಿಕ್ಕಿನಲ್ಲಿ
ನೆಮ್ಮದಿಯ ಬದುಕು ನಮದಾಗುವದು ಬಾಳೆಂಬ ಆಟದಲಿ

Saturday 14 April 2012


ಜೀವನ ತತ್ವ

ಇದ್ದಾಗ ಕಚ್ಚಾಡುವರು ಮೂಜಗ ಒಂದಾಗುವಂತೆ
ಸತ್ತಮೆಲಾರಿಲ್ಲ ಹಾಕುವವರು ಒಂದು ಹಿಡಿ ಮಣ್ಣು
ಹೊತ್ತಯ್ಯಲಾರೆ ನಿನ್ನಜೊತೆ ಸಿರಿಸಂಪತ್ತನ್ನು
ಕ್ಷಣಿಕ ಜೀವನವೆಂದು ಅರಿತೂ ಹಂಚಿ ತಿನ್ನಲಾರೆ
ಇದ್ದಾಗ ಹಂಚಿತಿಂದರೆ ಸತ್ತಾಗ ಬರುವುದು
ನಿನಜೊತೆಗೊಂದು ಒಳ್ಳೆಹೆಸರು
ಏನಿದ್ದರೇನು ಯಾರಿದ್ದರೇನು
ಎಲ್ಲವನು ತೊರೆದು ಎಲ್ಲರೂ ಲೀನವಾಗಲೆ ಬೇಕು  
ಈ ಪಂಚ ಬೂಥದಲೊಂದು ದಿನ 

Sunday 8 April 2012


ಕಳ್ಳ ಬೆಕ್ಕು
ಮನೆಯಲಾರು ಇಲ್ಲದಾಗ
ಹಿತ್ತಲ ಬಾಗಿಲ ಸಂದಿಯಿಂದ
ಕಳ್ಳಬೆಕ್ಕು ಒಳಗೆ ನುಗ್ಗೀ..ತು
ಬಾಗಿಲುಗಳು ಭದ್ರ ಹುಷಾರು

ಜಗಕೆ ಕತ್ತಲು ಕವಿದಾಗ
ಇಲಿಹುಡುಕೋ ನೆಪದಲ್ಲಿ
ಕತ್ತಲಸೀಳಿ ಕಳ್ಳಬೆಕ್ಕು ಬಂದೀ..ತು
ಬಾಗಿಲುಗಳು ಭದ್ರ ಹುಷಾರು

ಹಾಲ ಮೊಸರ ನೆನಪಾಗಿ
ಹೊಂಚು ಹಾಕಿ ಕುಳಿತ್ಕೊಂಡು
ಒಬ್ಬಂಟಿಯಾಗಿರುವಾಗ ಕಳ್ಳಬೆಕ್ಕು ಬಂದೀ..ತು
ಬಾಗಿಲು ಭದ್ರ ಹುಷಾರು

ಕಾಲುಗಳ ಸುತ್ತುತ್ತ ಮೊಗವನ್ನ ಉಜ್ಜುತ್ತ
ನಯ ವಿನಯ ತೋರುತ್ತ
ಕಾರ್ಯಸಾಧನೆಗಾಗಿ ಕಳ್ಳಬೆಕ್ಕು ಬಂದೀ..ತು
ಬಾಗಿಲು ಭದ್ರ ಹುಷಾರು 

Saturday 7 April 2012


ಮಂದಿ
ನಂಬಿ ಕೆಡಬ್ಯಾಡ ಈ ಮಂದೀಯನ್ನ 
ನಂಬೀ ಹೋದರೆ ನಿನ್ನ
ಕೈಬಿಟ್ಟು ಹೋದಾರ ನಡುನೀರಿನ್ಯಾಗ
ನಂಬಿಕೆಯಿದ್ದರ ನಂಬು ಆ ದ್ಯಾವರನ್ನ
ಬಿಡಂಗಿಲ್ಲ ನಿನ್ನ ಕೈಯನ್ನ
ಕರುಣೆ ಬಂದರೆ ಕಾಯ್ದು
ಮರಣ ಬಂದರೆ ಒಯ್ದು
ಕಡೆತನಕ ನೆರಳಂತೆ ಬಂದಾನ
ಆ ಶಿವಗ ಎರಡು ಕೈಯೆತ್ತಿ ನಮಿಸೋಣ   

Wednesday 4 April 2012


ಪ್ರಕೃತಿ

ಹುಣ್ಣಿಮೆ ಇರುಳ್ನಾಗ
ಬಾನ್ಕಡಲಲ್ ಈಜ್ಕೊಂಡು
ಬೆಳದಿಂಗಳನ್ನಾ ಚಲ್ಯಾನ  ಚಂದ್ರಮ
ಜಗವನ್ನೇ ಹಾಲಲ್ಲಿ ತೊಯ್ಸ್ಯಾನ

ಸುಂಯ್ ಸುಂಯ್  ಅನ್ನುತ್ತ
ಪರಪಂಚ ಸುತ್ತುತ್ತ
ಹಿಮದಂತ ತಂಪಾ ಸುರಿಸ್ಯಾನ  ಮಾರುತ
ಗಿಡಮರ್ಗಳಿಗೆ ನೃತ್ಯ ಮಾಡ್ಸ್ಯಾನ

ಇದಕಂಡ ಭೂತಾಯಿ ನಾಚುತ್ತ  
 ಮುಸಿಮುಸಿ ನಕ್ಕೊಂಡು
 ಮಳೆರಾಯ ಎಲ್ಲೆಂದು ಕೇಳ್ಯಾಳ ಆ ತಾಯಿ
ಹುಸಿಕೋಪವನ್ನಾ ತೋರ್ಯಾಳ 

ನೀರೀಕ್ಷೆ
ನೀ ಬರುವಿಯೆಂದು ಕಾಯುತಿಹೆ ಗೆಳೆಯ
ಆದರೆ ನೀನ್ಯಾಕೆ ತಿರುಗಿ ಬರಲಿಲ್ಲ
ಕೇಳದೆ ಇನ್ನೂ ನಿನಗೆ ನನ್ನೆದೆಯ
ಮೌನ ರಾಗ

ಕ್ಷಣ ಕ್ಷಣವೂ ಕುಗ್ಗುತಿದೆ ನಂಬಿಕೆ
ಹತಾಶೆ ಮೂಡುತಿದೆ ನನ್ನ ಮನದಲ್ಲಿ
ಆದರೂ ಬರುವೆಯೆಂಬ ಆಸೆಯಾಬಲೆ
ಹೃದಯದಾ ಮೂಲೆಯಲ್ಲಿ

ಬಂದು ನೀ ಸಂತೈಸುವೆ ನುಡಿದು
ಬಿಡು ನೀ ಹಿಂದಿನಾ  ಚಿಂತೆ
ಸಾಗೋಣ ಧೈರ್ಯದಲಿ ಬಾಳ ನೌಕೆಯಲಿ
ಮುಂದಿಹುದು ನಮಗೆ ಸಂತೋಷದ ಕಂತೆ  




ಕನಸು
ಮಧ್ಯರಾತ್ರಿಯಲಿ ಮನಸಿನ ಕದ ಒಡೆದು
ನೀ ಏಕೆ ಬಂದೆ ನನ್ನೊಳಗೆ
ನೆನಪಿನ ಅಂಗಳದಲಿ ತರಂಗಗಳೆಬ್ಬಿಸಿದೆ
ಮನಸೆಂಬ ಸರೋವರಕೆ ಕಲ್ಲಹೊಡೆದಂತೆ
ಕರುಣೆ ಬಾರದೇ ನನ್ನೀ ತೊಳಲಾಟಕಂಡು

ಮೋಡಿ ಮಾಡುವ ನಿನ್ನ ಈ ನಗುವು 
ನನಗೆ ಪರಿಹಾಸ್ಯ ಮಾಡುವಂತಿದೆ
ದೂಡಿದರೂ ಬಾಗಿಲಲೇ ನಿಂತಿರುವೆ
ಕೈ ಬೀಸಿ ನನ್ನನ್ನೇ  ಬಳಿ ಕರೆಯುತಿಹೆ
ಮನಸ್ಸೆಲ್ಲ ನೀನೆ ಆವರಿಸಿದಂತಿದೆ

ನನಗಿದು ತಿಳಿದಿದೆ ನಿಜವಲ್ಲ ಕನಸೆಂದು
ಎಚ್ಚರ ಗೊಂಡಾಗ ನೀ ಬಳಿ ಇರಲಾರೆ ಎಂದು  
ಆದರೂ ನಾ ನಿನ್ನ ದಾರಿಯನೇ ಕಾಯುತಿಹೆ
ಪ್ರತಿ ಇರುಳು ಚಾತಕದ ಪಕ್ಷಿಯಂತೆ  
ನಿನ್ನ ಮೋಡಿಗೆ ನಾ ಶರಣಾದಂತಿದೆ 

ವಸಂತ
ನೇಸರ ಬರಲು ಬಾನದು ನಾಚಲು
ಕೆಂಪೇರಿದ ಕೆನ್ನೆ
ಜಗ ತೇಲುವದು ರಂಗಿನಲಿ

ಋತುಗಳ ರಾಜ ವಸಂತ ಬರಲು
ತರುವನು ತಾಯಿಗೆ ಹಸಿರುಡಿಗೆ
ಜಗ ತಾ ನಗುವದು ಸಂಬ್ರಮಕೆ

ದುಂಬಿಯ ಗಾನ ಮಂಗಳವಾದ್ಯ
ಹೂವಿನ ಕಂಪೆ ಸುಗಂದ ದ್ರವ್ಯ
ಜಗವೇ ಒಂದು ಮಂಟಪವು

ಕೋಗಿಲೆ ಗಾನಕೆ ನವಿಲಿನ ನೃತ್ಯ
ಋತುರಾಜನ ಸ್ವಾಗತಕೆ
ಜಗವೇ ರಂಗ ಮಂದಿರವು

ಅರಳಿದ ಹೂಗಳು ನಗುತಲಿ ತೂಗಿ
ದುಂಬಿಗಳ ತಾ ಸನಿಹಕೆ ಸೆಳೆಯಲು
ಜಗದಲಿ ಹೊಸಮುನ್ನುಡಿಗೆ ನಾಂದಿಯದು.


ನದಿ
ಓಡುತಿದೆ ನದಿ ಓಡುತಿದೆ
ಗುಡ್ಡ ಬೆಟ್ಟ ಕಣಿವೆಗಳಲಿ ತಾ
ಜಿಗಿಯುತಿದೆ ತಾ ಜಾರುತಿದೆ
ಕಲ್ಲು ಮಣ್ಣು ಕಸ ಕಡ್ಡಿಗಳ
ಪಾಪ ಪುಣ್ಯದ ಮೂಟೆಗಳ 
ಜೊತೆಗೇ ತಾ ಒಯ್ಯುತಿದೆ
ಜಗದ ಕೊಳೆ ತಾ ತೊಳೆಯುತಿದೆ
ಮಂದಗತಿಯಲಿ ಸಾಗುತಿದೆ
ಸಮತಲವಾದ ಮೈದಾನದಲಿ
ದಣಿವನು ಆರಿಸಿ ಮುಗುಳುನಗೆ ಬೀರಿ
ಚಂಗನೆ ಜಿಗಿದು ಜಲಪಾತವನು
ಸೃಷ್ಟಿಸಿದೆ ತಾ ಮೂಕವಿಸ್ಮಿತನಾಗಿಸಿದೆ
ಮೇಲು ಕೀಳಿನ ಬೇದವೆ ಇಲ್ಲದೆ
ಜಾತಿ ಧರ್ಮದ ಗೊಡವೆಗೆ ಹೋಗದೆ
ಎಲ್ಲರಿಗೂ ತಾ ನೀರನು ಹನಿಸಿ
ಸಾಗರ ಸೇರುವ ಗುರಿಯ ಕಡೆ ತಾ
ಧಾವಿಸಿದೆ ಮನದಲಿ ಧನ್ಯತಾ ಭಾವನೆ ಮೂಡಿಸಿದೆ


ಬೇಸಿಗೆ .....
ಜಲಲ ಜಲಲ ಜಲ ಧಾರೆ
ಇಳಿದು ಬಾ ನೀ ಮತ್ತೊಮ್ಮೆ ಧರೆಗೆ
ಇಳೆಯೊಡೆದು ಬೇಡಿಹಳು
ತಣಿಸು ದಾಹವ ದಗೆಯಲಿ
 ದಹಿಸಿ ಹೋಗುವ ಮುನ್ನ

ಬಿರು ಬೇಸಿಗೆ ಹೊಡೆತಕ್ಕೆ
ಮಾಸುತಿದೆ ಹಸಿರುಡುಗೆ
ಉಸಿರಾಗಿ ನೀ ಬಂದು ತೊಡಿಸು
ಹೊಸ ಉಡುಗೆ ಶೃಂಗಾರಕೆ

ಎಲ್ಲೆಲ್ಲೂ ಬಣ ಬಣ ನೀರವತೆ ಬೇಸರ
ಮರೆತಿವೆ ಮ್ರಗಪಕ್ಷಿಗಳು ಲವಲವಿಕೆ ಕಲರವ
ಹೂಗಳೆಲ್ಲಿ ಗಂಧವೆಲ್ಲಿ ಎಲ್ಲವೂ ಮಾಯಾ
ಹೊಸತನದ ನಾಂದಿಗೆ ಬೇಡಿಹೆ ನಿನ್ನ ಸಹಾಯ



ಹುಚ್ಚು
ಆ ಅನಾಥ ಹುಡುಗ ಓಡುತಿದ್ದ ಮನೋವಿಕಲತೆಯಿಂದ ರಸ್ತೆಯಲ್ಲಿ
ನೋಡಿ ಜನ ನಗುತಿದ್ದರು ಕಲ್ಲ ಹಿಡಿದು ಕೈಯಲ್ಲಿ
ಪಾಪ ಅವನಿಗರಿವಿಲ್ಲ ಈ ಜನರ ದುಷ್ಟತನದ ಕಡೆ
ಅವನ ತಪ್ಪೆನುಂಟು ಪರಿವೆಯೇ ಇಲ್ಲ ಅವನಿಗೀ ಜಗದೆಡೆ

ಹುಚ್ಹ ಹುಚ್ಚ ಎಂದು ಜನ ಕೂಗಿದರಲ್ಲಿ
ಯಾರಿಗಿಲ್ಲ ಹೇಳಿ ಹುಚ್ಚು ಈ ಜಗದಲಿ
ಒಬ್ಬನಿಗೆ ಹಣದಹುಚ್ಚು ಇನ್ನೊಬ್ಬನಿಗೆ ಹೆಣ್ಣಿನ ಹುಚ್ಚು
ಮತ್ತಾರಿಗೋ ಮಣ್ಣಿನ ಹುಚ್ಚು ಬಿಟ್ಟಿಲ್ಲ ಯಾರನ್ನು ತರತರದ ಹುಚ್ಚು

ಒಬ್ಬ ಬೀಸಿದ ಕಲ್ಲ ತಾಗಿತು ಅವನ ಹಣೆಗೆ
ರಕ್ತ ತೊಟ್ಟಿಕ್ಕಿತು ಕುಸಿದ ಅವನಲ್ಲಿಗೇ
ಕೇಳುವವರಾರಿಲ್ಲ ಅವನ ಕಣ್ಣೀರ ಗೋಳು
ಎಂತಹ ಕರುಣಾಜನಕ ಅವ ಪಡೆದ ಬಾಳು   
 


ಹುಣ್ಣಿಮೆ ಚಂದಿರ
ಎಂತಹ ಸುಂದರ ಈ ಹುಣ್ಣಿಮೆ ಚಂದಿರ
ಬೆಳ್ಳಿಯ ಬಟ್ಟಲಂತೆತೇಲುತಿಹನು ಆಗಸದಲ್ಲಿ
ಬಿಸಿ ಕೊಡುವ ಬೆಳಕನ್ನೂ ತಂಪಾಗಿಸಿ ಸುರಿಯುತಿಹನು ಹಾಲಿನಂತೆ
ಪ್ರೇಮಿಗಳ ಹೃದಯ ಸಾಮ್ರಾಜ್ಯದಲಿಮೆರೆಯುತಿಹನು ಅಧಿಪತಿಯಂತೆ

ಆ ತಾರೆಗಳೋ ಪಯ್ಪೋಟಿಯಲಿ ನಿಂತಿವೆ ನಿನ್ನ ಸುತ್ತ
ಭೂರಮೆಯು ಮೆರೆಯುವಳು ಸೆಳೆಯಲು ನಿನ್ನ ಚಿತ್ತ
ಆ ಮೋಡಗಳು ನಿನ್ನ  ಜೊತೆ ಹೊರಟಿವೆ ಮೆರವಣಿಗೆಯಂತೆ
ನೀ ಸಾಗುತಿಹೆ ತುಂಬಿಕೊಂಡು ಮೊಗದಲ್ಲಿ ಮಂದಸ್ಮಿತ

ಆ ಸಮುದ್ರವೂ ಕೂಡ ನಿನ ನೋಡಿ ಭೋರ್ಗರೆವುದು
ಆ ನೈದಿಲೆಗಳೋ ನಿನ ನೋಡಿ ಅರಳುವವು
ತಂಗಾಳಿಯೂ ನಿನ ನೋಡಿಯೇ ಬೀಸುವುದು
ಆದರೆ ಅಮಾವಾಸ್ಯೆಗೇಕೆ ನಿನ ಕಂಡರೆ ಕೋಪವು



ಅನುಭವ
ಅರ್ಥವಾಗದ  ಮಂತ್ರಗಳನು ಪಟಿಸುತಲಿ
ಮೆಚ್ಚಲೆತ್ನಿಸಿದೆ  ಆ ಮಾಯಾ ದ್ದಾಡಿ ಮರುರೂಪವ
ಬಿಟ್ಟೆ ನಾ  ನಿತ್ಯ ಕೆಲಸವ
ಮನೆ ಮಕ್ಕಳನು ಶಪಿಸುತಲಿ

ಬಯಸಿದೆ ನಾ ಲೋಕ ಕಲ್ಯಾಣವನು
ಒಬ್ಬನೇ ಜಯಿಸಲೆತ್ನಿಸಿದೆ ಲೋಕವನು
ಗಾಳಿಯೊಡನೆ ಗುದ್ದಾಡಿ ಮರುಗುವ 
ವ್ಯರ್ಥಮಾಡಿದೆ ನಾ ಸಂತಸದ  ಸಮಯವ

ಗೀಚಿದೆ ಆಶು ಕಾವ್ಯಗಳ ಸುರಿಮಳೆ
ಓದದವರ, ಮೂರ್ಖರ  ಮಡಿಲಿಗೆ
ಬೋಳ್ಗಲ್ಲಿಗೆ ಮಳೆಯೆರಚಿದ ಹಾಗೆ
ಚಿಗುರಿತು ಕಾವ್ಯ ರಚಿಸುವ ಕಡೆ ಒಲವು   

ಬರೆದ ಕಾವ್ಯಗಳ ಸಾರಿದೆ ಅಂತರ್ಜಾಲದಲಿ
ಹೆಬ್ಬೆಟ್ಟು ಚಿನ್ನೆ ಬಂತು ಮುಖಪುಸ್ಥಕದಲಿ
ವಿಮರ್ಶೆಗಳ ನೋಡಿದಾಗ ಮೂಡಿತು ಗೆಲುವು
ಯಾರೊಬ್ಬರು ತೊಡಿಸಲಿಲ್ಲ ಉಡುಗೊರೆಯ ಕೈಬಳೆ


ತೊಳಲಾಟ

ನನ್ನೆದೆಯ ಗೂಡಲ್ಲಿ ಬೆಚ್ಚಗೆ ಕುಳಿತಿರುವೆ ನೀನು
ಎಸ್ಟೆ ಪ್ರಯತ್ನಿಸಿದರು ಹೊರಗಟ್ಟುವಲ್ಲಿ ಸೋಲುತಿಹೆ ನಾನು
ಉಳಿಸಿಕೊಳಲೋ,ಕಳುಹಿಸಿಬಿಡಲೋ ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ ............ಇದು  ಏನು

ಮರೆತುಬಿಡು ಎಲ್ಲವನು ಎನ್ನುತಿದೆ ಮನವು
ಮರೆಯಲಾರೆನು ಎಂದು ಕೂಗುತಿದೆ ಹೃದಯವು
ಕೇಳಲಾರಮಾತನ್ನು ನಾನು ,ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ ..............ಇದು ಏನು 

ನೆನಪುಗಳು ಚುಚ್ಚಿ ಚುಚ್ಚಿ ಕಾಡುತಿದೆ
ವಿವೇಕ ವಾಸ್ತವತೆಯ ಎತ್ತಿತೋರುತಿದೆ
ನಾನಾವುದನಾರಿಸಲಿ ,ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ .............ಇದು ಏನು

ಇದು ಪ್ರೀತಿಯೋ ಇಲ್ಲಾ ಹುಚ್ಚು ಬ್ರಮೆಯೋ
ಇದು ಕನಸೋ ಇಲ್ಲಾ ನನಸೋ
ಹುಡುಕುತಿಹೆ ಉತ್ತರವ ,ದ್ವಂದ್ವದಲಿ ತೊಳಲುತಿಹೆ
ಅರಿಯಲಾರದೆ ಹೋದೆ............ಇದು ಏನು





ಅಜ್ಜನ ಸಂಚಿ

ನನ್ನನ್ನು ಕರೆಯುವರು ಅಜ್ಜನ ಸಂಚಿ
ಬದುಕು ಸಾಗಿಸುತ್ತಿದ್ದೆ  ತಾಂಬೂಲ ಹಂಚಿ
ತುಂಬುತ್ತಿದ್ದರು ನನ್ನ ಒಡಲಲ್ಲಿ ಎಲೆ ಅಡಿಕೆ ಸುಣ್ಣ
ತಾಂಬೂಲ ಪ್ರಿಯರು ಹಾಕುತಿದ್ದರು ನನ್ನ ಮೇಲೆ ಕಣ್ಣ

ಹೇಳಿಕೊಳ್ಳುವಂತ ಸೌಂದರ್ಯ ನನ್ನದಲ್ಲ
ಹಾಗಂತ ಕುರೂಪಿಗಳ ಸಾಲಲ್ಲಿ ನಾ ನಿಂತಿಲ್ಲ
ನನ್ನ ಬಣ್ಣ ಕಾಕಿ ಆದರೇನಂತೆ
ಅದು ದೇಶ ಕಾಯೊ ರಕ್ಷಕರ ಉಡುಪಿನ ಬಣ್ಣ ವಂತೆ

ಎಲ್ಲೇ ಹೋದರು ನಾ ಇರುತ್ತಿದ್ದೆ  ಅವರ ಜೊತೆಯಲ್ಲಿ
ಯಾವಾಗಲು ಇರುತಿತ್ತು ನಾ ಕೊಟ್ಟ ಎಲೆ ಅಡಿಕೆ ಅವರ ಬಾಯಲ್ಲಿ
ಆಗಾಗ ಸವರುತ್ತಿದ್ದರು ನನ್ನನ್ನು ಪ್ರೀತಿಯಿಂದ
ಕಾಪಾಡುತ್ತಿದ್ದರು ನನ್ನ ಅಷ್ಟೇ  ಜತನದಿಂದ

ಊಟ ತಿಂಡಿಯಾದರು ಬಿಡಬಹುದು ನಮ್ಮಜ್ಜ
ನನ್ನ ಬಿಟ್ಟು ಬದುಕಲಾರರು ಅನ್ನೋದು ಅಷ್ಟೇ ನಿಜ
ಯಾರಿಗುಂಟು ಯಾರಿಗಿಲ್ಲ ಇಂತಹ ಬಾಗ್ಯ
ಅಜ್ಜನ ಸೇವೆಯೇ ನನ್ನ ಜೀವನದ ಸೌಭಾಗ್ಯ

ಅಜ್ಜ ಮಲಗಿದರು ಒಂದು ದಿನ ಹಿಡಿದು ರೋಗ
ನಿಂತೆ ಹೋಯಿತು ಪಾಪ ಅವರ ತಾಂಬೂಲದ  ವೈಭೋಗ
ತಿನ್ನದಿದ್ದರೆ ಅವರು ಅನುದಿನ ತಾಂಬುಲ
ಇರುತಿದ್ದರೇನೊ ಇನ್ನು ಸ್ವಲ್ಪ ದಿನ ಎನ್ನೋ ಹಂಬಲ

ನನಗೂ ಅಜ್ಜನಿಗೂ ಅವಿನಾಭಾವ ಸಂಬಂಧ
ಆ ದೇವರಿಗೇ ಗೊತ್ತು ಇದು ಯಾವ ಜನ್ಮದ ಅನುಭಂದ
ಅಜ್ಜನಿಲ್ಲದ ನಾನು ದಿಕ್ಕಿಲ್ಲದ ಅನಾಥ
ನೇಲುತಿಹೆ ಗೂಟದಲಿ ಅಜ್ಜನ ನೆನಪಲ್ಲಿ ಅಳುತ



ನನ್ನ ಮುದ್ದಿನ  ನಾಯಿಗಳು

ಕುಬ್ಜ ದೇಹದ, ಸೊಟ್ಟ ಬಾಲದ, ಕಪ್ಪು ಬಣ್ಣದ ನಾಯಿ
ಇದರ ಹೆಸರು ರೂಬಿ
ಪಕ್ಕದಲ್ಲಿ ನಿಂತಿರುವಳು ಸಕಿ  ಕೆಂಪು ಬಣ್ಣದಲಿ
ಇದರ ಹೆಸರು  ಪಿಲ್ಲಿ

ಜಯ ವಿಜಯಯರಂತೆ  ನಿಲ್ಲುವರು ಬಾಗಿಲಲ್ಲಿ
ಬಂದವರು ಮುಂದಡಿಯಿಡಲಾರದೆ ನಿಲ್ಲಲೇ ಬೇಕು ಅಲ್ಲಿ
ಒಳ ಬರಬೇಕೆಂದರೆ ಬೇಕು ಇವರ ಅಪ್ಪಣೆ
ಒಡೆಯನ ಸೇವೆಯಲಿ ಮರೆಯುವದು ಕಷ್ಟಕಾರ್ಪಣೆ

ಮಾಡುವುದು ಒಮ್ಮೊಮ್ಮೆ ತುಂತಾಟದ ಅತಿರೇಕ
ನೋಡಿದವರಿಗನಿಸುವುದು ಇವು  ಅಮಾಯಕ
ಇವಕೆ ಬಯ್ದರೆ ಸಾಕು ಮಾದುವವು ಉಪವಾಸ
ತಿಂಡಿ ತಿನಿಸಲು ಮಾಡ ಬೇಕು ನಾವು ಹರ ಸಾಹಸ

ಇವಕೂ ಅಂಟಿದೆ ಕಾರಲ್ಲಿ ತಿರುಗುವ ಗೀಳು
ಬಿಟ್ಟು ಹೋದರೆ ಸಾಕು ದಿನವೆಲ್ಲ ಅಳುವಿನ ಗೋಳು
ಮುದ್ದು ಮಾಡಿದರೆ ಸಾಕು ಮೈಯನ್ನು ತಿಕ್ಕಿ
ಬಾಲ ಆಡಿಸಿ ತೋರಿಸಿರುವವು ಪ್ರೀತಿಯನು ಕಾಲು ನೆಕ್ಕಿ

ಜಂಪ್ ಅಂದರೆ  ಹಾರುವವು,
ಔಟ್ ಅಂದರೆ ಹೊರಗೆ ಓಡುವವು
ಎಟಾಕ್ ಅಂದರೆ ಮುನ್ನುಗ್ಗುವವು
ಇವಕೂ  ಆಂಗ್ಲ ಭಾಷೆಯ ಮೋಹವು

ದಿನ ಕಳೆಯುವವು ಮನೆ ಕಾಯುವ ಕೆಲಸದಲಿ 
ಸಹಾಯಕ್ಕೆ ಬರುವವು  ಇವೇ ಅಪಾಯದಲಿ
ನಿಸಂಶಯದಿ ನಂಬುವವು ಒಡೆಯನೇ ಸರ್ವಸ್ವೆಂದು
ಅದಕ್ಕೆಂದೇ ಹೇಳುವರು ನಂಬಿಕೆಗೆ ಪರ್ಯಾಯ ನಾಯಿಯೆಂದು  


ಓ ಮನಸೇ

ಓಡಬೇಡ ಓ ಮನಸೇ ಹಗಲುಗನಸುಗಳ ಹಿಂದೆ
ಮುನ್ನುಗ್ಗು ದೈರ್ಯದಿ ಬದುಕಿನ ಹಾದಿಯಲಿ ಮುಂದೆ
ಹಾಕಿಕೊ ನಿನಗೆ ನೀ ಕುದುರೆ ಲಗಾಮು
ಹಚ್ಚಿಕೊ ಜೊತೆಗೆ ವಾಸ್ತವತೆಯ ಮುಲಾಮು

ಬಣ್ಣದಲಿ ಮೂಡುವ ಕನಸೆಲ್ಲ ನಿಜವಲ್ಲ
ಬಯಸಿದಂತೆ ಜಗ ನಡೆಯಲೆಂಬುದು ತರವಲ್ಲ
ಅವಸರಿಸಿದರೆ ಬದುಕೊಂದು ಕಗ್ಗಂಟಿನ ಮಜಲು
ತಾಳ್ಮೆಯಲಿ ಬಿಡಿಸು ನೀ ಒಂದೊಂದು ಗೋಜಲು

ಪರರ ಮಾತಿಗೆ ನೀ ದ್ರುಥಿಗೆಡಬೇಡ
ಗೆಲುವು ಬೇಕೆಂದರೆ ಸಾಧನೆಯ ಬಿಡಬೇಡ
ಗುರಿಯ ಕಡೆಗೇ ಇರಲಿ ನಿನಗೆಂದು ಛಲ
ಯಾವದೇ ಸ್ಥಿತಿಯಲು ಆಗಬೇಡ ವಿಚಲ

ಬಲಿಯಾಗದಿರು ಎಂದೂ ಅವಸರದ ನಿರ್ಣಯಕೆ
ಅದರಿಂದ ಕುಸಿಯಬೇಡ ನೀ ಪಾಥಾಳಕೆ
ಕಾಯ್ದುಕೊಳಲೇ ಬೇಕು ಎಂದಿಗೂ ಸ್ಥಿರತೆ
ಇದು ಸುಳ್ಳಲ್ಲ ಎಂದಿಗೂ ಸತ್ಯಮೇವ ಜಯತೆ .